ಶಾಲೆಗಳಲ್ಲಿ ಅಗ್ನಿ ಸುರಕ್ಷತೆ: ವಸೂಲಿಗೆ ಹೊಸ ಮಾರ್ಗ ಎಂದ ಕ್ಯಾಮ್ಸ್ ಶಶಿಕುಮಾರ್
ಬೆಂಗಳೂರು, ಜೂ. 21: ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಕ್ರಮ ಅಳವಡಿಸುವ ಸಂಬಂಧ ಶಾಲೆಗಳಲ್ಲಿ ತಪಾಸಣೆ ನಡೆಸಿ ಸಲಹಾ ಸಮಾಪನಾ ಪತ್ರ ನೀಡುವಂತೆ ಒಳಾಡಳಿತ ಇಲಾಖೆ ಆದೇಶಿಸಿದೆ.
"2018ಕ್ಕಿಂತಲೂ ಮೊದಲು ಆರಂಭವಾಗಿರುವ ಶಾಲೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳುವ ಸಂಬಂಧ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ ಪ್ರಸ್ತಾಪಕ್ಕೆ ಸರ್ಕಾರ ಮಾನ್ಯತೆ ನೀಡಿಲ್ಲ. ಅಗ್ನಿ ಸುರಕ್ಷತೆ ಹೆಸರಿನಲ್ಲಿ ವಸೂಲಿ ಮಾಡಲು ಶಿಕ್ಷಣ ಇಲಾಖೆ ಹಲವು ಇಲಾಖೆಗಳನ್ನು ಜತೆ ಗೂಡಿಸಿಕೊಂಡಿದೆ. ಅಗ್ನಿ ಸುರಕ್ಷತೆ ಬಗ್ಗೆ ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪನ್ನು ಉಲ್ಲೇಖಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಕೈಗೊಳ್ಳಬೇಕಾದ ಅಗ್ನಿ ಸುರಕ್ಷತೆ ಕ್ರಮ ಹಾಗೂ 2018 ಕ್ಕಿಂತಲೂ ಮೊದಲು ಅರಂಭವಾಗಿರುವ ಶಾಲೆಗಳಲ್ಲಿ ಕನಿಷ್ಠ ಅಗ್ನಿ ಸುರಕ್ಷತಾ ನಿಯಮ ಕುರಿತು ಸಮಿತಿ ರಚಿಸಿ ನೀತಿ ರೂಪಿಸುವಂತೆ ಕೋರಲಾಗಿತ್ತು. ಇದ್ಯಾವುದನ್ನೂ ಪರಿಗಣಿಸದೇ ಅಗ್ನಿ ಸುರಕ್ಷತೆ ಹೆಸರಿನಲ್ಲಿ ವಸೂಲಿ ಹಾದಿ ಹುಟ್ಟು ಹಾಕಲಾಗಿದೆ," ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಪ್ರಕಾರ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಕಳೆದ ಎರಡು ವರ್ಷದಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಅಗ್ನಿ ಸುರಕ್ಷತಾ ನಿಯಮ ಅಳವಡಿಕೆ ಸಂಬಂಧ ಖಾಸಗಿ ಆಡಳಿತ ಮಂಡಳಿ ಮತ್ತು ಸರ್ಕಾರದ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇತ್ತು. 2018 ಕ್ಕಿಂತಲೂ ಮೊದಲು ಆರಂಭವಾಗಿರುವ ಹಳೇ ಶಾಲೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತೆ ನಿಯಮ ಅಳವಡಿಕೆ ಸಂಬಂಧ ಪ್ರತ್ಯೇಕ ನೀತಿ ಜಾರಿಗೆ ತರುವಂತೆ ಖಾಸಗಿ ಆಡಳಿತ ಮಂಡಳಿಗಳ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ತೆರೆ ಮರೆಗೆ ಸರೆದಿದ್ದ ಅಗ್ನಿ ಸುರಕ್ಷತೆ ವಿವಾದ ಇದೀಗ ಪುನಃ ಹೊಸ ಅವತಾರ ತಾಳಿ ಹೊರ ಬಿದ್ದಿದೆ.
ಅಗ್ನಿ ಶಾಮಕ ಠಾಣಾಧಿಕಾರಿಗಳಿಗೆ ಅಧಿಕಾರ:
ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆ ಅಗ್ನಿ ಶಾಮಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಕಟ್ಟಡಗಳು (15 ಮೀಟರ್ ಗಿಂತ ಕಡಿಮೆ ಎತ್ತರದ ಶಾಲಾ ಕಟ್ಟಡಗಳ) ತಪಾಸಣೆ ನಡೆಸಿ ಸಲಹಾ ಸಮಾಪನ ಪತ್ರವನ್ನು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು ಸಲ್ಲಿಸುವ ನಿರೀಕ್ಷಣಾ ವರದಿ ಪರಿಶೀಲಿಸಿ ನಿಗಧಿತ ಶುಲ್ಕ ಪಾವತಿಸಿ ಶಾಲಾ ಮಂಡಳಿಗಳಿಗೆ ಸಲಹಾ ಸಮಾಪನ ಪತ್ರ ವಿತರಿಸುವ ಅಧಿಕಾರ ನೀಡಲಾಗಿದೆ ಎಂದು ಒಳಾಡಳಿತ ಇಲಾಖೆ ಆದೇಶಿಸಿದೆ. ಈ ಆದೇಶ ಹೊರ ಬೀಳುತ್ತಿದ್ದಂತೆ ಇದೀಗ ಶಾಲಾ ಕಾಲೇಜುಗಳ ತಪಾಸಣೆಗೆ ಅಗ್ನಿ ಶಾಮಕ ಅಧಿಕಾರಿಗಳಿಗೆ ಅಧಿಕಾರ ಸಿಕ್ಕಿದ್ದು, ಶೀಘ್ರದಲ್ಲಿಯೇ ತಪಾಸಣೆ ಆರಂಭಿಸಲಿದ್ದಾರೆ.
ಶುಲ್ಕ, ಮಾಮೂಲಿ ಜತೆಗೆ ಉಪಕರಣ ಅಳವಡಿಕೆ:
ಶಾಲಾ ಕಾಲೇಜುಗಳಿಗೆ ಅಗ್ನಿ ಸುರಕ್ಷತಾ ನಿಯಮ ಅಳವಡಿಕೆ ಅತ್ಯಗತ್ಯ. ಆದರೆ ಹದಿನೈದು ಮೀಟರ್ ಗಿಂತಲೂ ಕಡಿಮೆ ಎತ್ತರ ಇರುವ ಶಾಲಾ ಕಟ್ಟಡಗಳು, ಹಾಗೂ 2018 ಕ್ಕಿಂತಲೂ ಮೊದಲೇ ಆರಂಭವಾಗಿರುವ ಶಾಲೆಗಳಲ್ಲಿ ಕನಿಷ್ಠ ಅಗ್ನಿ ಸುರಕ್ಷತಾ ನಿಯಮ ಅಳವಡಿಕೆಗೆ ಅವಕಾಶ ಕೊಡಬೇಕು, ಈ ಕುರಿತ ಪ್ರತ್ಯೇಕ ನಿಯಮ ರೂಪಿಸುವ ಪ್ರಸ್ತಾಪ ನನೆಗುದಿಗೆ ಬಿದ್ದಿದೆ. ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೇ ಅಗ್ನಿ ಶಾಮಕ ಅಧಿಕಾರಿಗಳಿಗೆ ಸಲಹಾ ಸಮಾಪನ ಪತ್ರ ನೀಡುವ ಅಧಿಕಾರ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಕೊರೊನಾ ಸಂಕಷ್ಟಕ್ಕೆ ತತ್ತರಿಸಿರುವ ಶಾಲೆಗಳಿಗೆ ಅಗ್ನಿ ಶಾಮಕ ಅಧಿಕಾರಿಗಳು ಮಾಡುವ ಶಿಫಾರಸು ಕಷ್ಟ ಸಾಧ್ಯ. ಶಾಲಾ ಕಟ್ಟಡ ತಪಾಸಣೆಗೆ ಶುಲ್ಕ ಪಾವತಿ, ಜತೆಗೆ ಒಂದಷ್ಟು ಮಾಮೂಲಿ, ಸಲಹಾ ಸಮಾಪನಾ ಪತ್ರ ಪಡೆದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಗ್ನಿಶಾಮಕ ಉಪಕರಣ ಹಾಕುವ ಶಕ್ತಿ ಬಹುತೇಕ ಶಾಲೆಗಳಿಗೆ ಸಾಧ್ಯವಾಗಲ್ಲ. ಇನ್ನು ಸರ್ಕಾರಿ ಶಾಲೆಗಳಿಗೆ ಅಗ್ನಿ ಸುರಕ್ಷತಾ ನಿಯಮ ಅಳವಡಿಸಲು ಸಾವಿರಾರು ಕೋಟಿ ರೂ. ಬೇಕು. ಈ ಎಲ್ಲಾ ವಾಸ್ತವಗಳನ್ನು ಅರಿತು ಸುಪ್ರೀಕೋರ್ಟ್ ಆದೇಶದಂತೆ ಕನಿಷ್ಠ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡದೇ ವಸೂಲಿ ಹಾದಿ ಸೃಷ್ಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ನವೀಕರಣ ಮಾಡುವುದಿಲ್ಲ
ಇನ್ನು ಸುಪ್ರೀಂಕೋರ್ಟ್ ತೀರ್ಪು ಮುಂದಿಟ್ಟು, ಶಾಲೆಗಳ ಅಗ್ನಿ ಸುರಕ್ಷತೆ ಬಗ್ಗೆ ವಾಸ್ತವ ನೆಲೆಗಟ್ಟಿನಲ್ಲಿ ನೀತಿ ರೂಪಿಸಿ ಜಾರಿಗೆ ತರಬೇಕಿದ್ದ ಶಿಕ್ಷಣ ಇಲಾಖೆ ಇದೀಗ ಅಗ್ನಿ ಸುರಕ್ಷತೆಯನ್ನು ಪೊಲೀಸ್ ಇಲಾಖೆಗೆ ಕೈಗಿಟ್ಟು ದೂರ ಸರಿದಿದೆ. ಆದ್ರೆ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಇಲ್ಲದಿದ್ದರೆ ಶಾಲೆಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ. ಹೀಗಾಗಿ ಮಧ್ಯಮ ವರ್ಗದ ಶಾಲೆಗಳಿಗೆ ಭಾರಿ ಪೆಟ್ಟು ಬೀಳಲಿದೆ ಎಂಬ ಮಾತು ಶಿಕ್ಷಣ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕನಿಷ್ಠ ಅಗ್ನಿ ಸುರಕ್ಷತಾ ನಿಯಮ ರೂಪಿಸದೇ ಅಗ್ನಿ ಸುರಕ್ಷತಾ ಸಲಹಾ ಪ್ರಮಾಣ ಪತ್ರ ನೀಡುವ ಅಧಿಕಾರ ಅಗ್ನಿ ಶಾಮಕ ಇಲಾಖೆಗೆ ನೀಡಿ ಆದೇಶಿಸಿರುವುದು ಆಡಳಿತ ಮ ಮಂಡಳಿಗಳ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ. ಮಾತ್ರವಲ್ಲ ಐಎಎಸ್ ಅಧಿಕಾರಿಗಳ ಆಂತರಿಕ ಬಾಂಧವ್ಯ ಹೊಸ ಸುಲಿಗೆಗೆ ನಾಂದಿ ಹಾಡಲಿದೆ ಎಂದೇ ಹೇಳಲಾಗುತ್ತಿದೆ.
ಶಾಲಾ ಆಡಳಿತ ಮಂಡಳಿಗಳ ಮನವಿ:
ಸರ್ಕಾರಿ ಹಾಗೂ 2018ಕ್ಕಿಂತಲೂ ಮೊದಲೇ ಪ್ರಾರಂಭವಾಗಿರುವ ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ನಿಯಮ ಬಗ್ಗೆ ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೆವು. ಹೊಸದಾಗಿ ಆರಂಭವಾಗುವ ಶಾಲೆಗಳಿಗೆ ಅನ್ವಯಿಸುವ ನಿಯಮಗಳನ್ನು ಹಳೇ ಶಾಲೆಗಳಿಗೆ ಅನ್ವಯ ಆಗದಂತೆ ಕನಿಷ್ಠ ಅಗ್ನಿ ಸುರಕ್ಷತಾ ನಿಯಮಗಳ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು. ಈ ಕುರಿತ ಪ್ರತ್ಯೇಕ ನಿಯಮ ರೂಪಿಸುವಂತೆ ಮನವಿ ಮಾಡಿದ್ದೆವು. ಇದಕ್ಕೆ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಈಗ ಹೊರಡಿಸಿರುವ ಆದೇಶದಲ್ಲಿ ಅದರ ಬಗ್ಗೆ ಸ್ಪಷ್ಟತೆ ಇಲ್ಲ. ಸರ್ಕಾರದ ಈ ಆದೇಶ ಇತರೆ ಇಲಾಖೆಗಳು ಶಿಕ್ಷಣ ಸಂಸ್ಥೆಗಳಿಂದ ವಸೂಲಿ ಮಾಡಲು ಹಾದಿ ಮಾಡಿಕೊಟ್ಟಂತಿದೆ. ಈ ಆದೇಶ ವಾಸ್ತವ ನೆಲೆಗಟ್ಟಿನಲ್ಲಿ ಮಾಡಿಲ್ಲ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
Recommended Video
ಕ್ಯಾಮ್ಸ್ ಮನವಿಯಲ್ಲಿ ಏನಿದೆ?
ಖಾಸಗಿ ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳ ಅಗ್ನಿ ಸುರಕ್ಷತೆ ಸಂಬಂಧ ಸವೋಚ್ಛ ನ್ಯಾಯಾಲಯ ತೀರ್ಪಿನ ಅನ್ವಯ ಹೊಸ ಶಾಲೆಗಳಿಗೆ ಅನ್ವಯ ವಾಗುವ ನಿಯಮಗಳನ್ನು ಯಥಾವತ್ತಾಗಿ ಹಳೇ ಶಾಲೆಗಳಿಗೆ ವಿಧಿಸುವುದು ಸರಿಯಲ್ಲ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನಿಷ್ಠ ಅಗ್ನಿ ಸುರಕ್ಷತಾ ನಿಯಮ ಅಳವಡಿಕೆಗೆ ನಿಯಮ ರಚಿಸಲು ಕ್ಯಾಮ್ಸ್ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪು, ಶಾಲೆಗಳ ಅಗ್ನಿ ಸುರಕ್ಷತೆ, ಸುರಕ್ಷತಾ ನಿಯಯಮಗಳ ರೂಪರೇಷಗಳನ್ನು ಸಹ ನೀಡಿತ್ತು. ಕರ್ನಾಟಕ ರಾಜ್ಯ ಮಕ್ಕಳ ನೀತಿ ಹಾಗೂ ಮಕ್ಕಳ ಸುರಕ್ಷತಾ ನಿಯಮ ಅನ್ವಯ ಹದಿನೈದು ಅಗ್ನಿ ಸುರಕ್ಷತಾ ನಿಯಮ ಪ್ರಸ್ತಾಪಿಸಿತ್ತು. ಆದ್ರೆ ಈಗ ಒಳಾಡಳಿತ ಹೊರಡಿಸಿರುವ ಆದೇಶದಲ್ಲಿ ಇದ್ಯಾವುದರ ಬಗ್ಗೆ ಸ್ಪಷ್ಟತೆ ಇಲ್ಲದೇ ಶಾಲೆಗಳ ತಪಾಸಣೆ ನಡಿಸಿ ಸಲಹಾ ಸಮಾಪನಾ ಪತ್ರ ನೀಡಲು ಅಧಿಕಾರ ನೀಡಲಾಗಿದೆ. ಇದು ಶಿಕ್ಷಣ ರಂಗದಲ್ಲಿ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.