ಎಲೆಕ್ಷನ್ ಡ್ಯೂಟಿ: ಗೌರವ ಧನ ಹೆಚ್ಚಳ
ಬೆಂಗಳೂರು, ಮೇ 26: ಚುನಾವಣೆ ವೇಳೆ ಕಾರ್ಯನಿರ್ವಹಿಸುವ ಸರ್ಕಾರ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಂಭಾವನೆಯನ್ನು ಸರ್ಕಾರ ಹೆಚ್ಚಳ ಮಾಡಿದೆ.
ಚುನಾವಣಾ ಆಯೋಗದ ಕೆಲಸಗಳನ್ನು ಮಾಡುವಾಗ ಇದಕ್ಕೆ ಪ್ರತಿಯಾಗಿ ನೀಡುವ ಸಂಭಾವನೆ ಕಡಿಮೆ ಎಂಬ ದೂರುಗಳಿತ್ತು, ಇದರ ಫಲವಾಗಿ ಹಾಲಿ ಪಾವತಿ ಮಾಡುತ್ತಿರುವ ದರದಲ್ಲಿ ಪರಿಷ್ಕರಣೆ ಮಾಡಿರುವುದು ಅಧಿಕಾರಿಗಳ ಸಂತೋಷಕ್ಕೆ ಕಾರಣವಾಗಿದೆ.
ಜಯನಗರ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿ.ಎನ್.ಪ್ರಹ್ಲಾದ್
ಭಾರತ ಚುನಾವಣಾ ಆಯೋಗವು 2014ರ ಫೆ.28ರಂದು ನಿರ್ದೇಶನ ನೀಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಅನೇಕ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಸಂಭಾವನೆಯನ್ನು ಪರಿಷ್ಕರಿಸಿ ಗೌರವ ಸಂಭಾವನೆ ಪಾವತಿಸಲು ಸೂಚಿಸಿತ್ತು.
ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರು ಪತ್ರ ಬರೆದು ಚುನಾವಣಾ ಕರ್ತವ್ಯದಲ್ಲಿ ಚಾಲಕರಿಗೆ ನೀಡುತ್ತಿರುವ ದಿನಭತ್ಯೆಯನ್ನು 175 ರೂ.ಗಳಿಂದ ಇಂದಿನ ಬೆಲೆ ಸೂಚ್ಯಂಕಗಳ ಹೆಚ್ಚಳವನ್ನು ಪರಿಗಣಿಸಿ ಪರಿಷ್ಕರಿಸುವಂತೆ ಮನವಿ ಮಾಡಲಾಗಿತ್ತು.
ಈ ಕುರಿತು ಕೋಲಾರ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಏ.23ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇತ್ತೀಚಿನ ಸೂಚ್ಯಂಕಗಳ ಅನುಗುಣವಾಗಿ ಗೌರವ ಸಂಭಾವನೆಯ ದರಗಳನ್ನು ಪರಿಷ್ಕರಿಸುವುದು ಅಗತ್ಯವೆಂದು ರಾಜ್ಯ ಸರ್ಕಾಋ ಗೌರವ ಧನ ಸಂಭಾವನೆಯ ದರ ಪರಿಷ್ಕರಿಸಿ ಮೇ 24ರಂದು ಆದೇಶ ಹೊರಡಿಸಿದೆ.
ಸಂಚಾರಿ ಜಾಗೃತಾದಳಕ್ಕೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳಿಗೆ ಮೂವತ್ತು ದಿನಗಳ ಭತ್ಯೆಯನ್ನು 1200 ರೂ.ನಿಂದ 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಚುನಾವಣಾ ದಿನ, ಮತ ಎಣಿಕೆ ದಿನ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಲ್ಲಿ ಮತಗಟ್ಟೆ ಅಧಿಕಾರಿ ಮತ್ತು ಎಣಿಕೆ ಮೇಲ್ವಿಚಾರಕ ಭತ್ಯೆಯನ್ನು 350 ರೂ ನಿಂದ 500 ರೂ.ಗಳಿಗೆ ಹೆಚ್ಚಿಸಲಾಗಿದೆ.
ಪೋಲಿಂಗ್ ಆಫೀಸರ್ , ಎಣಿಕೆ ಸಹಾಯಕರಿಗೆ 250 ರೂನಿಂದ 350 ರೂಗೆ, ಮೈಕ್ರೋ ಅಬ್ಸರ್ವರ್ ಗಳಿಗೆ 1 ಸಾವಿರದಿಂದ 1500 ರೂ.ಬೂತ್ ಮಟ್ಟದ ಅಧಿಕಾರಿಗಳಿಗೆ 350 ರೂ, ಗ್ರೂಪ್ ಡಿ ನೌಕರರಿಗೆ 150 ರೂ,ಗಳಿಂದ 200 ರೂಗಳಿಗೆ ಏರಿಕೆ ಮಾಡಲಾಗಿದೆ. ವೆಚ್ಚ ನಿರ್ವಹಣಾ ಸಮಿತಿಗಳಿಗೆ ಅವರು ಕರ್ತವ್ಯ ನಿರ್ವಹಿಸಿದ 30 ದಿನಗಳಿಗೆ ನೀಡುವ ಗೌರವ ಧನವನ್ನು ಇನ್ನೂ ಹೆಚ್ಚಿಸಲಾಗಿದೆ.