ಅಶಕ್ತ ಹಿರಿಯರ ರಕ್ಷಣೆಗೆ ಸರ್ಕಾರ ಕಟಿಬದ್ಧ : ಸಿದ್ದು
ಬೆಂಗಳೂರು, ಅ. 1 : ರಾಜ್ಯದಲ್ಲಿ ಅಶಕ್ತ ಹಿರಿಯರ ರಕ್ಷಣೆಗೆ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ರಾಜ್ಯದ 27 ಜಿಲ್ಲೆಗಳಲ್ಲಿರುವ ಸರ್ಕಾರಿ ವೃದ್ಧಾಶ್ರಮಗಳನ್ನು ಇನ್ನುಳಿದ ಮೂರು ಜಿಲ್ಲೆಗಳಿಗೆ ವಿಸ್ತರಿಸಲಾಗುವುದಲ್ಲದೆ ವೃದ್ಧಾಶ್ರಮ ನಿರ್ವಹಣಾ ವೆಚ್ಚವನ್ನು 2 ಲಕ್ಷ ರೂಪಾಯಿಗಳಿಂದ 8 ಲಕ್ಷ ರೂಪಾಯಿಗಳಿಗೆ ಏರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಅವರು ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 'ವಿಶ್ವ ಹಿರಿಯ ನಾಗರೀಕರ ದಿನಾಚರಣೆ' ಅಂಗವಾಗಿ ಏರ್ಪಡಿಸಿದ್ದ ಹಿರಿಯ ಶಕ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡುತ್ತಿದ್ದರು.
ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಹೋಬಳಿ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಪೆನ್ಷನ್ ಅದಾಲತ್ ನಡೆಸಲು ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ವೃದ್ಧಾಪ್ಯ ವೇತನ ಇತರ ಪೆನ್ಷನ್ಗಳು ಅರ್ಹರಾಗಿದ್ದು ನಿಂತುಹೋಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಹಿಂಬಾಕಿ ಸಹಿತ ಮಂಜೂರಾತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ನುಡಿದರು.
2007ರಲ್ಲಿ ಹಿರಿಯ ನಾಗರಿಕರ ಹಕ್ಕುಗಳನ್ನು ಜಾರಿಗೊಳಿಸಲು ಕಾಯ್ದೆ ಜಾರಿಗೊಳಿಸಲಾಗಿದ್ದು ಅದನ್ನು ರಾಜ್ಯದಲ್ಲೂ ಸಹ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಯಿದೆ ಅಡಿ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನ್ಯಾಯಮಂಡಳಿ ರಚಿಸಿ ಹಿರಿಯ ನಾಗರೀಕರ ಹಕ್ಕುಗಳ ಸಂರಕ್ಷಣೆಗೆ ಹಾಗೂ ಭದ್ರತೆಗೆ ಆದ್ಯ ಗಮನ ನೀಡಲಾಗುತ್ತಿದೆ. ವೃದ್ಧರಿಗಾಗಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ಒಬ್ಬಂಟಿ ಇರುವ ಹಿರಿಯ ನಾಗರೀಕರು ಸಮಸ್ಯೆಗಳಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ತಮ್ಮ ವಿವರಗಳನ್ನು ಒದಗಿಸಿದಲ್ಲಿ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹಿಂದೆ ಗ್ರಾಮೀಣ ಭಾಗಗಳಲ್ಲಿ ಕೂಡು ಕುಟುಂಬದ ವ್ಯವಸ್ಥೆ ಇತ್ತು ಹಿರಿಯರಿಗೆ ಗೌರವ ಕೊಡುತ್ತಾ ತಗ್ಗಿ ಬಗ್ಗಿ ನಡೆಯುತ್ತಿದ್ದರು. ಅವರಿಗೆ ಎದುರುತ್ತರ ಕೊಡುತ್ತಿರಲಿಲ್ಲ. ಆದರೆ ಪರಿಸ್ಥಿತಿ ಈಗ ವಿಭಿನ್ನವಾಗಿದೆ. ಹಳ್ಳಿಗಳಲ್ಲಿ ಸಹ ಹಿರಿಯ ನಾಗರೀಕರ ಸ್ಥಿತಿ ಬದಲಾಗಿರುವುದು ವಿಷಾದಕರ. ಮಕ್ಕಳು ಹುಟ್ಟಿನಿಂದ ತಮ್ಮನ್ನು ಪೋಷಿಸಿ ಬೆಳೆಸಿದ ತಂದೆತಾಯಿಯವರನ್ನು ತಾವು ಬೆಳೆದ ನಂತರ ದೂರ ಮಾಡುತ್ತಿರುವುದು ಅಮಾನವೀಯ ನಡವಳಿಕೆ. ಈಗ ನಮ್ಮ ದೇಶದಲ್ಲಿ ಸಹ ಸರ್ಕಾರವೇ ಹಿರಿಯನ್ನು ಪೋಷಿಸುವ ಸ್ಥಿತಿ ಬಂದಿದೆ. ಇದು ಹೋಗಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಗ್ರಾಮೀಣ ಪ್ರದೇಶದ ಯುವಜನಾಂಗ ಉದ್ಯೋಗಕ್ಕಾಗಿ ನಗರಕ್ಕೆ ಬರುತ್ತಾರೆ. ನಗರ ಪ್ರದೇಶದವರು ಹೊಸ ಅವಕಾಶಗಳಿಗೆ ವಿದೇಶಗಳಿಗೆ ಹೋಗುತ್ತಾರೆ. ಈ ಎಲ್ಲ ಭರಾಟೆಯಲ್ಲಿ ನಮಗಾಗಿ ಎಲ್ಲವನ್ನೂ ತ್ಯಾಗಮಾಡಿದ ಹಿರಿಯ ಚೇತನಗಳ ಕಾಳಜಿ ವಹಿಸಲು ಇಂದು ಯುವಜನಾಂಗಕ್ಕೆ ಪುರುಸೊತ್ತಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲ ದೊರೆಯುತ್ತದೆ ಎಂದು ಹಿರಿಯ ಮಾರ್ಗದರ್ಶನ ಅಗತ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದಕರ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಸುದೇವ ರೆಡ್ಡಿ (ಕಾನೂನು ಕ್ಷೇತ್ರ), ಪಿ. ಮುನಿರೆಡ್ಡಿ (ಕಲೆ), ಬಸವರಾಜ ಗೂಳಪ್ಪ ಭೂಸರೆಡ್ಡಿ (ಸಾಹಿತ್ಯ), ಶಾಂತಾದೇವಿ ಉ. ಹುಲೆಪ್ಪನವರ ಮಠ (ಶಿಕ್ಷಣ), ಕಾಪೂ ವಿಶ್ವನಾಥಶೆಟ್ಟಿ (ಸಮಾಜ ಸೇವೆ) ಹಾಗೂ ವೈಜನಾಥ ಓಂಕಾರಪ್ಪ ಸಮಗೊಂಡ (ಕ್ರೀಡೆ) ಅವರಿಗೆ 2013ನೇ ಸಾಲಿನ ಹಿರಿಯ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಿಂದುರಾವ್ ಝಳಕಿ, ನಿರ್ದೇಶಕ ಜಯವಿಭವ ಸ್ವಾಮಿ ಅವರುಗಳು ಪಾಲ್ಗೊಂಡಿದ್ದರು.