ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಡಿಎ ಹೆಚ್ಚಳ
ರಾಜ್ಯ ಸರಕಾರ ಪರಿಷ್ಕೃತ ವೇತನ ಶ್ರೇಣಿಗೆ ಅನುಗುಣವಾಗಿ 2014ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಶೇ. 6ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ನೀಡಲು ಸರಕಾರ ತೀರ್ಮಾನಿಸಿದ್ದು, ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ.
ಸರಕಾರಿ, ಜಿಲ್ಲಾ ಪಂಚಾಯತ್, ಅನುದಾನಿತ ಶಿಕ್ಷಣ ಸಂಸ್ಥೆಗಳು, ಯುಜಿಸಿ ವೇತನ ಪಡೆಯುವವರು, ನಿವೃತ್ತ ನೌಕರರು, ಕುಟುಂಬ ಪಿಂಚಣಿ ಪಡೆಯುತ್ತಿರುವವರಿಗೆ ತುಟ್ಟಿ ಭತ್ಯೆ ಹೆಚ್ಚಳ ಸಂದಾಯವಾಗಲಿದೆ.
ಕೇಂದ್ರ ಸರಕಾರ ತುಟ್ಟಿಭತ್ಯೆ ದರವನ್ನು ಶೇ.10ರಷ್ಟು ಹೆಚ್ಚಿಸಿತ್ತು. ರಾಜ್ಯದಲ್ಲೂ ಇದೇ ಪ್ರಮಾಣದಲ್ಲಿ ತುಟ್ಟಿ ಭತ್ಯೆ ನೀಡಬೇಕೆಂಬ ಬೇಡಿಕೆಯನ್ನು ಸರಕಾರಿ ನೌಕರರ ಸಂಘ ಮುಂದಿಟ್ಟಿತ್ತು. ಆ ಬೇಡಿಕೆಯನ್ನು ಸರಕಾರ ಒಪ್ಪಿಲ್ಲ. ಸರಕಾರದ ಈ ಆದೇಶದಿಂದ ನೌಕರರಿಗೆ ಸಂತೋಷವಾಗಿಲ್ಲ ಎಂದು ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು ಶೇ. 6ರಷ್ಟು ಮಾತ್ರ ಹೆಚ್ಚಿಸಲು ಅನುಮತಿ ನೀಡುವಂತೆ ಕಳೆದ ಶನಿವಾರ ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದರು. ಆಯೋಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಏ. 8ರಂದು ಸರಕಾರದ ಅಧಿಕೃತ ಆದೇಶ ಹೊರಬಿದ್ದಿದೆ.