ಖಾಸಗಿ ಶಾಲೆ ಬೋಧನಾ ಶುಲ್ಕ ಕಡಿತಕ್ಕೆ ಸುರೇಶ್ ಕುಮಾರ್ ಆದೇಶ
ಬೆಂಗಳೂರು, ಜನವರಿ 29: ಖಾಸಗಿ ಶಾಲೆ ಬೋಧನಾ ಶುಲ್ಕ ನಿಗದಿ ಕುರಿತಂತೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಲಾ ಮ್ಯಾನೇಜ್ಮೆಂಟ್ ಹಾಗೂ ಪೋಷಕರ ನಡುವಿನ ತಿಕ್ಕಾಟಕ್ಕೆ ಬ್ರೇಕ್ ಹಾಕುವ ಯತ್ನವನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಡಿದ್ದಾರೆ.
''ಎಲ್ಲಾ ಶಾಲಾ ಆಡಳಿತ ಮಂಡಳಿಗಳು ನಿಗದಿತ ಬೋಧನಾ ಶುಲ್ಕವನ್ನು ಶೇ 30ರಷ್ಟು ಕಡಿತಗೊಳಿಸಬೇಕು, ಶೇ 70ರಷ್ಟು ಮಾತ್ರ ಶುಲ್ಕ ಪಡೆಯಲು ಸೂಚಿಸಲಾಗಿದೆ'' ಎಂದು ಸುರೇಶ್ ಕುಮಾರ್ ಹೇಳಿದರು.
ಕೋವಿಡ್ 19 ಕಾರಣದಿಂದ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಇಬ್ಬರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲ ಶಾಲೆಗಳಲ್ಲಿ ಶಿಕ್ಷಕರಿಗೆ ತಿಂಗಳ ಸಂಬಳ ಕೊಡಲು ದುಡ್ಡಿಲ್ಲದಂತಾಗಿದೆ. ಹೀಗಾಗಿ, ಎಲ್ಲರ ಹಿತದೃಷ್ಟಿಯಿಂದ ಶೇ 70ರಷ್ಟು ಮಾತ್ರ ಶುಲ್ಕ ಪಡೆಯಲು ಸೂಚಿಸಲಾಗಿದ್ದು, ಇದು ರಾಜ್ಯದ ಎಲ್ಲಾ ಮಾದರಿ ಶಾಲೆಗಳಿಗೆ ಅನ್ವಯವಾಗಲಿದೆ ಎಂದರು.
Breaking:ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ
ಜೂನ್ 2021ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಕೊವಿಡ್ 19 ಕಾಲದಲ್ಲಿ ಮಕ್ಕಳು ನಲುಗಿ ಹೋಗಿದ್ದಾರೆ, ಅವರಿಗೆ ಉತ್ತಮ ಶಿಕ್ಷಣ ವಾತಾವರಣ ರೂಪಿಸಲು ನಾವು ಶ್ರಮಿಸೋಣ ಎಂದು ಕರೆ ನೀಡಿದರು.
ಈಗಾಗಲೇ ಶಾಲಾ ಮ್ಯಾನೇಜ್ಮೆಂಟ್ ಗಳಿಗೆ ಬೋಧನಾ ಶುಲ್ಕವನ್ನು ಪೂರ್ತಿಯಾಗಿ ಪಾವತಿಸಿದ್ದರೆ, ಶುಲ್ಕ ಕಡಿತಕ್ಕೆ ಸರಿ ಹೊಂದಿಸಬೇಕಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಾಕಿ ಉಳಿದ ಮೊತ್ತವನ್ನು ಸರಿ ಹೊಂದಿಸಬಹುದು ಎಂದರು.
ಬೋಧನಾ ಶುಲ್ಕವಲ್ಲದೆ, ಅಭಿವೃದ್ಧಿ ಶುಲ್ಕ, ಡೊನೇಷನ್ ಮುಂತಾದ ಶುಲ್ಕಗಳನ್ನು ಪೋಷಕರ ಮೇಲೆ ಹೇರುವಂತಿಲ್ಲ ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.