ಕನ್ನಡ ಸಿನಿಮಾ ಕ್ಷೇತ್ರಕ್ಕೆ ಸಿಹಿ ಸುದ್ದಿಕೊಟ್ಟ ಕರ್ನಾಟಕ ಸರ್ಕಾರ!
ಬೆಂಗಳೂರು, ಸೆ. 27: ಕೊರೊನಾವೈರಸ್ನಿಂದ ತೊಂದರೆಗೆ ಒಳಗಾಗದ ಕ್ಷೇತ್ರಗಳೇ ಇಲ್ಲ. ಪ್ರವಾಸೋದ್ಯಮ, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಕೊರೊನಾ ಬಹುದೊಡ್ಡ ಹೊಡೆತ ಕೊಟ್ಟಿದೆ. ಈಗೀಗ ಈ ಎಲ್ಲ ಕ್ಷೇತ್ರಗಳು ಸುಧಾರಿಸಿಕೊಳ್ಳುತ್ತಿವೆ. ಹೀಗಾಗಿ ಈ ಕ್ಷೇತ್ರಗಳಿಗೆ ಹಲವು ರಿಯಾಯತಿ ಒದಗಿಸುವ ಮೂಲಕ ಮತ್ತಷ್ಟು ಉತ್ತೇಜನ ಕೊಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸೋಮವಾರ ವಿಧಾನಸೌಧದಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಘೊಷಣೆಗಳನ್ನು ಸಚಿವ ಆನಂದ್ ಸಿಂಗ್ ಮಾಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಸಚಿವ ಆನಂದ್ ಸಿಂಗ್ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಿಸಲು ಪ್ರವಾಸೋದ್ಯಮ ಎಕ್ಸ್ ಪೋ ಆಯೋಜಿಸಲು ಸರ್ಕಾರ ತೀರ್ಮಾನ ಮಾಡಿದೆ.
ಸಿನಿಮಾ ಕ್ಷೇತ್ರಕ್ಕೆ ಸರ್ಕಾರ ಕೊಟ್ಟಿರುವ ಸೌಲಭ್ಯ ಹಾಗೂ ಪ್ರವಾಸೋದ್ಯಮದಿಂದ ಆಗಿರುವ ನಷ್ಟ ಭರ್ತಿಗೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳು ಹೀಗಿವೆ.
ಕೋವಿಡ್ನಿಂದ ಪ್ರವಾಸೋದ್ಯಮಕ್ಕೆ ಹೊಡೆತ!
"ಕೋವಿಡ್ ಸಂಕಷ್ಟದಿಂದ ಪ್ರವಾಸೋದ್ಯಮ ಕುಂಠಿತಗಂಡಿದ್ದು, ಕಳೆದ ಎರಡು ವರ್ಷಗಳಿಂದ ತೀವ್ರ ಸಮಸ್ಯೆಯನ್ನು ಎದುರಿಸಿದ್ದೇವೆ. ಸುಮಾರು 25 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಇಲಾಖೆ ನೀಡಿದೆ. ಆದರೆ ಕೊರೊನಾದಿಂದ ಅವೆಲ್ಲವೂ ಕಡಿಮೆಯಾಗಿದ್ದು, ಉದ್ಯಮವನ್ನು ಮತ್ತೆ ಪುನರ್ಜೀವಗೊಳಿಸಬೇಕಿದೆ' ಎಂದು ಆನಂದ್ ಸಿಂಗ್ ಹೇಳಿದ್ದಾರೆ. ಅದಕ್ಕಾಗಿ ಹಲವು ಮಾರ್ಗಗಳನ್ನು ವಿವರಿಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರ ಸಧೃಡಗೊಳಿಸಲು ವಿಷನ್ 25
ಪ್ರವಾಸೋದ್ಯಮ ವಲಯದಲ್ಲಿ ಉದ್ಯೋಗ ಮತ್ತು ಆದಾಯ ಸೃಷ್ಟಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕ್ಷೇತ್ರ 30 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸಿತ್ತು. ಮತ್ತೆ ಪ್ರವಾಸೋದ್ಯಮ ಕ್ಷೇತ್ರವನ್ನು ಸಧೃಡಗೊಳಿಸಲು ವಿಷನ್ 25 ಘೋಷಣೆ ಮಾಡಲಾಗಿದ್ದು, 2025ಕ್ಕೆ ಪ್ರವಾಸೋದ್ಯಮ ಕೊಡುಗೆ ಜಿಡಿಪಿಗೆ ಶೇ. 20 ರಷ್ಟಾಗಲಿದೆ. ಆ ಹೊತ್ತಿಗೆ ಕರ್ನಾಟಕ ದೇಶದ ನಂಬರ್ ಒನ್ ಪ್ರವಾಸೋದ್ಯಮ ತಾಣವಾಗಲಿದೆ. 18 ಪ್ರವಾಸಿ ಉದ್ಯಮಗಳನ್ನು ಪ್ರವಾಸೋದ್ಯಮ ಉತ್ಪನ್ನ ಬೆಂಬಲಿಸುವ ಗುರಿ ಹೊಂದಿದೆ. ಹೊಸ ಪ್ರವಾಸೋದ್ಯಮ ನೀತಿ ಕೊವಿಡ್ ನಿಂದ ತತ್ತರಿಸಿದವರಿಗೆ ಪೂರಕವಾಗಿರಲಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ!
ವ್ಯಾಪಾರ ಮತ್ತು ಸೌಲಭ್ಯ ಉತ್ತೇಜಿಸಲು ಆನ್ಲೈನ್ ಮೂಲಕ ನೋಂದಾವಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕರ್ನಾಟಕದಲ್ಲಿ ಪ್ರವಾಸೋದ್ಯಮ ವಲಯದಲ್ಲಿ ಅನುಕೂಲಕರ ವಾತಾವಾರಣ ಸೃಷ್ಟಿಸಿ ಬಂಡವಾಳ ಆಕರ್ಷಿಸಲು ಹೂಡಿಕೆದಾರರ ಸಮಾವೇಶ ಕರೆಯಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 2022ರ ಫೆಬ್ರವರಿ 23 ರಿಂದ 25ರವರೆಗೆ ಮೂರು ದಿನಗಳ ಪ್ರವಾಸೋದ್ಯಮ ಎಕ್ಸಪೋ ನಡೆಸಲಾಗುವುದು. ಪ್ರವಾಸೋದ್ಯಮ ಸೊಸೈಟಿಯವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ಆನಂದ್ ಸಿಂಗ್ ವಿವರಿಸಿದ್ದಾರೆ. ಜೊತೆಗೆ ಸಿನಿಮಾ ಕ್ಷೇತ್ರಕ್ಕೂ ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಸೌಲಭ್ಯ ಕೊಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
Recommended Video
ಸಿನಿಮಾ ಕ್ಷೇತ್ರಕ್ಕೆ ಒಳ್ಳೆಯ ಸುದ್ದಿ!
''ಸಿನಿಮಾ ಚಿತ್ರೀಕರಣ ಮಾಡಲು ಕೆಲವು ಕಡೆ ನಿರ್ಬಂಧವಿದೆ. ಆ ನಿರ್ಬಂಧದ ಸಮಸ್ಯೆ ಬಗ್ಗೆ ಗಮನಹರಿಸಿದ್ದೇವೆ. ಒಂದೇ ಸೂರಿನಡಿ ಪ್ರಾಚ್ಯವಸ್ತು, ಅರಣ್ಯ ಹಾಗೂ ಪ್ರವಾಸೋಧ್ಯಮ ಇಲಾಖೆಗಳ ಅನುಮತಿ ದೊರೆಯುವಂತೆ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಅದರಿಂದಾಗಿ ಚಿತ್ರರಂಗದವರಿಗೂ ಅನುಕೂಲವಾಗಲಿದೆ. ನಮಗೂ ಪ್ರವಾಸೋದ್ಯಮ ಬೆಳೆಯಲು ಅವಕಾಶವಾಗಲಿದೆ. ಕೊರೊನಾ ಎರಡು ಅಲೆಗಳಿಂದ ಪ್ರವಾಸೋದ್ಯಮ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಹೋಟೆಲ್ ಉದ್ಯಮ, ಸಣ್ಣ ಪುಟ್ಟ ಕೆಲಸ ಮಾಡುವವರು, ಗೈಡ್ಗಳು ತೊಂದರೆಗೆ ಒಳಗಾಗಿದ್ದಾರೆ ಅವರಿಗೆ ಅಗತ್ಯ ಸಹಕಾರ ನೀಡಲಾಗುವುದು'' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಜೊತೆಗೆ ಹೊಟೇಲ್ ಹಾಗೂ ರೆಸಾರ್ಟ್ಗಳ ಆಸ್ತಿ ತೆರಿಗೆಯನ್ನು ಶೇಕಡಾ 50ರಷ್ಟು ಕಡಿತಗಿಳಿಸಲಾಗುವುದು. ಹೊಟೇಲ್ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗುತ್ತಿದ್ದು, ಏಪ್ರಿಲ್, ಜೂನ್ ವಿದ್ಯುತ್ ಶುಲ್ಕವನ್ನೂ ಮನ್ನಾ ಮಾಡಲಾಗಿದೆ ಎಂದು ಆನಂದ್ ಸಿಂಗ್ ವಿವರಿಸಿದ್ದಾರೆ. ಇದೇ ವೇಳೆ 364 ಪ್ರವಾಸಿ ಗೈಡ್ಗಳಿಗೆ ತಲಾ 5 ಸಾವಿರ ರೂ. ಸಹಾಯಧವನ್ನು ಕೊಡಲಾಗಿದೆ.