ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದು ಅಸಾಧ್ಯ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ!
ಬೆಂಗಳೂರು, ಡಿ. 13: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಮುಷ್ಕರ ನಡೆಸುತ್ತಿರುವ ಸಾರಿಗೆ ಸಿಬ್ಬಂದಿ ಕುರಿತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಹತ್ವದ ಮಾತನಾಡಿದ್ದಾರೆ. ವಿಕಾಸಸೌಧದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬ ಬೇಡಿಕೆ ಈಡೇರಿಸುವುದು ಸರ್ಕಾರಕ್ಕೆ ಸಾಧ್ಯವೇ ಇಲ್ಲ ಎಂದು ಲಕ್ಷ್ಮಣ ಸವದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಒಂದು ನಿಗಮದದ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ ಉಳಿದ ನಿಗಮಗಳ ಸಿಬ್ಬಂದಿಯೂ ಅದೇ ಬೇಡಿಕೆ ಇಡುತ್ತಾರೆ. ಹೀಗಾಗಿ ಆ ಬೇಡಿಕೆಯನ್ನು ಈಡೇರಿಸುವುದು ಅಸಾಧ್ಯ. ಸಿಬ್ಬಂದಿಯ ಉಳಿದೆಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತೆ ಎಂಬ ವಿಶ್ವಾಸ ಇದೆ. ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ. ಅದನ್ನು ಸದ್ಯಕ್ಕೆ ಜಾರಿ ಮಾಡುವುದಿಲ್ಲ ಎಂದೂ ಸವದಿ ಅವರು ಹೇಳಿದ್ದಾರೆ. ಜೊತೆಗೆ ಲಕ್ಷ್ಮಣ ಸವದಿ ಏನೇನು ಹೇಳಿದ್ದಾರೆ? ಮುಂದಿದೆ ಮಾಹಿತಿ.
ಮುಷ್ಕರದ ಹಿಂದೆ ಕಾಣದ 'ಕೈ'?
ಎಲ್ಲ ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬವರು. ಕಷ್ಟದ ಪರಿಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ. ಇವತ್ತಿನ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್ಗೆ ಆಹ್ವಾನ ಇಲ್ಲ. ಕೋಡಿಹಳ್ಳಿ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. 2-3 ದಿನಗಳಲ್ಲಿ ಅದನ್ನು ಬಿಚ್ಚಿಡುತ್ತೇನೆ.
ಬಗೆಹರಿಯದ ಬಿಕ್ಕಟ್ಟು; ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ
ಪ್ರತಿಭಟನೆಗೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಬೆಂಬಲ ಇದೆ. ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಭಟನೆ ಜಾಗಕ್ಕೆ ಹೋಗಿ ಬೆಂಬಲ ಕೊಟ್ಟಿದ್ದಾರೆ. ಕಾಂಗ್ರೆಸ್ ಬೆಂಬಲ ಇದೆ ಎಂಬ ಮಾತನ್ನು ನಾನು ತಳ್ಳಿ ಹಾಕುವುದಿಲ್ಲ. ಕಾಂಗ್ರೆಸ್ ನಾಯಕರ ಜೊತೆ ಕೋಡಿಹಳ್ಳಿ ಮಾತನಾಡಿರುವ ಅಡಿಯೋ ನನಗೆ ಸಿಕ್ಕಿಲ್ಲ. ನನಗೆ ಸಿಕ್ಕಿದ ಕೂಡಲೇ ಅದನ್ನ ರಿಲೀಸ್ ಮಾಡುತ್ತೇನೆ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಖಾಸಗಿ ಬಸ್ ಮಾಲೀಕರಿಗೆ ಮನವಿ
ಖಾಸಗಿ ಬಸ್ಗಳನ್ನು ಓಡಿಸುವಂತೆ ನಾವು ಮನವಿ ಮಾಡಿದ್ದೇವೆ. ಅವರಿಗೆ ಅಗತ್ಯವಾದ ಪರ್ಮಿಟ್ ವಿನಾಯ್ತಿ ಕೂಡಾ ಕೊಕಕೊಡುತ್ತೇವೆ. ಈಗಾಗಲೇ ಸಾರಿಗೆ ಆಯುಕ್ತರಿಗೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈ ಪ್ರಕರಣ ಮುಗಿಯುವವರೆಗೆ ಬಸ್ ಓಡಿಸುವಂತೆ ಮನವಿ ಮಾಡಲಾಗಿದೆ ಎಂದು ಸವದಿ ಹೇಳಿದ್ದಾರೆ.
ಮಧ್ಯಾಹ್ನದ ಒಳಗೆ ಸಮಸ್ಯೆಗೆ ಪರಿಹಾರ
ಸಿಬ್ಬಂದಿ ಮುಷ್ಕರದ ಕುರಿತು ಸಭೆ ಕರೆದಿದ್ದೇನೆ. ಸಭೆಗೆ ಎಲ್ಲರನ್ನೂ ಆಹ್ವಾನ ಮಾಡಿದ್ದೇನೆ. ಇವತ್ತು ಮಧ್ಯಾಹ್ನದ ಒಳಗೆ ಎಲ್ಲವೂ ಮುಗಿಯುತ್ತದೆ ಎಂಬ ಭರವಸೆ ಇದೆ. ಅವರು ಏನೇನು ಬೇಡಿಕೆ ಮಂಡಿಸುತ್ತಾರೋ? ಅವೆಲ್ಲ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತೇವೆ. ಹಣಕಾಸಿನ ಇತಿಮಿತಿ ಒಳಗೆ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕಿದೆ. ಅವರು ಬೇಡಿಕೆ ಮಂಡನೆ ಬಳಿಕ ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಿ, ಆ ನಂತರ ಆ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಸವದಿ ಹೇಳಿಕೆ ನೀಡಿದ್ದಾರೆ.
ಸಿಎಂ ಕೂಡ ಹರಿಹಾಯ್ದಿದ್ದರು
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರೆ ಈ ಮುಷ್ಕರಕ್ಕೆ ಕರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಹರಿಹಾಯ್ದಿದ್ದರು. ಇದೀಗ ಕಾಂಗ್ರೆಸ್ ನಾಯಕರೊಂದಿಗೆ ಕೋಡಿಹಳ್ಳಿ ಅವರು ಮಾತನಾಡಿದ ಅಡಿಯೋವನ್ನು ಎರಡ್ಮೂರು ದಿನಗಳಲ್ಲಿ ಬಿಡಗಡೆ ಮಾಡ್ತೇನೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.