ಬಾಗಲಕೋಟೆ, ಕಲಬುರಗಿ ಜನರು ಮದುವೆ ಮಾಡುವ ಹಾಗಿಲ್ಲ!
ಕಲಬುರಗಿ, ಜುಲೈ.06: ಕೊರೊನಾವೈರಸ್ ಅಟ್ಟಹಾಸಕ್ಕೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ತತ್ತರಿಸಿ ಹೋಗಿವೆ. ಕೊವಿಡ್-19 ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಲಬುರಗಿ ಮತ್ತು ಬಾಗಲಕೋಟೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೊಸ ಆದೇಶವನ್ನು ಹೊರಡಿಸಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಸಾರ್ವಜನಿಕವಾಗಿ ಮದುವೆ ಸಮಾರಂಭಗಳನ್ನು ನಡೆಸುವುದಕ್ಕೆ ನಿಷೇಧವನ್ನು ವಿಧಿಸಲಾಗಿದೆ. ಈ ಬಗ್ಗೆ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ: ಗೋವಿಂದ ಕಾರಜೋಳ
ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಮಾತ್ರ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಉಪಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.
ಕೊರೊನಾವೈರಸ್ ಹರಡುವಿಕೆಯ ಭೀತಿ ಹಿನ್ನೆಲೆ ಶಿಸ್ತುಕ್ರಮ
ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಪ್ರತಿನಿತ್ಯ ಗಣನೀರಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಇದಕ್ಕೂ ಮೊದಲು ಎರಡು ಜಿಲ್ಲೆಗಳಲ್ಲಿ ನಡೆದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆ ಸಾರ್ವಜನಿಕವಾಗಿ ಮದುವೆ ಸಮಾರಂಭಗಳನ್ನು ನಡೆಸುವುದಕ್ಕೆ ಅನುಮತಿ ನೀಡದಂತೆ ಮುನ್ನೆಚ್ಚರಿಕೆ ಸೂಚನೆಯನ್ನು ನೀಡಲಾಗಿದೆ.
ಮದುವೆಗಳಲ್ಲಿ 50 ಮಂದಿ ಭಾಗವಹಿಸಲು ಸರ್ಕಾರದ ಅನುಮತಿ
ಕೊರೊನಾವೈರಸ್ ಭೀತಿ ನಡುವೆಯೂ ಲಾಕ್ ಡೌನ್ ನಿಯಮಗಳನ್ನು ಕೊಂಚ ಸಡಿಲಿಕೆ ಮಾಡಲಾಗಿತ್ತು. ಈ ವೇಳೆ ಮೃತ ವ್ಯಕ್ತಿಗಳ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಗರಿಷ್ಠ 20 ಮಂದಿಗೆ ಹಾಗೂ ಮದುವೆ ಸಮಾರಂಭದಲ್ಲಿ ಭಾಗವಹಿಸಲು 50 ಜನರಿಗೆ ಮಾತ್ರ ಸರ್ಕಾರದಿಂದ ಅನುಮತಿ ನೀಡಲಾಗಿತ್ತು. ಆದರೆ ಇದೀಗ ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ಪರಿಸ್ಥಿತಿ ಮಿತಿಮೀರಿ ಹೋಗಿದೆ. ಹೀಗಾಗಿ ಜಿಲ್ಲೆಗಳಲ್ಲಿ ಸಾರ್ವಜನಿಕವಾಗಿ ಮದುವೆಗಳಿಗೆ ಅನುಮತಿ ನೀಡದಿರಲು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತೀರ್ಮಾನಿಸಿದ್ದಾರೆ.
ಕಲಬುರಗಿಯಲ್ಲಿ ಹೆಂಗೈತೆ ಕೊರೊನಾವೈರಸ್ ಕಂಡೀಷನ್?
ಕೊರೊನಾವೈರಸ್ ಅಟ್ಟಹಾಸಕ್ಕೆ ಕಲಬುರಗಿ ಜಿಲ್ಲೆಯು ನಲುಗಿ ಹೋಗಿದೆ. ಕಳೆದ 24 ಗಂಟೆಗಳಲ್ಲೇ ಜಿಲ್ಲೆಯಲ್ಲಿ 49 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1646ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ಜಿಲ್ಲೆಯಲ್ಲಿ ಇದುವರೆಗೂ 27 ಜನರು ಉಸಿರು ಚೆಲ್ಲಿದ್ದಾರೆ.
ಕೊರೊನಾವೈರಸ್ ನಿಂದ ಬೆಚ್ಚಿಬಿದ್ದ ಬಾಗಲಕೋಟೆ ಜನ
ಕೊವಿಡ್-19 ಅಟ್ಟಹಾಸಕ್ಕೆ ಬಾಗಲಕೋಟೆ ಜಿಲ್ಲೆಯ ಜನರು ಕೂಡಾ ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ದಿನದಲ್ಲಿ ಜಿಲ್ಲೆಯಲ್ಲಿ ನಾಲ್ವರಿಗೆ ಸೋಂಕು ಅಂಟಿಕೊಂಡಿರುವುದು ಖಾತ್ರಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 230ಕ್ಕೆ ಏರಿಕೆಯಾಗಿದ್ದು, ಇದುವರೆಗೂ 137 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬಾಕಿ ಉಳಿದಿರುವ 88 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಾಮಾರಿಗೆ ಜಿಲ್ಲೆಯಲ್ಲಿ ಇದುವರೆಗೂ ಐವರು ಪ್ರಾಣ ಬಿಟ್ಟಿದ್ದಾರೆ.