ವೈದ್ಯರೇ ಎಚ್ಚರಿಕೆ: ಕರ್ನಾಟಕದಲ್ಲಿ ಕೊವಿಡ್-19 ಬಗ್ಗೆ ತಪ್ಪು ಮಾಹಿತಿ ನೀಡಿದ್ರೆ ಕೇಸ್!
ನವದೆಹಲಿ, ಜನವರಿ 18: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕುರಿತು ವೈದ್ಯರು ಮತ್ತು ತಜ್ಞರು ಸಾರ್ವಜನಿಕವಾಗಿ ತಪ್ಪು ಹಾಗೂ ಅಪೂರ್ಣ ಮಾಹಿತಿಯನ್ನು ನೀಡದಂತೆ ರಾಜ್ಯ ಸರ್ಕಾರವು ಪ್ರಕಟಣೆಯೊಂದನ್ನು ಹೊರಡಿಸಿದೆ.
ರಾಜ್ಯದಲ್ಲಿ ಕೊವಿಡ್-19 ಕುರಿತು ವಿವಿಧ ಮಾಧ್ಯಮಗಳ ಮೂಲಕ ಕೆಲವು ವೈದ್ಯರು, ವೈದ್ಯಕೀಯ ಪರಿಣಿತರು ಹಾಗೂ ತಜ್ಞರು ಸಾರ್ವಜನಿಕರಿಗೆ ಅಪೂರ್ಣ ಹಾಗೂ ಆಧಾರರಹಿತವಾದ ತಪ್ಪು ಮಾಹಿತಿ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆ ವೈದ್ಯರಿಗೆ ಸರ್ಕಾರದಿಂದ ಸೂಚನೆಯನ್ನು ನೀಡಲಾಗಿದೆ.
ಕೊವಿಡ್ ಪರೀಕ್ಷೆ ಕಿಟ್ ಖರೀದಿಸುವವರ ಫಲಿತಾಂಶ ಏನೋ ಎಂತೋ?: ಸರ್ಕಾರದ ಸುತ್ತೋಲೆ
ವೈದ್ಯರು ಹಾಗೂ ಪರಿಣಿತ ತಜ್ಞರು ನೀಡುತ್ತಿರುವ ತಪ್ಪು ಮಾಹಿತಿಯಿಂದ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಜನರಲ್ಲಿ ತಪ್ಪು ಮಾಹಿತಿಯು ಗೊಂದಲವನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಜನರು ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯು ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸದೇ ವಿಮುಖರಾಗುವ ಅಪಾಯವಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಕೊವಿಡ್-19 ಅಪಾಯದ ಬಗ್ಗೆ ಎಚ್ಚರಿಕೆ ನೀಡಿ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಅತಿಹೆಚ್ಚು ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರಿಕೆಯನ್ನು ನೀಡಬೇಕು. ವೈದ್ಯರು ಮತ್ತು ಪರಿಣಿತ ತಜ್ಞರು ಗರಿಷ್ಠ ಪ್ರಮಾಣದ ಎಚ್ಚರಿಕೆಯ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬೇಕಾಗಿದೆ.
ಹೇಳಿಕೆ ನೀಡುವ ಮೊದಲು ಮಾರ್ಗಸೂಚಿ ಓದಿರಿ
ಈ ಹಿನ್ನೆಲೆಯಲ್ಲಿ ಯಾವುದೇ ವೈದ್ಯರು, ಪರಿಣಿತ ತಜ್ಞರು, ಚಿಕಿತ್ಸೆ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಉಳ್ಳವರು ಮಾಧ್ಯಮಗಳು ಹಾಗೂ ಯಾವುದೇ ಸಮುದಾಯದ ವೇದಿಕೆಗಳಲ್ಲಿ ಹೇಳಿಕೆ ಮತ್ತು ಸಲಹೆಗಳನ್ನು ನೀಡುವುದಕ್ಕೂ ಮೊದಲು, ಕರ್ನಾಟಕ ಸರ್ಕಾರ ಮತ್ತು ಭಾರತೀಯ ಸರ್ಕಾರವು ಹೊರಡಿಸಿರುವ ಕೊವಿಡ್-19 ಮಾರ್ಗಸೂಚಿಗಳು, ಸುತ್ತೋಲೆ ಮತ್ತು ಆದೇಶಗಳನ್ನು ಅಧ್ಯಯನ ಮಾಡುವುದು ಅತ್ಯಗತ್ಯವಾಗಿರುತ್ತದೆ.
ತಪ್ಪು ಮಾಹಿತಿ ರವಾನಿಸಿದರೆ ಕೇಸ್ ದಾಖಲು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಯಾವುದೇ ರೀತಿ ತಪ್ಪು ಸಂದೇಶಗಳನ್ನು ರವಾನೆ ಮಾಡಿದ್ದಲ್ಲಿ ಅಂಥ ತಜ್ಞರು ಮತ್ತು ವೈದ್ಯಕೀಯ ಪರಿಣಿತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಎಚ್ಚರಿಸಲಾಗಿದೆ. ಹಾಗೊಂದು ವೇಳೆ ತಪ್ಪು ಸಂದೇಶವನ್ನು ರವಾನಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ನಿಯಮ (54) ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ನಿಯಮ 4(ಕೆ) ಅಡಿಯಲ್ಲಿ ಅಗತ್ಯ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ವರ್ಚುವಲ್ ಸಭೆಯಲ್ಲೂ ಕೊವಿಡ್-19 ಚರ್ಚೆ
ಕರ್ನಾಟಕದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಈಗಾಗಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ಹೊರತಾಗಿ ವಾರಾಂತ್ಯದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಮುಂದಿನ ವಾರ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಬೇಕೇ ಬೇಡವೇ ಎಂಬ ಬಗ್ಗೆ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಸಲಾಗಿದ್ದು, ಆ ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳನ್ನು ಇಲ್ಲಿ ಓದಿ ತಿಳಿಯಿರಿ.
1. ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ನೀಡುವುದರ ಜೊತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಸೂಚನೆ
2. ಜನರು ಟ್ರಯಾಜಿಂಗ್ ಗೆ ದಾಖಲಾಗುವುದನ್ನು ನಿಯಂತ್ರಿಸಲು ಸಲಹೆ
3. ಹೋಮ್ ಐಸೊಲೇಷನ್ ಹೆಚ್ಚಿಸಲು ಸೂಚಿಸಲಾಗಿದ್ದು, ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು
4. ಕೊವಿಡ್-19 ಸೋಂಕು ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚಿಸುವುದು
5. ಔಷಧಿ ಕಿಟ್ ಅನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಚನೆ
6. ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆದು ಹಾಕುವುದು
7. ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೆಕು
8. ಸೋಂಕಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ಹೇಳಬೇಕು. ಔಷಧಿ ಕಿಟ್ ಅನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು
9. ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು
10. ಆಮ್ಲಜನಕ ಘಟಕಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚನೆ
11. ಕೊವಿಡ್-19 ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ
12. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು
13. ಕೊರೊನಾವೈರಸ್ ಲಸಿಕೆ ಅಭಿಯಾನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ
14. ಔಷಧಿಗಳನ್ನು ಕೂಡಲೇ ಒದಗಿಸಬೇಕು ಹಾಗೂ ಅವುಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ತೆಗೆದುಕೊಳ್ಳಬೇಕು
15. ಜನರು ಕೊವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ತೀರ್ಮಾನ
16. ಭಾರತ ಸರ್ಕಾರದ ನಿಯಮಾವಳಿಗಳಂತೆ ಐ.ಸಿ.ಎಂ.ಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸೂಚನೆ
17. ಕೊರೊನಾವೈರಸ್ ಲಸಿಕೆಯ ಎರಡನೇ ಡೋಸ್ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧಾರ
18. 15 ರಿಂದ 18 ವರ್ಷ ವಯೋಮಾನದವರಿಗೆ ಕೊವಿಡ್-19 ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ಸೂಚನೆ