ಬೆಳಗಾವಿ-ಹುಬ್ಬಳ್ಳಿ ನೇರ ರೈಲು ಮಾರ್ಗಕ್ಕೆ ಸರ್ಕಾರದ ಒಪ್ಪಿಗೆ
ಬೆಳಗಾವಿ, ನವೆಂಬರ್ 07 : ಬೆಳಗಾವಿ-ಹುಬ್ಬಳ್ಳಿ ನಡುವಿನ ನೇರ ರೈಲು ಮಾರ್ಗಕ್ಕೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಈ ರೈಲು ಮಾರ್ಗ ಉತ್ತರ ಕರ್ನಾಟಕದ ಭಾಗದ ಜನರು ಬಹುದಿನಗಳ ಬೇಡಿಕೆಯಾಗಿತ್ತು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ, "ನನ್ನ ಕನಸಿನ ಯೋಜನೆಯಾಗಿದ್ದ ಬೆಳಗಾವಿ ಹಾಗೂ ಹುಬ್ಬಳ್ಳಿ ನಡುವಿನ ನೇರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿದೆ" ಎಂದು ಹೇಳಿದ್ದಾರೆ.
ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲು
"ಉತ್ತರ ಕರ್ನಾಟಕ, ಬೆಳಗಾವಿ ಹಾಗೂ ಹುಬ್ಬಳ್ಳಿ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರೈಲು ಮಾರ್ಗಕ್ಕೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. ರೈಲು ಹಳಿಗಳನ್ನು ನಿರ್ಮಿಸಲು ಬೇಕಾಗಿರುವ ಅಗತ್ಯ ಭೂಮಿ ಹಾಗೂ ನೇರ ಸಂಪರ್ಕ ಕಲ್ಪಿಸಲು ಬೇಕಾಗುವ ಮೊತ್ತದ 50 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ" ಎಂದು ಸಚಿವರು ಹೇಳಿದ್ದಾರೆ.
ಬೆಳಗಾವಿ-ಬೆಂಗಳೂರು ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆ
ಪ್ರಸ್ತುತ ಬೆಳಗಾವಿ-ಹುಬ್ಬಳ್ಳಿ ನಡುವೆ ನೇರ ರೈಲು ಮಾರ್ಗವಿಲ್ಲ. ಆದ್ದರಿಂದ, ರೈಲುಗಳು ಖಾನಾಪುರ-ಲೋಂಡಾ-ಆಳ್ನವಾವರ ಮಾರ್ಗವಾಗಿ ಸಂಚಾರ ನಡೆಸುತ್ತಿವೆ. ರೈಲ್ವೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.
ಗರೀಬ್ ರಥ ರೈಲು ನೇಪಥ್ಯಕ್ಕೆ: ಸುದ್ದಿ ಅಲ್ಲಗಳೆದ ರೈಲ್ವೇ ಇಲಾಖೆ
ಮಾರ್ಗದ ಸಮೀಕ್ಷೆಗೆ ಸೂಚನೆ
ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ನಿರ್ಮಾಣಕ್ಕೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ರಾಜ್ಯ ಸರ್ಕಾರವು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರದ ಸಹಕಾರದಿಂದ ಯೋಜನೆ ಅನುಷ್ಠಾನವಾಗುತ್ತಿದೆ.
ಸಮೀಕ್ಷೆ ಮುಗಿಯುತ್ತಿದ್ದಂತೆ ಕಾಮಗಾರಿ
ಬೆಳಗಾವಿ-ಹುಬ್ಬಳ್ಳಿ ನೇರ ರೈಲು ಮಾರ್ಗದ ಸಮೀಕ್ಷೆ ಎರಡು ತಿಂಗಳಿನಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಸಮೀಕ್ಷೆ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ. ರಾಜ್ಯ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಗಳು ಚುರುಕಾಗಿ ನಡೆಯಲಿದೆ.
ಬಹಳಷ್ಟು ಜನರಿಗೆ ಉಪಯುಕ್ತ
ಈ ಯೋಜನೆಯಿಂದಾಗಿ ಹುಬ್ಬಳ್ಳಿ, ಧಾರವಾಡ, ಬೇಲೂರ್ ಇಂಡಸ್ಟ್ರಿಯಲ್ ಏರಿಯ, ಕಿತ್ತೂರು ಹಾಗೂ ಬೆಳಗಾವಿ ಭಾಗಕ್ಕೆ ಸರಕು ಸಾಗಾಣಿಕೆ ಹಾಗೂ ದೈನಂದಿನ ಪ್ರಯಾಣಕ್ಕೆ ಬಹಳಷ್ಟು ಉಪಯುಕ್ತವಾಗಲಿದೆ. ದಶಕಗಳ ಕಾಲದಿಂದ ನೇರ ರೈಲು ಮಾರ್ಗಕ್ಕೆ ಬೇಡಿಕೆ ಇಡಲಾಗಿತ್ತು.
ಸಂಚಾರದ ಅವಧಿ ಕಡಿತ
ಈ ಯೋಜನೆ ಜಾರಿಗೊಂಡರೆ ಬೆಳಗಾವಿ-ಹಿರೇಬಾಗೇವಾಡಿ-ಕಿತ್ತೂರು-ಧಾರವಾಡ ಹೈಕೋರ್ಟ್ ಮಾರ್ಗವಾಗಿ ನೇರ ರೈಲು ಮಾರ್ಗ ನಿರ್ಮಾಣವಾಗಲಿದೆ. ಇದರಿಂದಾಗಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ರೈಲು ಸಂಚಾರದ ಸಮಯ ಕಡಿಮೆಯಾಗಲಿದೆ.