ರಾಜಕೀಯ ಅನಿಶ್ಚಿತತೆ: ಪ್ರತೀದಿನ ಅಮಿತ್ ಶಾಗೆ ರಾಜ್ಯಪಾಲರಿಂದ ವರದಿ
ಬೆಂಗಳೂರು, ಜುಲೈ 9: ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯಪಾಲ ವಜೂಭಾಯಿ ವಾಲಾ, ಇದುವರೆಗಿನ ಸಂಪೂರ್ಣ ವರದಿಯನ್ನು ಕೇಂದ್ರ ಗೃಹ ಖಾತೆಗೆ ರವಾನಿಸಿದ್ದಾರೆ.
ಹದಿಮೂರು ಶಾಸಕರು ರಾಜೀನಾಮೆ ನೀಡಿದ ನಂತರದ ಎಲ್ಲಾ ಬೆಳವಣಿಗೆಗಳನ್ನು ಅಮಿತ್ ಶಾ ಅವರಿಗೆ ರಾಜ್ಯಪಾಲರು ಕಳುಹಿಸಿದ್ದು, ಕಾನೂನು ತಜ್ಞರಿಂದ ಚರ್ಚಿಸಿ ವರದಿ ಸಿದ್ದಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ.
ರಾಜೀನಾಮೆ ನೀಡಿದ ಅತೃಪ್ತರು ರಾಜ್ಯಪಾಲರಿಗೆ ನೀಡಿದ ಸ್ಪೋಟಕ ಮಾಹಿತಿ
ಶಾಸಕರ ರಾಜೀನಾಮೆಯ ನಂತರ, ಕುಮಾರಸ್ವಾಮಿ ಸರಕಾರ ಅಲ್ಪಮತಕ್ಕೆ ಕುಸಿದಿದ್ದು, ರಾಜೀನಾಮೆ ನೀಡಲು ಬಂದಿದ್ದ ಎಲ್ಲಾ ಶಾಸಕರ ಹೇಳಿಕೆಗಳನ್ನು ರಾಜ್ಯಪಾಲರ ಕಚೇರಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದೆ ಎನ್ನುವ ಮಾಹಿತಿಯಿದೆ.
ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಹೋಗಿದ್ದಾಗ, ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರಬೇಕು ಎನ್ನುವ ರಮೇಶ್ ಕುಮಾರ್ ಅವರು ನಿಲುವಿನ ಬಗ್ಗೆ ಶಾಸಕರು ತಮ್ಮ ಬಳಿ ಅಸಮಾಧಾನ ತೋಡಿಕೊಂಡಿದ್ದನ್ನೂ ರಾಜ್ಯಪಾಲರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆಂದು ಹೇಳಲಾಗುತ್ತಿದೆ.
ರಾಜೀನಾಮೆ ನೀಡಿದ ಶಾಸಕರು ಈಗಿನ ಸರಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ನೀಡಿರುವ ಹೇಳಿಕೆ, ಕಾನೂನು ತಜ್ಞರ ಅಭಿಪ್ರಾಯ.. ಹೀಗೆ ಪ್ರತೀದಿನದ ಬೆಳವಣಿಗೆಗಳನ್ನು ವಿ ಆರ್ ವಾಲಾ, ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆಂದು ವರದಿಯಾಗಿದೆ.
ಎಚ್ ವಿಶ್ವನಾಥ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶಾಸಕರು, ಯಾವ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇವೆ ಎನ್ನುವುದರ ಬಗ್ಗೆಯೂ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದರು.
ಅತೃಪ್ತ ಶಾಸಕರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಡಿಕೆಶಿ
ನಾವು ಹದಿನಾಲ್ಕು ಜನ ಶಾಸಕರಿದ್ದೇವೆ, ಇನ್ನೂ ಎಂಟು ಶಾಸಕರು ರಾಜೀನಾಮೆ ಸದ್ಯದಲ್ಲೇ ನೀಡಲಿದ್ದಾರೆ. ಒಟ್ಟು ರಾಜೀನಾಮೆ ನೀಡುವ ಶಾಸಕರ ಸಂಖ್ಯೆ 22 ಎನ್ನುವ ಮಾಹಿತಿಯನ್ನು ಅತೃಪ್ತ ಶಾಸಕರು ರಾಜ್ಯಪಾಲರಿಗೆ ನೀಡಿದ್ದರು ಎಂದು ಸುದ್ದಿಯಾಗಿತ್ತು.