ಪರಿಷತ್ ನಾಮನಿರ್ದೇಶನದ ಗೊಂದಲಕ್ಕೆ ತೆರೆ
ಬೆಂಗಳೂರು, ಜೂ. 25 : ಭಾರೀ ಚರ್ಚೆಗೆ ಕಾರಣವಾಗಿದ್ದ ವಿಧಾನಪರಿಷತ್ ನಾಮನಿರ್ದೇಶಿತರ ಪಟ್ಟಿಯ ಗೊಂದಲ ಬಗೆಹರಿದಿದೆ. ಸರ್ಕಾರ ಶಿಫಾರಸು ಮಾಡಿದ್ದ ಐದು ಹೆಸರುಗಳನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಂಗೀಕರಿಸಿದ್ದಾರೆ. ಜೂನ್.30ರ ನಂತರ ಹೊಸ ಸದಸ್ಯರು ಅಧಿಕಾರ ಪಡೆಯಲಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ, ಇಕ್ಬಾಲ್ ಅಹ್ಮದ್ ಸರಡಗಿ, ಅಬ್ದುಲ್ ಜಬ್ಟಾರ್, ಐವಾನ್ ಡಿಸೋಜಾ ಹಾಗೂ ಜಯಮಾಲಾ ಅವರು ನೂತನ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿದ್ದು, ಜೂ.30ರ ನಂತರ ಇವರು ಅಧಿಕಾರ ಸ್ವೀಕರಿಸಲಿದ್ದಾರೆ. ಪಟ್ಟಿ ಅಂತಿಮವಾಗುವ ಮೂಲಕ ಹಲವಾರು ದಿನಗಳ ಗೊಂದಲ ಬಗೆಹರಿದಿದೆ.
ಪ್ರೊ.ಮುಮ್ತಾಜ್ ಅಲಿಖಾನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಹಿಂದೆಯೇ ಆಯ್ಕೆಯಾಗಿದ್ದ ಅಬ್ದುಲ್ ಜಬ್ಟಾರ್ ಅವರನ್ನು ಮುಂದುವರೆಸಲಾಗಿದೆ. ಉಳಿದಂತೆ ಬಿಜೆಪಿಯ ಎಸ್.ಆರ್.ಲೀಲಾ, ಡಾ.ದೊಡ್ಡರಂಗೇಗೌಡ, ಎಂ.ಆರ್.ದೊರೆಸ್ವಾಮಿ ಹಾಗೂ ಬಿ.ಬಿ.ಶಿವಪ್ಪ ಅವರ ಸ್ಥಾನಗಳಿಗೆ ಉಳಿದ ನಾಲ್ವರನ್ನು ಆಯ್ಕೆ ಮಾಡಲಾಗಿದೆ. [ನಾಮನಿರ್ದೇಶಿತರ ಪಟ್ಟಿ ಬದಲಾವಣೆ]
ಶಾಂತಕುಮಾರ್ ಗೆ ನಿರಾಸೆ : ವಿಧಾನಪರಿಷತ್ತಿನ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಹಲವು ನಾಯಕರು ಲಾಬಿ ನಡೆಸುತ್ತಿದ್ದರು. ಇಕ್ಬಾಲ್ ಅಹ್ಮದ್ ಸರಡಗಿ, ಐವಾನ್ ಡಿಸೋಜಾ, ಇಂಟೆಕ್ ಶಾಂತಕುಮಾರ್ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಶಾಂತಕುಮಾರ್ ಅವರಿಗೆ ನಿರಾಸೆಯಾಗಿದ್ದು, ಐವಾನ್ ಡಿಸೋಜಾ ಅವರು ಪರಿಷತ್ ಪ್ರವೇಶಿಸಿದ್ದಾರೆ. [ನಾಮನಿರ್ದೇಶಿತರ ಪಟ್ಟಿಗೆ ಬಿಜೆಪಿ ವಿರೋಧ]
ಮಂಗಳವಾರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಿ ನಾಮನಿರ್ದೇಶಿತರ ಪಟ್ಟಿಯನ್ನು ನೀಡಿದ್ದರು. ಪಟ್ಟಿಗೆ ಯಾವುದೇ ವಿರೋಧ ವ್ಯಕ್ತಪಡಿಸದ ರಾಜ್ಯಪಾಲರು, ಅಂತಿಮ ಒಪ್ಪಿಗೆ ನೀಡಿದ್ದಾರೆ. ಹಿಂದಿನ ಸದಸ್ಯರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದ್ದು, ನಂತರ ನೂತನವಾಗಿ ಆಯ್ಕೆಯಾದವರು ಅಧಿಕಾರ ಸ್ವೀಕರಿಸಲಿದ್ದಾರೆ.