ಯುಆರ್ಎಗೆ ಹೂ ಆರ್ ಯು ಅಂದ ಎಚ್ಆರ್ ಭಾರದ್ವಾಜ್!
ಬೆಂಗಳೂರು, ಜ 30: ವಿಶ್ವವಿದ್ಯಾಲಯದ ಕುಲಪತಿ ನೇಮಕ ವಿಚಾರದಲ್ಲಿ ನಾನು ಅನಂತಮೂರ್ತಿಯವರಿಂದ ಕಲಿಯುವ ಅವಶ್ಯಕತೆಯಿಲ್ಲ. ಕುಲಪತಿ ನೇಮಕ ನನ್ನ ಪರಮಾವಧಿ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅನಂತಮೂರ್ತಿಯವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು (ಜ 30) ಚಿಂತನಾಸಭೆಯಲ್ಲಿ ಮಾತನಾಡುತ್ತಿದ್ದ ರಾಜ್ಯಪಾಲರು, ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ನನ್ನ ಅಧಿಕಾರವನ್ನು ಪ್ರಶ್ನಿಸುವ ಹಕ್ಕು ಅನಂತಮೂರ್ತಿಯವರಿಗಿಲ್ಲ. ಕುಲಪತಿ ನೇಮಕಾತಿ ನನ್ನ ವಿವೇಚನೆಗೆ ಬಿಟ್ಟ ವಿಚಾರ ಎಂದು ಭಾರದ್ವಾಜ್ ಹೇಳಿದ್ದಾರೆ.
ಕುಲಪತಿ ನೇಮಕಾತಿ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಅನಂತಮೂರ್ತಿಯವರು ಆರೋಪಿಸಿದ್ದಾರೆ. ಶೋಧನಾ ಸಮಿತಿ ಶಿಫಾರಸು ಮಾಡಿದ ಹೆಸರನ್ನೇ ಅಂತಿಮ ಗೊಳಿಸಬೇಕೆಂದು ಕಾನೂನು ಇಲ್ಲ. ಹೊರಗಿನವರನ್ನು ನೇಮಿಸಬಾರದೆನ್ನುವ ಕಟ್ಟುಪಾಡುಗಳಿಲ್ಲ. ನನಗೇನು ನಿರ್ಧಾರ ತೆಗೆದು ಕೊಳ್ಳಬೇಕೆನ್ನುವುದು ತಿಳಿದಿದೆ ಎಂದು ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಲಪತಿ ನೇಮಕಾತಿ ವಿಚಾರದಲ್ಲಿ ಯಾರೂ ಮೂಗು ತೂರಿಸುವ ಅವಶ್ಯಕತೆಯಿಲ್ಲ. ಶೋಧನಾ ಸಮಿತಿಯನ್ನು ನೇಮಿಸಿದ್ದೇ ನಾನು. ನನ್ನನ್ನು ಪ್ರಶ್ನಿಸಲು ಅನಂತಮೂರ್ತಿ ಯಾರು ಎಂದು ರಾಜ್ಯಪಾಲರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. [ನಿಂದಕರಿರಬೇಕು ಅಂದಿಯತರಅ ನಿಂದಕರಿರಬೇಕು]
ಬಜೆಟ್ ಜಂಟಿ ಅಧಿವೇಶನದಲ್ಲಿ ನನ್ನ ಭಾಷಣದ ಬಗ್ಗೆ ಟೀಕೆ ವ್ಯಕ್ತವಾಗಿದೆ. ನಾನು ಸದನದಲ್ಲಿ ಮಾಡಿದ ಭಾಷಣ ನನ್ನ ಅಭಿಪ್ರಾಯವಲ್ಲ. ಅದು ಸರಕಾರದ ಅಭಿಪ್ರಾಯ. ಸರಕಾರ ಏನು ಬರೆದು ಕೊಟ್ಟಿದಿಯೋ ಅದನ್ನು ಯಥಾವತ್ತಾಗಿ ಓದಿದ್ದೇನೆ ಎಂದು ತನ್ನ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ. (ಕಾಂಗ್ರೆಸ್ ಸರ್ಕಾರದಿಂದ ಸ್ವಚ್ಛ ಆಡಳಿತ : ರಾಜ್ಯಪಾಲ)
ನನ್ನ ಭಾಷಣದ ಬಗ್ಗೆ ಟೀಕೆ ಟಿಪ್ಪಣಿ ಮಾಡುವವರು ಇದನ್ನು ಮೊದಲು ಅರಿತಿರಲಿ. ಭಾಷಣದ ಬಗ್ಗೆ ಏನು ಆಪಾದನೆ ಇದ್ದರೂ ಅದು ರಾಜ್ಯ ಸರಕಾರಕ್ಕೆ ಸೇರಿದ್ದು ಎಂದು ರಾಜ್ಯಪಾಲ ಭಾರದ್ವಾಜ್ ಹೇಳಿದ್ದಾರೆ.