ಬಿಎಸ್ವೈ ಅವಧಿಯಲ್ಲೇ ಜನ ಭಾಗ್ಯವಂತರು: ರಾಜ್ಯಪಾಲ
ಬೆಂಗಳೂರು, ನ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ರಾಜ್ಯಪಾಲ ಭಾರದ್ವಾಜ್ ಅವರು ಪೆಟ್ಟುಕೊಟ್ಟಿದ್ದಾರೆ. ತನ್ಮೂಲಕ ಸಿಎಂ ಸಿದ್ದು ಸರಕಾರ ಶಿಕ್ಷಣಕ್ಕೆ ಒತ್ತುನೀಡದೆ ರಾಜಕೀಯವಾಗಿ ಜನಪ್ರಿಯ/ಅಗ್ಗದ ಕಾರ್ಯಕ್ರಮಗಳಿಗಷ್ಟೇ ಪ್ರಾಶಸ್ತ್ಯ ನೀಡುತ್ತಿರುವುದನ್ನು ಸ್ವತಃ ನಾಡಿನ ರಾಜ್ಯಪಾಲರೇ ಎತ್ತಿತೋರಿಸಿದ್ದಾರೆ.
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ನೆನಪಿಸಿಕೊಂಡ ರಾಜ್ಯಪಾಲ ಭಾರದ್ವಾಜ್ ಅವರು ಯಡಿಯೂರಪ್ಪ ಅವರ ಆಡಳಿತವೇ ವಾಸಿ ಎಂದು ಸರ್ಟಿಫಿಕೇಟ್ ನೀಡಿದ್ದಾರೆ. ಅಷ್ಟೇ ಅಲ್ಲ. 'ನಾನೇ ಇದನ್ನು ಹೇಳಿದ್ದೇನೆ ಎಂದು ಸೀದಾ ನಿಮ್ಮ ಮುಖ್ಯಮಂತ್ರಿ ಬಳಿ ಹೋಗಿ ಹೇಳಿ' ಎಂದೂ ಹಾಲಿ ಸಿಎಂ ಸಿದ್ದರಾಮಯ್ಯ ಸಂಪುಟದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಅವರಿಗೆ ಹೇಳಿ ಕಳುಹಿಸಿದ್ದಾರೆ. ಆ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ!
ಆದರೆ ಇದರಿಂದ ಶಾದಿ ಭಾಗ್ಯ, ಬಿಪಿಎಲ್ ಗೆ ಮಾತ್ರ ಪಡಿತರ, ಜತೆಗೆ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಪ್ರವಾಸ ಭಾಗ್ಯ ನೀಡುವುದನ್ನು ವಿರೋಧಿಸಿ ವೀರಾವೇಶದಿಂದ ಹೋರಾಡುತ್ತಿರುವ ಕೆಜೆಪಿ ನಾಯಕ/ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಹೆಚ್ಚಿನ ಬಲ ಬಂದಂತಾಗಿದೆ.
ವಿಷಯ ಏನಪ್ಪಾ ಅಂದರೆ ರಾಜ್ಯ ಉರ್ದು ಅಕಾಡೆಮಿಗೆ ಅಧ್ಯಕ್ಷರನ್ನು ನೇಮಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅನೇಕ ಬಾರಿ ಸಿದ್ದು ಸರಕಾರಕ್ಕೆ ಕಿವಿಮಾತು ಹೇಳಿದ್ದರು. ಆದರೆ ಶಿಕ್ಷಣ ಆಮೇಲೆ ಕೊಟ್ಟರಾಯ್ತು ಎಂದು ದಿವ್ಯ ಉದಾಸೀನ ತಾಳಿದ ಸಿದ್ದರಾಮಯ್ಯ ಅವರು ಅಕಾಡೆಮಿಗೆ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ.
ಇಂಡಿಯನ್ ರೆಡ್ಕ್ರಾಸ್ ಸೊಸೈಟಿ, ಅಮೆರಿಕದ ಸ್ಟಾರ್ಕಿ ಫೌಂಡೇಷನ್ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಶ್ರವಣ ಸಾಧನ ವಿತರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಮತ್ತು ಅಲ್ಪಸಂಖ್ಯಾತರ ಸಚಿವರು ಭಾಗವಹಿಸಿದ್ದರು.
ರಾಜ್ಯಪಾಲರು ಭಾಷಣ ಮುಗಿಸಿ ತಮ್ಮ ಕುರ್ಚಿಯತ್ತ ಹೊರಟರು. ಆದರೆ ಎದುರಿಗೆ ಅಲ್ಲಿಯೇ ಇದ್ದ ಖಮರುಲ್ ಕಾಣಿಸಿಕೊಂಡಿದ್ದಾರೆ. ಅದೆಲ್ಲಿತ್ತೋ ಕೋಪ ರಾಜ್ಯಪಾಲರು ಏಕಾಏಕಿ 'ಉರ್ದು ಆಕಾಡೆಮಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರ ಎಲ್ಲಿಗೆ ಬಂತು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಡಬಡಾಯಿಸಿದ ಸಚಿವರನ್ನು ಕಂಡು ರಾಜ್ಯಪಾಲರು ಮತ್ತಷ್ಟು ಗರಂ ಆಗಿದ್ದಾರೆ. ಕೊನೆಗೆ, ಸಚಿವರ ಸಾಲಿನಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲೂ ಇಷ್ಟಪಡದೆ ಕಾರ್ಯಕ್ರಮದಿಂದ ಹಠಾತ್ತಾಗಿ ನಿರ್ಗಮಿಸಿದರು.
ಅಂದಹಾಗೆ, ಅಧ್ಯಕ್ಷರ ನೇಮಕ ವಿಚಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಚಿವ ಖಮರುಲ್ಲಾಗೆ ಈ ಹಿಂದೆಯೂ ಎರಡು ಬಾರಿ ಸಲಹೆ ಮತ್ತು ಸೂಚನೆ ನೀಡಿದ್ದರು. ಸೂಕ್ತ ವ್ಯಕ್ತಿಯೊಬ್ಬರನ್ನು ಆ ಸ್ಥಾನಕ್ಕೆ ನೇಮಕ ಮಾಡುವಂತೆ ಕಿವಿ ಮಾತು ಹೇಳಿದ್ದರು.
ಆದರೂ ನೇಮಕ ಪ್ರಕ್ರಿಯೆಯಲ್ಲಿ ಸರಕಾರ ತನ್ನ ವಿಳಂಬ ಧೋರಣೆ ಮುಂದುವರಿಸಿತ್ತು. ಮುಂದೊಂದು ದಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಸಮ್ಮುಖದಲ್ಲೇ ಉರ್ದು ಮಂಚ್ ಅಧ್ಯಕ್ಷರು ಹಾಗೂ ಕೆಲ ಸಾಹಿತಿಗಳು ರಾಜ್ಯಪಾಲರ ಬಳಿ ದೂರು ತೋಡಿಕೊಂಡಿದ್ದರು.
ಆಗಲೂ ಪರೋಕ್ಷವಾಗಿ ಕುಟುಕಿದ್ದ ರಾಜ್ಯಪಾಲರು, ನಿಮ್ಮ ಅಭಿಪ್ರಾಯವನ್ನು ಸರ್ಕಾರ ಕೇಳಿಸಿಕೊಂಡಿದೆ. ಪರಿಹಾರ ಸಿಗದಿದ್ದರೆ ನನ್ನ ಬಳಿ ಬನ್ನಿ. ಸರ್ಕಾರದ ಕೆಲಸವನ್ನು ನಾನು ಮಾಡಿ ತೋರಿಸುತ್ತೇನೆ. ರಾಜಭವನದ ಬಾಗಿಲು ಸದಾ ತೆರೆದಿರುತ್ತದೆ ಎಂದು ಅಭಯ ನೀಡಿದ್ದರು.
ಆದರೆ ಇದಾಗಿ ತಿಂಗಳು ಕಳೆದರೂ ಉರ್ದು ಅಕಾಡೆಮಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲಿಲ್ಲ. ಕೇಳೋಣವೆಂದರೆ ಸಚಿವರ ಖಮರುಲ್ ಸಹ ಸಿಕ್ಕಿರಲಿಲ್ಲ. ಹೀಗಾಗಿ ಶುಕ್ರವಾರದ ಕಾರ್ಯಕ್ರಮದಲ್ಲಿ ಸಚಿವರು ರಾಜ್ಯಪಾಲರ ಕೈಗೆ ಸಿಕ್ಕಿ ಹಾಕಿಕೊಂಡರು.
ಅಷ್ಟು ಮಾತ್ರವಲ್ಲ. 'ನಾನು ಈ ರಾಜ್ಯದ ರಾಜ್ಯಪಾಲ. ನೀವು ನೇಮಕ ಮಾಡದಿದ್ದರೆ ನನಗೆ ಆ ಕೆಲಸ ಮಾಡುವ ಅಧಿಕಾರವಿದೆ ಎನ್ನುವುದನ್ನು ಮರೆಯಬೇಡಿ' ಎಂದು ಚಾಟಿ ಏಟು ಬೀಸಿದರು. ಇದರಿಂದ ಕಂಗಾಲಾದ ಖಮರುಲ್, ಇಲ್ಲ ಇಲ್ಲ, ಆದಷ್ಟು ಬೇಗ ನಿಮ್ಮ ಸೂಚನೆ ಪ್ರಕಾರವೇ ಉರ್ದು ಅಕಾಡೆಮಿಗೆ ಅಧ್ಯಕ್ಷರನ್ನು ನೇಮಕ ಮಾಡುತ್ತೇನೆ ಎಂದು ರಾಜ್ಯಪಾಲರ ಕೋಪ ಶಮನ ಮಾಡುವ ಪ್ರಯತ್ನ ನಡೆಸಿದರು.