ಪತನವಾಯ್ತು ಮೈತ್ರಿ ಸರ್ಕಾರದ ಮೊದಲ ವಿಕೆಟ್: ಖಾಲಿಯಾದ ಸ್ಥಾನ ತುಂಬುವವರಾರು?
Recommended Video
ಬೆಂಗಳೂರು, ಅಕ್ಟೋಬರ್ 15: ನಿರೀಕ್ಷೆಯಂತೆಯೇ ರಾಜ್ಯ ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದೆ.
ಸಚಿವ ಸ್ಥಾನಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಸೋಮವಾರ ಅಂಗೀಕರಿಸಿದ್ದಾರೆ.
ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ, ಮೈತ್ರಿ ಸರ್ಕಾರಕ್ಕೆ ಪೆಟ್ಟು
ರಾಜ್ಯದಲ್ಲಿ ಜೆಡಿಎಸ್-ಬಿಎಸ್ಪಿಗಳು ಚುನಾವಣಾ ಪೂರ್ವದಲ್ಲಿ ಮಾಡಿಕೊಂಡಿದ್ದ ಮೈತ್ರಿಯ ಲಾಭದಿಂದ ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿಯೇ ಸಚಿವರಾಗುವ ಅವಕಾಶ ಪಡೆದುಕೊಂಡಿದ್ದ ಮಹೇಶ್, ಅಧಿಕೃತವಾಗಿ ಸಂಪುಟದಿಂದ ಹೊರಹೋಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜೆಡಿಎಸ್ ಮೈತ್ರಿಯ ಭಾಗವಾಗಿದ್ದ ಎನ್. ಮಹೇಶ್, ಸಹಜವಾಗಿಯೇ ಸಚಿವ ಸ್ಥಾನಕ್ಕೇರುವ ಅವಕಾಶ ಪಡೆದುಕೊಂಡಿದ್ದರು. ಈ ಮೂಲಕ ದೇಶದಲ್ಲಿ ಬಿಎಸ್ಪಿಯ ಏಕೈಕ ಹಾಲಿ ಸಚಿವ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
ಬಿಎಸ್ಪಿ ನಾಯಕಿ ಮಾಯಾವತಿ ಅವರ ಸೂಚನೆ ಮೇರೆಗೆ ಅಕ್ಟೋಬರ್ 11ರಂದು ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಬಿಎಸ್ಪಿಯ ಆಂತರಿಕ ವಿಚಾರವಾಗಿರುವುದರಿಂದ ಈ ಬಗ್ಗೆ ಮರುಪ್ರಶ್ನಿಸದೆ ರಾಜೀನಾಮೆ ಅಂಗೀಕರಿಸಿದ್ದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದರು. ಬಳಿಕ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾಗಿ ಹೇಳಿದ್ದರು.
ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ : ಯಾರು, ಏನು ಹೇಳಿದರು?
ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದರಿಂದ ಚುನಾವಣೆ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಾಧ್ಯವಿಲ್ಲ. ಈಗ ತೆರವಾಗಿರುವ ಸ್ಥಾನಕ್ಕೆ ತಕ್ಷಣವೇ ನೂತನ ಸಚಿವರನ್ನು ನೇಮಕ ನಡೆಯುವುದು ಅನುಮಾನ.
ಸಚಿವ ಮಹೇಶ್ ರಾಜಿನಾಮೆ, ರಾಜ್ಯಪಾಲರಿಗೆ ರವಾನೆ : ಎಚ್ಡಿಕೆ ಸ್ಪಷ್ಟನೆ
ಹೀಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಈ ಖಾತೆಯ ಹೊಣೆಯನ್ನು ನಿಭಾಯಿಸಬಹುದು. ಅಥವಾ ಸಂಪುಟದಲ್ಲಿ ಇರುವ ಬೇರೆ ಸಚಿವರಿಗೆ ಹೆಚ್ಚುವರಿಯಾಗಿ ಈ ಖಾತೆಯ ಹೊಣೆಗಾರಿಕೆಯನ್ನು ವಹಿಸುವ ಸಾಧ್ಯತೆ ಇದೆ.