ಮಠಗಳಿಗೆ ನಾಳೆಯಿಂದಲೇ ಅಕ್ಕಿ-ಗೋಧಿ ಸರಬರಾಜು: ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 04: ಸಿದ್ದಗಂಗಾ ಮಠ ಸೇರಿ ರಾಜ್ಯದ 454 ವಿವಿಧ ಸಂಸ್ಥೆಗಳು ಮಠಗಳಿಗೆ ಅಕ್ಕಿ-ಗೋಧಿ ಸರಬರಾಜು ನಿಲ್ಲಿಸಿರುವ ಕ್ರಮ ಬಹಿರಂಗವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಎಚ್ಚೆತ್ತುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ, 'ನಾಳೆಯಿಂದಲೇ ಮಠಗಳಿಗೆ ತಡೆಹಿಡಿಯಲಾಗಿದ್ದ ಅಕ್ಕಿ-ಗೋಧಿ ಸರಬರಾಜು ಮುಂದುವರೆಸಲಾಗುವುದು' ಎಂದಿದ್ದಾರೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, 'ಎಷ್ಟೇ ಆರ್ಥಿಕವಾಗಿ ಭಾರವಾದರೂ ಸಹ ಮಠಗಳಿಗೆ ನೀಡಲಾಗುತ್ತಿದ್ದ ಅಕ್ಕಿ-ಗೋಧಿಯನ್ನು ಕಡಿತಗೊಳಿಸುವುದಿಲ್ಲ' ಎಂದು ಭರವಸೆ ನೀಡಿದರು.
'ಈ ಬಗ್ಗೆ ಸಚಿವ ಸಂಪುಟದಲ್ಲಿಯೂ ಚರ್ಚೆ ಮಾಡಲಾಗಿದೆ. ಬಿಪಿಎಲ್ ಗಳಿಗೆ ಅಕ್ಕಿ ಪ್ರಮಾಣ ಕಡಿಮೆ ಮಾಡಿರುವ ಬಗ್ಗೆ ಈಗ ಚರ್ಚೆ ಬೇಡ' ಎಂದೂ ಸಹ ಅವರು ಹೇಳಿದರು.
ಮಠಗಳಿಗೆ ತಡೆ ಹಿಡಿಯಲಾಗಿದ್ದ ಅಕ್ಕಿ-ಗೋಧಿ ಸರಬರಾಜು ಮಾಡಲಾಗುತ್ತಿದೆ. ಆದರೆ ವಿವಿಧ ಸೇವಾ ಸಂಘ-ಸಂಸ್ಥೆಗಳಿಗೆ ತಡೆ ಹಿಡಿಯಲಾಗಿದ್ದ ಧಾನ್ಯವನ್ನು ಸರಬರಾಜು ಮಾಡಲಾಗುತ್ತದೆಯೇ ಎಂಬ ಬಗ್ಗೆ ಸಿಎಂ ಮಾಹಿತಿ ನೀಡಿಲ್ಲ.
ಮಠಗಳು ಸೇರಿದಂತೆ ಅನಾಥಾಶ್ರಮ, ವೃದ್ಧಾಶ್ರಮ, ಬುದ್ದಿಮಾಂದ್ಯರ ಚಿಕಿತ್ಸಾ ಕೇಂದ್ರ, ಭಿಕ್ಷುಕರ ಪುನರ್ವಸತಿ ಕೇಂದ್ರ ಸೇರಿದಂತೆ ಹಲವು ಸೇವಾ ಸಂಘಗಳಿಗೂ ಅಕ್ಕಿ-ಗೋಧಿ ಸರಬರಾಜು ನಿಲ್ಲಿಸಲಾಗಿತ್ತು. ಮಠಗಳಿಗೆ ನಾಳೆಯಿಂದಲೇ ಸರಬರಾಜು ಪುನರ್ ಪ್ರಾರಂಭಿಸುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಸಂಘ-ಸಂಸ್ಥೆಗಳ ಗತಿಯೇನು ಎಂಬುದು ಪ್ರಶ್ನೆಯಾಗಿದೆ.