ಆಗಸ್ಟ್ 14ರಂದು ಸರ್ಕಾರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಬೆಂಗಳೂರು, ಆಗಸ್ಟ್ 09: 2017 ನೇ ಸಾಲಿನ ರಾಜ್ಯ ಮಟ್ಟದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭವನ್ನು ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕತಿ ಇಲಾಖೆಯು ಆಗಸ್ಟ್ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.
ಈ ಸಮಾರಂಭದ ಅಂಗವಾಗಿ ಬೆಳಿಗ್ಗೆ 10:00 ಗಂಟೆಗೆ ಧರ್ಮರಾಯನ ದೇವಸ್ಥಾನದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಜಾನಪದ ಕಲಾಪ್ರದರ್ಶನವನ್ನು ಏರ್ಪಡಿಸಿದೆ.
ಬೆಳಿಗ್ಗೆ 11:00 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರು, ಚಿಕ್ಕಪೇಟೆ ವಿಧಾನ ಸಭಾಕ್ಷೇತ್ರ, ಆರ್. ವಿ. ದೇವರಾಜ್ ವಹಿಸಲಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ ಕುಮಾರ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್, ಬೆಂಗಳೂರು ನಗರ ಮಹಾ ಪೌರರರು ಶ್ರೀಮತಿ ಜಿ. ಪದ್ಮಾವತಿ, ಶಾಸಕಿ, ಪುತ್ತೂರು ವಿಧಾನ ಸಭಾ ಕ್ಷೇತ್ರ ಹಾಗೂ ಸಂಸದೀಯ ಕಾರ್ಯದರ್ಶಿ, ಶ್ರೀಮತಿ ಶಕುಂತಲಾ ಶೆಟ್ಟಿ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶ್ರೀ ಕೃಷ್ಣ ಜಯಂತಿ ಅಂಗವಾಗಿ ದಿನಾಂಕ: 14-08-2017 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀಮತಿ ಶ್ವೇತಾ ಪ್ರಭು ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಶ್ರೀಮತಿ ರಕ್ಷಾ ಜಯರಾಮ್ ಮತ್ತು ತಂಡದವರಿಂದ ಶ್ರೀ ಕೃಷ್ಣನ ಕುರಿತು ನೃತ್ಯರೂಪಕ ಹಾಗೂ ಡಿ. ಎನ್, ಮುನಿಕೃಷ್ಣ ಅವರಿಂದ ಶ್ರೀ ಕೃಷ್ಣನ ಕುರಿತು ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.