ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ: ಇಲ್ಲೊಂದು ಅಪಸ್ವರ
ಕಂಬಳ ಆಡುವವರಿಗೆ ಮತ್ತು ಬೇಕು ಎನ್ನುವವರಿಗೆ ವಿವೇಕ ಇಲ್ಲವೇ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬೇಸರ.
ಬೆಂಗಳೂರು, ಜ 27: ಪಕ್ಷಬೇಧ ಮೆರೆತು ಎಲ್ಲರೂ ಕಂಬಳದ ಪರವಾಗಿ ನಿಂತಿದ್ದರೆ, ನಾಡಿನ ಹಿರಿಯರೊಬ್ಬರು ಕಂಬಳ ಆಟದ ಬಗ್ಗೆ ಖಾರವಾದ ಮಾತನ್ನಾಡಿದ್ದಾರೆ.
ಕಂಬಳ ನಮ್ಮ ಸಂಸ್ಕೃತಿ ಎನ್ನುವವರ ಮಾತಿಗೆ ಸೊಪ್ಪು ಹಾಕಬೇಕಾಗಿಲ್ಲ. ಕಂಬಳ ಒಂದು ಅಸಹ್ಯವಾದ ಕ್ರೀಡೆ, ಇದನ್ನು ಆಡುವವರಿಗೆ ಮಾನ ಮರ್ಯಾದೆ ಎನ್ನುವುದು ಇಲ್ಲ, ಎಂದು ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. (ಕಂಬಳಕ್ಕಾಗಿ ಕರ್ನಾಟಕದಾದ್ಯಂತ ಏರುತ್ತಿದೆ ಕಾವು)
ಎತ್ತುಗಳಿಗೆ ಹಿಂಸೆ ನೀಡುವ ಇದೂ ಒಂದು ಕ್ರೀಡೆನಾ, ಇದು ನಮ್ಮ ಸಂಪ್ರದಾಯಕ್ಕೆ ವಿರುದ್ದವಾದ ಕ್ರೀಡೆಯಾಗಿದ್ದು. ಸರಕಾರ ಯಾವುದೇ ಕಾರಣಕ್ಕೆ ಇದಕ್ಕೆ ಅನುಮತಿ ನೀಡಬಾರದೆಂದು ದೊರೆಸ್ವಾಮಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಕಂಬಳ ಕ್ರೀಡೆ ನನ್ನ ವಿರೋಧವಿಲ್ಲ, ಆದರೆ ಕಂಬಳದ ಹೆಸರಿನಲ್ಲಿ ಕೊರಗ ಸಮುದಾಯದವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ನನ್ನ ವಿರೋಧವಿದೆ ಎಂದು ಒಂದು ದಿನದ ಹಿಂದೆ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯ ಪಟ್ಟಿದ್ದರು.
ಕರಾವಳಿ ಭಾಗದಲ್ಲಿ ನಡೆಯುವ ಕಂಬಳ ಒಂದು ಅಮಾನವೀಯವಾದ ಆಟ. ಎತ್ತುಗಳಿಗೆ ಹಿಂಸೆ ನೀಡಲಾಗುತ್ತಿದೆ, ಇದನ್ನು ಆಡುವವರಿಗೆ, ಆಡಿಸುವವರಿಗೆ ಮತ್ತು ಕಂಬಳ ಬೇಕು ಅನ್ನುವವರಿಗೆ ವಿವೇಕ ಎನ್ನುವುದಿಲ್ಲವೇ?
ಬುದ್ದಿ ಇದ್ದವರು ಯಾರೂ ಕಂಬಳ ಬೇಕು ಎಂದು ಹೋರಾಟ ಮಾಡುವುದಿಲ್ಲ ಎಂದು ದೊರೆಸ್ವಾಮಿ ಕಂಬಳ ಪ್ರಿಯರ ವಿರುದ್ಧ ಕಿಡಿಕಾರಿದ್ದಾರೆ.
ಇತ್ತ ಕಂಬಳಕ್ಕೆ ತಮಿಳು ಸಂಘಟನೆಗಳೂ ಬೆಂಬಲ ನೀಡಿದ್ದು, ಎಐಎಡಿಎಂಕೆ ಕಾರ್ಯಕರ್ತರು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಕರವೇ ಪ್ರವೀಣ್ ಶೆಟ್ಟಿ ಬಣ ಹೆಬ್ಬಾಳದಿಂದ ವಿಧಾನಸೌಧದವರೆಗೆ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಿದೆ. ಇದೇ ಭಾನುವಾರ (ಜ 29) ಕಂಬಳದ ಪರವಾಗಿ ಬೃಹತ್ ಹೋರಾಟ ಫ್ರೀಡಂಪಾರ್ಕ್ ನಲ್ಲಿ ನಡೆಯಲಿದೆ.