ಶಬರಿಮಲೆ ಭಕ್ತರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ
ಬೆಂಗಳೂರು, ನವೆಂಬರ್ 25: ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ತೆರಳುವ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ.
ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರಿಗೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಭಕ್ತರು ಆನ್ಲೈನ್ನಲ್ಲಿ ತಮ್ಮ ಯಾತ್ರೆಯ ಸಮಯವನ್ನು ಕಾಯ್ದಿರಿಸಬೇಕು. ಜತೆಗೆ ಅಲ್ಲಿಗೆ ಭೇಟಿ ನೀಡಿದ 24 ಗಂಟೆಯಲ್ಲಿ ಕೋವಿಡ್ ನೆಗೆಟಿವ್ ಪರೀಕ್ಷೆಯ ವರದಿಯನ್ನು ನೀಡಬೇಕು. ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರವೇ ಅಲ್ಲಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಒಂದು ವೇಳೆ ಸೋಂಕು ಇರುವುದು ಕಂಡುಬಂದರೆ ಅಲ್ಲಿನ ಆಸ್ಪತ್ರೆಗಳಿಗೆ ದಾಖಲಾಗಬೇಕು. ಹಾಗೆಯೇ ಈ ಬಾರಿ ಯಾತ್ರೆಯ ಸ್ಥಳಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿಲ್ಲ.
ಶಬರಿಮಲೆ; ಭಕ್ತರ ಸಂಖ್ಯೆ ಏರಿಕೆಗೆ ಸರ್ಕಾರದ ಚಿಂತನೆ
ಈ ಕಾರಣಗಳಿಂದಾಗಿ ರಾಜ್ಯದಿಂದ ತೆರಳುವ ಭಕ್ತರಿಗೆ ಆರೋಗ್ಯ ರಕ್ಷಣೆಗಾಗಿ ಮಾಹಿತಿಗಳನ್ನು ಒದಗಿಸಲು ಸಹಾಯವಾಣಿಯನ್ನು ತೆರೆಯಲಾಗಿದೆ. ಕೇರಳ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಭಕ್ತರು ಸಾಗಬೇಕಿರುವುದರಿಂದ ಈ ಸಹಾಯವಾಣಿ ನೆರವಾಗಲಿದೆ.
ಶಬರಿಮಲೆ ಯಾತ್ರೆಯ ವೇಳೆ ಮಾಹಿತಿಗಳು ಬೇಕಾದಾಗ ಅಥವಾ ಯಾವುದೇ ಸಮಸ್ಯೆಗಳು ಉಂಟಾದಾಗ ಭಕ್ತರು 080-2670 9689 ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೆರವು ಕೇಳಬಹುದು. ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಲ್ಲಿ ಈ ಸಹಾಯವಾಣಿಯನ್ನು ತೆರೆಯಲಾಗಿದೆ.