ಮಲ್ಲೇಶ್ವರ ಸ್ಫೋಟ ಪ್ರಕರಣ ː ಸಂತ್ರಸ್ತೆ ಲಿಷಾಗೆ ಸರ್ಕಾರಿ ಉದ್ಯೋಗ
ಬೆಂಗಳೂರು, ಜುಲೈ 30: ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ 2013 ಏಪ್ರಿಲ್ 17ರಂದು ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಲಿಷಾಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಕೊನೆಗೂ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಗ್ರೂಪ್ ಸಿ(ಎಫ್ ಡಿಐ) ಶ್ರೇಣಿ ಹುದ್ದೆ ನೀಡಲಾಗಿದೆ.
ಹೈಕೋರ್ಟ್ ಆದೇಶಕ್ಕೆ ಮಣಿದ ಕರ್ನಾಟಕ ಸರ್ಕಾರ, ಲಿಷಾಗೆ ಅಗ್ನಿಶಾಮಕ ಮತ್ತು ಗೃಹ ರಕ್ಷಕ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ(ಎಫ್ಡಿಐ) ಹುದ್ದೆ ನೀಡಿದೆ.
2013 ರ ಏಪ್ರಿಲ್ 17 ರಂದು ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ನಡೆದಿತ್ತು. ಈ ವೇಳೆ ಕಾಲೇಜಿನಿಂದ ಹಿಂತಿರುಗುತ್ತಿದ್ದ ಲೀಷಾ ಗಂಭೀರವಾಗಿ ಗಾಯಗೊಂಡಿದ್ದರು. 2016ರ ಅಕ್ಟೋಬರ್ ನಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಜೊತೆಗೆ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೂ ಸೂಚಿಸಿತ್ತು.
'ಅಂಗವಿಕಲ ಕೋಟಾದಡಿಯಲ್ಲಿ ಉದ್ಯೋಗ ನೀಡಬೇಕು, 1 ಕೋಟಿ ಪರಿಹಾರ ನೀಡಬೇಕು' ಎಂದು ಹೈಕೋರ್ಟಿಗೆ 2015ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರವು ಪರಿಹಾರ ರೂಪದಲ್ಲಿ 8.24 ಲಕ್ಷ ರು ಮಾತ್ರ ನೀಡಿದೆ.
ದಾಳಿಗೆ ತುತ್ತಾದವರಿಗೆ ನೀಡುವ ಪರಿಹಾರ ಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ರಾಷ್ಟ್ರೀಯ ನೀತಿಯಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ಇದರ ಸಲುವಾಗಿ ವಿಶೇಷ ಸಮಿತಿ ನೇಮಿಸುವ ಅಗತ್ಯವಿದೆ ಎಂದು ಲಿಷಾ ಕೋರಿದ್ದರು. ಕಬ್ಬಿಣದ ಚೂರುಗಳು ಅವರ ಎಡಗಾಲಿಗೆ ಹೊಕ್ಕಿತ್ತು. ಲಿಷಾ ಅವರ ಕಾಲಿಗೆ ಚಿಕಿತ್ಸೆಗೆ ಸುಮಾರು 10 ಲಕ್ಷ ರು ಖರ್ಚಾಗಿದೆ. ಮಹಾರಾಣೀಸ್ ಅಮ್ಮಣಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಲಿಷಾ ಅವರು ಆಸ್ಪತ್ರೆಯಲ್ಲೇ ಇದ್ದಾಗಲೇ ಸಿಇಟಿ ಬರೆದಿದ್ದರು.