Just in: ಕರ್ನಾಟಕದಲ್ಲಿ ಮಳೆ ಅಬ್ಬರ, ಪರಿಹಾರಕ್ಕೆ 200 ಕೋಟಿ ಬಿಡುಗಡೆ
ಬೆಂಗಳೂರು,ಆಗಸ್ಟ್ 07: ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸರ್ಕಾರ 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತುಕಡಿಗಳ ರಚನೆಗೆ ಸೂಚನೆ ನೀಡಿದ್ದಾರೆ.
ಮಳೆ ಪೀಡಿತ ಜಿಲ್ಲೆಗಳ ಉಪ ಆಯುಕ್ತರು (ಡಿಸಿಗಳು), ಸಚಿವರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರವಾಹ ಹಾನಿ, ಭೂಕುಸಿತ, ಬೆಳೆ ನಷ್ಟ ಮತ್ತು ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ವಿವರಗಳನ್ನು ಪಡೆದರು.
ಜೂನ್ 1 ರಿಂದ ಆಗಸ್ಟ್ 6 ರವರೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಈವರೆಗೆ 70 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 507 ಜಾನುವಾರುಗಳ ನಾಪತ್ತೆಯಾಗಿರುವ ವರದಿಯಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಪರಿಹಾರ ಮತ್ತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚುವರಿ ಎಸ್ಡಿಆರ್ಎಫ್ ತುಕಡಿಗಳನ್ನು ರಚಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳು ರಕ್ಷಣಾ ತಂಡಗಳೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ತಕ್ಷಣ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆಗೆ ಹಣದ ಕೊರತೆ ಇಲ್ಲ ಎಂದ ಮುಖ್ಯಮಂತ್ರಿಗಳು, ಈಗಾಗಲೇ 21 ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಜೀವಹಾನಿ ಮತ್ತು ಹಾನಿಗೊಳಗಾದ ಮನೆಗಳಿಗೆ ಪರಿಹಾರವನ್ನು ನೀಡಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಆಗಸ್ಟ್ 2 ರವರೆಗೆ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಬಳಿ ₹ 657 ಕೋಟಿ ಲಭ್ಯವಿತ್ತು ಎನ್ನಲಾಗಿದ್ದು, ಈಗ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 21 ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಸರಬರಾಜು ಮಾರ್ಗಗಳ ದುರಸ್ತಿ ಮಾಡಿಸಿ, ಆದಷ್ಟು ಬೇಗ ಸಂಪರ್ಕವನ್ನು ಮತ್ತೆ ಪುನರ್ ನಿರ್ಮಾಣ ಮಾಡಬೇಕು. ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಮರುಸ್ಥಾಪಿಸಬೇಕು, ಈ ನಿಟ್ಟಿನಲ್ಲಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ (ಎಸ್ಕಾಂ) ಜಿಲ್ಲಾಧಿಕಾರಿಗಳು ಮಾತನಾಡಬೇಕು. ಬೆಳೆ ನಷ್ಟದ ಸಮೀಕ್ಷೆಯನ್ನು ಶೀಘ್ರವಾಗಿ ಮುಗಿಸಿ, ಯಾವುದೇ ವಿಳಂಬವಿಲ್ಲದೆ ಪರಿಹಾರವನ್ನು ವಿತರಿಸಬೇಕು ಎಂದು ಹೇಳಿದ್ದಾರೆ.
ಮಳೆಯಿಂದಾಗಿ ರಾಜ್ಯದಲ್ಲಿ 3,559 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದರೆ, 17,212 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 1,29,087 ಹೆಕ್ಟೇರ್ನಲ್ಲಿ ಕೃಷಿ ಬೆಳೆಗಳು, 7,942 ಹೆಕ್ಟೇರ್ನಲ್ಲಿ ತೋಟಗಾರಿಕೆ ಬೆಳೆಗಳು, 3,162 ಕಿಮೀ ರಸ್ತೆಗಳು, 8,445 ಕಿಮೀ ಗ್ರಾಮೀಣ ರಸ್ತೆಗಳು, 1,068 ಸೇತುವೆಗಳು ಮತ್ತು ಮೋರಿಗಳು, 4,531 ಶಾಲೆಗಳು, 222 ಅಂಗನವಾಡಿಗಳು ಹಾನಿಗೊಳಗಾಗಿವೆ.
ಇದರ ಜೊತೆಗೆ 16,760 ವಿದ್ಯುತ್ ಕಂಬಗಳು, 1,469 ಟ್ರಾನ್ಸ್ಫಾರ್ಮರ್ಗಳು, 409 ಕಿಮೀ ವಿದ್ಯುತ್ ತಂತಿಗಳು ಮತ್ತು 33 ಸಣ್ಣ ನೀರಾವರಿ ಟ್ಯಾಂಕ್ಗಳು ಭಾರಿ ಮಳೆಯಿಂದ ಹಾನಿಗೊಳಗಾಗಿವೆ.