ಮುಜರಾಯಿ ದೇವ್ರ ದುಡ್ಡು ಹಜ್ ಯಾತ್ರೆಗಾ, ಸಚಿವರ ಸ್ಪಷ್ಟನೆ ಏನು?
ಮುಜರಾಯಿ ದೇವಾಲಯಗಳ ದುಡ್ಡನ್ನು ಸರಕಾರ ಮಸೀದಿ, ಚರ್ಚ್, ಹಜ್ ಯಾತ್ರೆಗೆ ನೀಡುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮುಜರಾಯಿ ಖಾತೆಯ ಸಚಿವ ರುದ್ರಪ್ಪ ಲಮಾಣಿ ನೀಡಿರುವ ಸ್ಪಷ್ಟನೆ.
ಕುಕ್ಕೇ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ, ಬೆಟ್ಟದ ಮಾದಪ್ಪ, ಕಟೀಲು ದುರ್ಗಾಪರಮೇಶ್ವರಿ ಮುಂತಾದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಿಂದ ಸರಕಾರದ ಬೊಕ್ಕಸಕ್ಕೆ ಬಂದು ಬೀಳುವ ದುಡ್ಡೇನು ಕಮ್ಮೀನಾ?
ಆದರೆ, ದೇವಾಲಯಗಳಿಂದ ಬರುವ ಕೋಟ್ಯಾಂತರ ರೂಪಾಯಿ ಆದಾಯದ ಲೆಕ್ಕಪತ್ರವೇನು? ಈ ಹಣ ಹಿಂದೂ ದೇವಾಲಯಗಳ ಅಭಿವೃದ್ದಿ, ನಿರ್ವಹಣೆಗೆ ಮೀಸಲಾಗಿದೆಯಾ ಅಥವಾ ಈ ದುಡ್ಡು ಇತರ ಧರ್ಮೀಯರ ಪೂಜಾಕೇಂದ್ರಕ್ಕೆ ಅಥವಾ ಧಾರ್ಮಿಕ ಯಾತ್ರೆಗೆ ಬಳಕೆಯಾಗುತ್ತಿದೆಯಾ?
ಹುಂಡಿ ದುಡ್ಡು ಬೇಕು, ದೇವರು ಬೇಡಾಂದ್ರೆ ಹೇಗೆ ಮುಖ್ಯಮಂತ್ರಿಗಳೇ
ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಸುಮಾರು 34 ಸಾವಿರ ದೇವಾಲಯಗಳ ಪೈಕಿ, ಎ ವರ್ಗಕ್ಕೆ ಸೇರಿದ ದೇವಾಲಯಗಳು 125 ಮತ್ತು ಬಿ ವರ್ಗಕ್ಕೆ ಸೇರಿದ 179 ದೇವಾಲಯಗಳಿವೆ. ಈ ಎರಡು ವರ್ಗದ ದೇವಾಲಯಗಳಿಂದಲೇ ಸರಕಾರಕ್ಕೆ ವಾರ್ಷಿಕ 475 ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತದೆ.
ಇಷ್ಟಾದರೂ, ಕಳೆದ ಬಜೆಟ್ ನಲ್ಲಿ (2016) ಮುಜರಾಯಿ ವ್ಯಾಪ್ತಿಯ ದೇವಾಲಯಕ್ಕಾಗಲಿ, ಅರ್ಚಕರಿಗಾಗಲಿ ಸಿದ್ದರಾಮಯ್ಯ ಬಿಡಿಗಾಸು ನೀಡದೇ, ಹಜ್, ಮದರಸ, ಜೈನ ಬಸದಿ ಅಭಿವೃದ್ದಿಗೆ ಸಹಾಯಧನ ಘೋಷಿಸಿದ್ದರು.
ಈಗ ಮುಜರಾಯಿ ದೇವಾಲಯಗಳ ದುಡ್ಡನ್ನು ಸರಕಾರ ಮಸೀದಿ, ಚರ್ಚ್, ಹಜ್ ಯಾತ್ರೆಗೆ ನೀಡುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದೇವರ ಖಾತೆಯ ಸಚಿವ ರುದ್ರಪ್ಪ ಲಮಾಣಿ ನೀಡಿರುವ ಸ್ಪಷ್ಟನೆ ಮುಂದಿದೆ ನೋಡಿ..
ಅರ್ಚಕರ, ಸಿಬ್ಬಂದಿಗಳ ವೇತನ ಹೆಚ್ಚಳ
ನಮ್ಮ ಸರಕಾರ ಅರ್ಚಕರು, ಆಗಮಿಕರು, ಉಪಾಧಿವಂತರು ಮತ್ತು ದೇವಾಲಯ ಸಿಬ್ಬಂದಿಗಳ ವೇತನವನ್ನು ಹೆಚ್ಚಿಸಿದೆ. ಎ ಮತ್ತು ಬಿ ವರ್ಗದ ದೇವಾಲಯಗಳಿಂದ ಬರುವ ಆದಾಯವನ್ನು, ಕಮ್ಮಿ ಆದಾಯವಿರುವ ಮತ್ತು ಸರಕಾರದ ಅನುದಾನವನ್ನೇ ನಂಬಿಕೊಂಡಿರುವ ದೇವಾಲಯಗಳ ಅಭಿವೃದ್ದಿ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ - ಸಚಿವ ರುದ್ರಪ್ಪ ಲಮಾಣಿ
ಸತ್ಯಕ್ಕೆ ದೂರವಾದ ವಿಚಾರ
ಮುಜರಾಯಿ ದೇವಾಲಯಗಳ ದುಡ್ಡನ್ನು ಇತರ ಧರ್ಮದ ಪೂಜಾಕೇಂದ್ರಗಳಿಗೆ ಸರಕಾರ ಬಳಸಿಕೊಳ್ಳುತ್ತಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದು. ಸಾರ್ವಜನಿಕರು ಮತ್ತು ಭಕ್ತರು ಇದನ್ನು ನಂಬಬಾರದು. ದೇವರ ಬಗ್ಗೆ ವೀರಾವೇಶದಿಂದ ಮಾತನಾಡುವವರು ಸಾಮಾಜಿಕ ತಾಣದಲ್ಲಿ ಸುಳ್ಳುಸುದ್ದಿಯನ್ನು ಹರಿಯಬಿಟ್ಟಿದ್ದಾರೆಂದು ಸಚಿವ ಲಮಾಣಿ ಹೇಳಿದ್ದಾರೆ.
161 ಕೋಟಿ ರೂಪಾಯಿಯ ಲೆಕ್ಕವೇನು?
ಎ ಮತ್ತು ಬಿ ವರ್ಗದ ದೇವಾಲಯಗಳಿಂದ 476 ಕೋಟಿ ರೂಪಾಯಿ ಆದಾಯ ಬಂದಿದೆ, ನಿಮ್ಮ ಮಾಹಿತಿ ಪ್ರಕಾರ 314 ಕೋಟಿ ರೂಪಾಯಿ ಖರ್ಚಾಗಿದ್ದರೆ, 161 ಕೋಟಿ ರೂಪಾಯಿಯ ಲೆಕ್ಕವೇನು? ದೇವರ ದುಡ್ಡು ಹಜ್ ಯಾತ್ರೆಗೆ ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ, ಇದಕ್ಕೆ ಉತ್ತರ ಕೊಡಿ ಎಂದು ವಿಧಾನಪರಿಷತ್ ನಲ್ಲಿ ಬಸವರಾಜ ಪಾಟೀಲ ಯತ್ನಾಳ, ಸಚಿವರನ್ನು ಪ್ರಶ್ನಿಸಿದ್ದರು.
ಸರಕಾರ ಧಾರ್ಮಿಕ ದತ್ತಿ ಪರಿಷತ್ ನೇಮಕ ಮಾಡಿದೆ.
ಯತ್ನಾಳ ಪ್ರಶ್ನೆಗೆ ಉತ್ತರಿಸಿದ ಸಚಿವ ರುದ್ರಪ್ಪ ಲಮಾಣಿ, ಸರಕಾರ ಧಾರ್ಮಿಕ ದತ್ತಿ ಪರಿಷತ್ ಅನ್ನು ನೇಮಕ ಮಾಡಿದೆ. ಇದರಿಂದ ದೇವಾಲಯದಿಂದ ಬರುವ ಆದಾಯದಲ್ಲಿ ಶೇ.60ರಷ್ಟನ್ನು ಅದೇ ದೇವಾಲಯಕ್ಕೆ, ಶೇ. 35 ಪಕ್ಕದ ಇತರ ದೇವಾಲಯಗಳ ಅಭಿವೃದ್ದಿಗೆ ಮತ್ತು ಶೇ. 5ರಷ್ಟನ್ನು ಮಾತ್ರ ಸರಕಾರ ಪಡೆಯುತ್ತಿದೆ - ಸಚಿವ ಲಮಾಣಿ.
ಶ್ರೀಮಂತ ದೇವಾಲಯಗಳು
ಆದಾಯ ದೃಷ್ಟಿಯಿಂದ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಟಾಪ್ ಟೆನ್ ದೇವಾಲಯಗಳದ ಕುಕ್ಕೆ, ಕೊಲ್ಲೂರು, ಮಲೇ ಮಹಾದೇಶ್ವರ, ಚಾಮುಂಡೇಶ್ವರಿ, ಕಟೀಲು, ನಂಜನಗೂಡು, ಮೇಲುಕೋಟೆ, ಶ್ರೀರಂಗಪಟ್ಟಣ, ಸವದತ್ತಿ, ಮಂದರ್ತಿ ಮುಂತಾದ ದೇವಾಲಯಗಳಿಂದಲೇ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 475 ಕೋಟಿಗಿಂತಲೂ ಅಧಿಕ ಹಣ ಹರಿದು ಬರುತ್ತಿದೆ.