ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾದ ಬೇಡಜಂಗಮರು
ಬೆಂಗಳೂರು ಜು.3: ವಿವಿಧ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಸಭೆ ನಡೆಸಿದ ಬೇಡ ಜಂಗಮದ ಮಠಾಧೀಶರು ಮತ್ತು ಸಮುದಾಯದ ಸಂಘಟನೆಗಳ ಒಕ್ಕೂಟದ ಮುಖಂಡರು ಕರ್ನಾಟಕ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಬಿ. ಡಿ. ಹಿರೇಮಠ ವಿರುದ್ಧ 20 ಶಾಸಕರು ದೂರು ಕೊಟ್ಟಿದ್ದರ ವಿರುದ್ಧ ಬೇಡ ಜಂಗಮರು ಸಿಡಿದೆದ್ದಿದ್ದರು. ಅಲ್ಲದೇ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಜೂ.30ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದ್ದರು.
ಈ ವೇಳೆ ಪ್ರತಿಭಟನಾ ಸ್ಥಳವಾದ ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು ಉಪವಾಸ ಕುಳಿತಿದ್ದ ಮಠಾಧೀಶರನ್ನು ಉದ್ದೇಶಿಸಿ ಮಾತನಾಡಿದರು. ಚೆಕ್ ಪೋಸ್ಟ್ ಗಳಲ್ಲಿ ಬೇಡ ಜಂಗಮರನ್ನು ತಡೆದಿದ್ದಕ್ಕೆ ಕ್ಷಮೆಯಾಚಿಸಿದ್ದರು.
ಭರವಸೆಯಂತೆ ಬಾರದ ಆದೇಶ: ಜುಲೈ 1 ರೊಳಗೆ ಬೇಡ ಜಂಗಮರಿಗೆ ಮಾತ್ರವಲ್ಲದೇ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯದವರಿಗೆ ಅನ್ವಯವಾಗುವಂತೆ ಸಾಮಾನ್ಯ ಸುತ್ತೋಲೆ ಆದೇಶ ಹೊರಡಿಸುವುದಾಗಿ ಸರ್ಕಾರದ ಪರವಾಗಿ ಭರವಸೆ ನೀಡಿದ್ದರು. ಆದರೆ ನೀಡಿದ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ. ಜುಲೈ 2ಕಳೆದರೂ ಯಾವ ಆದೇಶವು ಪ್ರಕಟವಾಗದ ಹಿನ್ನೆಲೆ ಬೇಡ ಜನಾಂಗದ ಮುಖಂಡರು ಮಠಾಧೀಶರು ಸೇರಿ ನಡೆಸಿದ ಸಭೆಯಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧಾರ ಕೈಗೊಂಡಿದ್ದಾರೆ.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ. 30ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದ ಬೇಡ ಜಂಗಮರನ್ನು ಸರ್ಕಾರದ ಮೌಖಿಕ ಆದೇಶದ ಮೇರೆಗೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತಡೆದು ನಿಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡು ಸ್ಥಳದಲ್ಲೇ ಪ್ರತಿಭಟಿಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹುಸಿಯಾದ ನಿರೀಕ್ಷೆ; ತಮ್ಮ ನ್ಯಾಯಯುತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟದ ಹಾದಿ ಹಿಡಿದವರ ವಿರುದ್ಧ ಸರ್ಕಾರ ಹುನ್ನಾರ ನಡೆಸಿದೆ. ಲಾರಿ, ವಾಹನ ನಿಲ್ಲಿಸಲು ಸರ್ಕಾರ ಮೌಖಿಕ ಆದೇಶ ನೀಡಿರುವುದು ಬೇಡ ಜಂಗಮ ಮುಖಂಡರು ಹಾಗೂ ಮಠಾಧೀಶರ ಗಮನಕ್ಕೆ ಬಂದಿತ್ತು. ಆದರೂ ಸಹಿಸಿದ್ದ ಪ್ರತಿಭಟನಾಕಾರರು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭರವಸೆ ಈಡೇರಿಕೆಗೆ ಕಾಯುತ್ತಿದ್ದರು. ಆದರೆ ಆ ಭರವಸೆ ಹುಸಿಯಾದ ಹಿನ್ನೆಲೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಮಠಾಧೀಶರುಗಳಾದ ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಮಹಾಸ್ವಾಮಿಗಳು ಮತ್ತು ಒಕ್ಕೂಟದ ಅಧ್ಯಕ್ಷರಾದ ಬಿಡಿ ಹಿರೇಮಠ, ಜಿಎಂ ವಿಶ್ವನಾಥ ಸ್ವಾಮಿ, ಡಾ. ಎಂಪಿ ದಾರಕೇಶ್ವರಯ್ಯ, ವೀರಣ್ಣ ಹಿರೇಮಠ, ಎಂ ಮುದ್ದಯ್ಯ, ಸುಜಾತ ಮಠದ, ಹೇಮಲತಾ, ಪಂಕಜಾಕ್ಷಿ ಮುಂತಾದವರು ಹಾಜರಿದ್ದರು.
Recommended Video