ನಗರದ ಬೀದಿಗಳಲ್ಲಿ ಹೆಚ್ಚಾದ ಬೌ.. ಬೌ..: ನಿಭಾಯಿಸುವಲ್ಲಿ ಸರ್ಕಾರ ಅಸಹಾಯಕ
ಬೆಂಗಳೂರು ಮಾರ್ಚ್ 16: ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್ ಸೋಂಕು ನಿವಾರಕ ಲಸಿಕೆಗಳ ಹೊರತಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ನಮ್ಮಲ್ಲಿ ಬೇರೆ ಯಾವುದೇ ವ್ಯವಸ್ಥೆ ಇಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಡಿಸಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೀದಿನಾಯಿಗಳಿಂದ ಅನೇಕ ಜನರಿಗೆ ತೊಂದರೆಯುಂಟಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಕಚ್ಚಿರುವ ಪ್ರಕರಣಗಳು ನಡೆದಿವೆ. ಹೀಗಾಗಿ ಇದಕ್ಕೆ ಸೂಕ್ತಪರಿಹಾರಕ್ಕೆ ತಕ್ಷಣದ ಮಧ್ಯಸ್ಥಿಕೆ ಅಗತ್ಯವಿದೆ ಎಂದು ಶಾಸಕರು ಸೂಚಿಸಿದರು.
ಬೆಂಗಳೂರಲ್ಲಿ ಇನ್ನು ನಾಯಿ ಸಾಕೋಕೆ ಲೈಸೆನ್ಸ್ ಬೇಕು!
ನಾಯಿಗಳಿಗೆ ಲಸಿಕೆ ಅಭಿಯಾನವನ್ನು ನಡೆಸಬೇಕಾದ ಏಜೆನ್ಸಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಬೀದಿ ನಾಯಿಗಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರವು ನಗರದ ಹೊರಗೆ ಬಯಲು ಜಾಗವನ್ನು ಗುರುತಿಸಬೇಕು ಎಂದು ಸುಬ್ರಹ್ಮಣ್ಯ ಹೇಳಿದರು. ನಗರದಲ್ಲಿ ಬೀದಿ ನಾಯಿಗಳ ಬಗ್ಗೆ ನಿಖರವಾದ ಮಾಹಿತಿಯ ಕೊರತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಜೊತೆಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಕೂಡ ಆ್ಯಂಟಿ ರೇಬಿಸ್ ಲಸಿಕೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಜನಸಾಮಾನ್ಯರು ಸಕಾಲದಲ್ಲಿ ಔಷಧೋಪಚಾರ ಪಡೆಯುವುದು ಕಷ್ಟವಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಕ್ರಿಮಿನಾಶಕ ಅಥವಾ ಆ್ಯಂಟಿ ರೇಬಿಸ್ ಲಸಿಕೆ ನೀಡುವುದನ್ನು ಮೀರಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟಪಡಿಸಿದೆ. ''ಯಾಕೆಂದರೆ ಪ್ರಾಣಿದಯಾ ಸಂಘಟನೆಗಳು ನ್ಯಾಯಾಲಯದ ಮುಂದೆ ಹಲವು ಅರ್ಜಿಗಳನ್ನು ಸಲ್ಲಿಸುತ್ತವೆ. ಇದರಿಂದ ನಾಯಿಗಳನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ'' ಎಂದರು. ಜೊತೆಗೆ ಆಂಟಿ ರೇಬಿಸ್ ಲಸಿಕೆ ಕೊರತೆ ಇಲ್ಲ. ನಾಯಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸಲು ಸರ್ಕಾರವು ಔಷಧಗಳನ್ನು ನೀಡುತ್ತಿದೆ ಎಂದು ಮಾಧುಸ್ವಾಮಿ ಹೇಳಿದರು.
ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಗೋಶಾಲೆಗಳಿಗೆ ಸಮಾನವಾದ ಸೌಲಭ್ಯಗಳಲ್ಲಿ ಆಶ್ರಯ ನೀಡುವುದು ಸಮಸ್ಯಾತ್ಮಕವಾಗಿದೆ ಎಂದು ಮಾಧುಸ್ವಾಮಿ ಹೇಳಿದರು. ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಬಗ್ಗೆ ಸರ್ಕಾರವನ್ನು ಪರಿಗಣಿಸಬೇಕು ಎಂದು ಒತ್ತಾಯಕ್ಕೆ ಈ ಸಂಬಂಧ ಸರ್ಕಾರ ಪರಿಶೀಲನೆ ನಡೆಸುತ್ತದೆ ಎಂದು ಮಾಧುಸ್ವಾಮಿ ಹೇಳಿಕೆ ನೀಡಿದರು.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1.81 ಲಕ್ಷ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿದ್ದರೆ, 2.53 ಲಕ್ಷ ನಾಯಿಗಳಿಗೆ ಆಂಟಿ ರೇಬಿಸ್ ಲಸಿಕೆ ಹಾಕಲಾಗಿದೆ.
Recommended Video