ಧರ್ಮಸ್ಥಳ ದೇವಾಲಯ ವಶ ಪಡಿಸಿಕೊಳ್ಳಲು ಹೊರಟಿತ್ತೇ ಸರಕಾರ?
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಶುರುವಿನಲ್ಲಿ ಉಡುಪಿ ಕೃಷ್ಣ ಮಠವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಲು ಯತ್ನಿಸಿತ್ತು.
ನಂತರ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತು ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಸ್ವಪಕ್ಷೀಯ ಮುಖಂಡರೇ ವಿರೋಧ ವ್ಯಕ್ತ ಪಡಿಸಿದ ನಂತರ ಸಿದ್ದರಾಮಯ್ಯ ಸರಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿತ್ತು.
ಈಗ ಇದ್ದಕ್ಕಿಂತೆಯೇ ನಾಡಿನ ಪ್ರಸಿದ್ದ ಧಾರ್ಮಿಕ ಕೇಂದ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯನ್ನು ಧಾರ್ಮಿಕ ದತ್ತಿ ಇಲಾಖೆಯಡಿ ತರಲು ಸರಕಾರ ಚಿಂತಿಸುತ್ತಿದೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ.
ಇದಕ್ಕೆ ಪೂರಕ ಎನ್ನುವಂತೆ ದಕ್ಷಿಣ ಕನ್ನಡ ಜಿಲ್ಲಾ ನಾಗರಿಕ ಸೇವಾ ಟ್ರಸ್ಟಿನ ರಂಜನ್ ರಾವ್ ಮತ್ತು ಇನ್ನಿಬ್ಬರು ಧರ್ಮಸ್ಥಳ ದೇವಾಲಯದಲ್ಲಿ ಅಕ್ರಮಗಳು ನಡೆಯುತ್ತಿದೆ ಎಂದು ಮುಜರಾಯಿ ಇಲಾಖೆಗೆ ದೂರು ಸಲ್ಲಿಸಿದ್ದರು.
ಕಳೆದ ಎರಡು ದಿನಗಳಿಂದ ಧರ್ಮಸ್ಥಳ ದೇವಾಲಯವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎನ್ನುವ ಸುದ್ದಿಗೆ ಮುಜರಾಯಿ ಖಾತೆಯ ಸಚಿವ ಟಿ ಬಿ ಜಯಚಂದ್ರ ಮಂಗಳವಾರ (ಸೆ 8) ಸ್ಪಷ್ಟನೆ ನೀಡಿದ್ದಾರೆ. ಆದರೂ, ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯವೇ ಎನ್ನುವುದು ಆಸ್ತಿಕರಲ್ಲಿರುವ ಗೊಂದಲ.
ಸಚಿವರ ಸ್ಪಷ್ಟನೆ ಸ್ಲೈಡಿನಲ್ಲಿ..
ಟಿ ಬಿ ಜಯಚಂದ್ರ
ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವುದು ಧಾರ್ಮಿಕ ದತ್ತಿ ಕಾಯಿದೆಯಡಿಯಲ್ಲಿ ಬರುವುದಿಲ್ಲ. ಸರಕಾರದ ಮುಂದೆ ಈ ಪ್ರಸ್ತಾವನೆಯೂ ಇಲ್ಲ. ಈಗ ಹರಡಿರುವ ಸುದ್ದಿ, ಶುದ್ದಸುಳ್ಳು ಎಂದು ಸಚಿವರು ಹೇಳಿದ್ದಾರೆ.
ವಿರೋಧಿಗಳಿಂದ ತಪ್ಪು ಸಂದೇಶ
ಕೆಲವು ವಿರೋಧಿಗಳು ಸುಮ್ಮನೆ ತಪ್ಪು ಸಂದೇಶವನ್ನು ರವಾನಿಸಿ ನಮ್ಮ ಸರಕಾರವನ್ನು ಮುಜುಗರಕ್ಕೀಡು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರಂಜನ್ ಎನ್ನುವವರು ದೂರೊಂದನ್ನು ಸಲ್ಲಿಸಿದ್ದು ನಿಜ. ಅದನ್ನು ನಾವು ಮುಜಾರಾಯಿ ಇಲಾಖೆಗೆ ಕಳುಹಿಸಿ ಕೊಟ್ಟಿದ್ದೆವು. ಇಲಾಖೆಯವರು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ದೂರನ್ನು ಕಳುಹಿಸಿದ್ದರು. ಅಷ್ಟಕ್ಕೇ ಇದನ್ನು ದೊಡ್ಡ ಸುದ್ದಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸಚಿವರು
ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಒಂದು ಸಂಸ್ಥೆ ಇದ್ದಂತೆ. ಕೋಟ್ಯಂತರ ಜನರಿಗೆ ಧರ್ಮಸ್ಥಳದಿಂದ ಒಳಿತಾಗಿದೆ. ಇಲ್ಲಿ ನಡೆಯುವ ಅನ್ನದಾಸೋಹ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದು ಸಚಿವರು, ಹೆಗ್ಗಡೆಯವರ ಬಗ್ಗೆ ಹೆಮ್ಮೆಯ ಮಾತನ್ನಾಡಿದ್ದಾರೆ.
ಶಿವನ ದೇವಾಲಯ, ಜೈನರ ಸುಪರ್ದಿಯಲ್ಲಿ
ಧರ್ಮಸ್ಥಳ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಇದೊಂದು ಶಿವನ ದೇವಾಲಯವಾಗಿದ್ದು, ಜೈನ ಸಮುದಾಯದವರು ಆಡಳಿತವನ್ನು ನಡೆಸುತ್ತಿದ್ದಾರೆ. ಅದಲ್ಲದೇ ಜಮೀನು ಅತಿಕ್ರಮಣ ಮತ್ತು ಇತರ ಅಕ್ರಮಗಳು ಇಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದು ರಂಜನ್ ರಾವ್ ಎನ್ನುವವರು ದೂರು ಸಲ್ಲಿಸಿದ್ದರು. ಜೊತೆಗೆ ಸಚಿವ ಜಯಚಂದ್ರ ಅವರನ್ನೂ ರಂಜನ್ ರಾವ್ ಭೇಟಿ ಮಾಡಿ, ವಿವರಿಸಿದ್ದರು ಎನ್ನುವ ಸುದ್ದಿಯಿದೆ.
ಪ್ರಲ್ಹಾದ್ ಜೋಷಿ
ಈ ಹಿಂದೆ ಉಡುಪಿ ದೇವಾಲಯದ ವಿಚಾರದಲ್ಲೂ ಸರಕಾರ ಇದೇ ತಪ್ಪು ಮಾಡಿತ್ತು. ಆ ವಿಚಾರದಲ್ಲಿ ಸರಕಾರ ಸರಿಯಾಗಿ ಮುಖಭಂಗ ಅನುಭಸಿತ್ತು. ಆದರೂ ಸಿದ್ದರಾಮಯ್ಯ ಅವರಿಗೆ ಬುದ್ದಿ ಬಂದಿಲ್ಲ. ಈಗ ಧರ್ಮಸ್ಥಳ ದೇವಾಲಯದ ವಿಚಾರಕ್ಕೆ ಹೋಗುತ್ತಿದ್ದಾರೆ. ಸರಕಾರಕ್ಕೆ ಯಾಕೀ ಕೆಟ್ಟ ಬುದ್ದಿ ಬಂತು ಎಂದು ಅರ್ಥವಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಷಿ ಹೇಳಿದ್ದಾರೆ.
ಗೊರವನಹಳ್ಳಿ ದೇವಾಲಯ
ತುಮಕೂರು ಜಿಲ್ಲೆಯ ಪ್ರಸಿದ್ದ ಗೊರವನಹಳ್ಳಿ ಅಷ್ಟಲಕ್ಷ್ಮಿ ದೇವಾಲಯವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಸ್ಥಳೀಯರು ಮತ್ತು ಟ್ರಸ್ಟ್ ನಡುವಿನ ವಿವಾದ ತಾರಕಕ್ಕೇರಿದ ನಂತರ ದೇವಾಲಯವನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.