ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರದ ಗ್ರೀನ್ ಸಿಗ್ನಲ್?
ಬೆಂಗಳೂರು, ಆ. 31: ಕೊರೊನಾ ಆತಂಕದ ಮಧ್ಯೆ ಮತ್ತೊಂದು ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಸದ್ಯಕ್ಕೆ ಕಡಿಮೆಯಿದೆ. ಆದರೆ ಮೂರನೇ ಅಲೆಯ ಆತಂಕವಂತೂ ಇದ್ದೆ ಇದೆ. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದರಲ್ಲಿಯೂ ಕೇರಳದಲ್ಲಿ ಪ್ರತಿದಿನ 30 ಸಾವಿರಕ್ಕಿಂತಲೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಈ ಸಲ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಡಬೇಕಾ? ಬೇಡವೋ? ಎಂಬ ದ್ವಂದ್ವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎದುರಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್, ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಕೋವಿಡ್ ಕುರಿತು ಸರ್ಕಾರ ತೆಗೆದು ಕೊಂಡಿರುವ ತೀರ್ಮಾನಗಳ ಕುರಿತು ಬೆಂಗಳೂರಿನಲ್ಲಿ ಮಾಹಿತಿ ಕೊಟ್ಟಿದ್ದಾರೆ.
ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಪಕ್ಷದ ನಾಯಕರ ಒತ್ತಾಯವಿದೆ ಎನ್ನಲಾಗಿದೆ. ಹೀಗಾಗಿ ತಜ್ಞರ ಸಲಹೆಯನ್ನು ಕಡೆಗಣಿಸಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ಕೊಡಲಿದೆಯಾ? ಎಂಬ ಚರ್ಚೆ ಇದೀಗ ಶುರುವಾಗಿದೆ. ಅಷ್ಟಕ್ಕೂ ಸರ್ಕಾರದ ತೀರ್ಮಾನವೇನು?
ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್?
ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಕುರಿತಂತೆ ಮಾಹಿತಿ ನೀಡಿದ ಸಚಿವ ಆರ್. ಅಶೋಕ್, "ಈ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಯೋಚಿಸುತ್ತಿದೆ. ಇದು ಭಾವನಾತ್ಮಕ ವಿಚಾರ. ಹೀಗಾಗಿ ಕೋವಿಡ್ ಸೋಂಕು ಹರಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವ ರೀತಿ ಆಚರಣೆಗೆ ಅನುಮತಿ ನೀಡಬೇಕು ಎಂಬುದರ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಅದನ್ನು ಕೂಡಾ ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ" ಎಂದಿದ್ದಾರೆ. ಆದರೆ ಈಗಾಗಲೇ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಡಲು ತೀರ್ಮಾನ ಮಾಡಿದೆ ಎಂಬ ಖಚಿತ ಮಾಹಿತಿಯಿದೆ. ಅದಕ್ಕೆ ಕಾರಣವೂ ಇದೆ.
ಬಿಜೆಪಿ ನಾಯಕರಿಂದಲೇ ಸರ್ಕಾರಕ್ಕೆ ಒತ್ತಾಯ?
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಿಜೆಪಿ ನಾಯಕರಿಂದಲೇ ಸರ್ಕಾರಕ್ಕೆ ಒತ್ತಾಯವಿದೆ ಎಂಬ ಮಾಹಿತಿ ಬಂದಿದೆ. ಜೊತೆಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಪಕ್ಷದಿಂದಲೂ ಸರ್ಕಾರಕ್ಕೆ ನಿರ್ದೇಶನ ಕೊಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪಕ್ಷದ ವರಿಷ್ಠರಿಂದಲೂ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ತಜ್ಞರ ಸಲಹೆಯನ್ನೂ ಮೀರಿ ಅವಕಾಶ ನೀಡಲು ತೀರ್ಮಾನ ಮಾಡಲಾಗಿದೆ. ಆದರೆ 50 ಜನರು ಮೀರದಂತೆ ಮಾರ್ಗಸೂಚಿ ಮಾಡಲಾಗುತ್ತದೆ. ಹೀಗಾಗಿ ತಕ್ಷಣ ಅನುಮತಿ ಕೊಡಬಾರದು ಎಂದು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿಯಿದೆ.
ಸಿಎಂ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ!
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗಗಳಲ್ಲಿ ಗಣೇಶೋತ್ಸವವನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ.
ಜೊತೆಗೆ ಪ್ರತಿ ಜಿಲ್ಲೆಗಳಲ್ಲಿನ ಗಣೇಶೋತ್ಸವ ಮಂಡಳಿಗಳ ಸಂಘಟಕರ ಜೊತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸುವಂತೆ ಸೂಚಿಸಲಾಗುವುದು. ಆ ವರದಿಯ ಆಧಾರದ ಮೇಲೆ ಸೆ. 5 ರಂದು ಮುಖ್ಯಮಂತ್ರಿಗಳ ಜೊತೆ ಮತ್ತೊಂದು ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಕಡ್ಡಾಯ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕೋವಿಡ್ ಸ್ಥಿತಿಗತಿಗಳ ಕುರಿತು ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್. ಅಶೋಕ್, "ಈಗಾಗಲೇ 9 ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದೆ. ಅದಕ್ಕೆ ಬಹುತೇಕ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ 6 ರಿಂದ 8ನೇ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿದೆ. ವಾರದಲ್ಲಿ ಐದು ದಿನಗಳು ಅರ್ಧ ದಿನ ಮಾತ್ರ ಶಾಲೆ ನಡೆಸಲಾಗುವುದು. ಹಾಜರಾತಿ ಕಡ್ಡಾಯವಾಗಿ ಶೇ.50ರಷ್ಟಿರಬೇಕು" ಎಂದು ತಿಳಿಸಿದ್ದಾರೆ.
"ಹಾಗೆಯೇ ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿಂದ ಬರುವ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಲೇಬೇಕು. ವಾರದ ನಂತರ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಬೇಕು. ರಾಜ್ಯದಲ್ಲಿ ಶೇ.1.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ, ಕೋಲಾರ ಮತ್ತು ಕಲ್ಬುರ್ಗಿಯಲ್ಲಿ ವಿಧಿಸಲಾಗಿದ್ದ ನಿಬಂಧನೆಗಳಲ್ಲಿ ಕೆಲ ಸಡಿಲಿಕೆಗಳನ್ನ ಸರ್ಕಾರ ನೀಡಿದೆ.
Recommended Video