ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಯಾರ ಕಣ್ಣಿಗೆ ಸುಣ್ಣ, ಯಾರಿಗೆ ಬೆಣ್ಣೆ
Recommended Video
ಬೆಂಗಳೂರು, ಜುಲೈ 31: ಮೈತ್ರಿ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ಆಯ್ಕೆ ಮಾಡಿದ್ದು ಸಂಪ್ರದಾಯದಂತೆ ಸಚಿವರುಗಳನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದೆ.
ಈ ಬಾರಿ ಅತೃಪ್ತರ ಸಂಖ್ಯೆ ಹೆಚ್ಚಿದ್ದ ಕಾರಣ ಸಚಿವರಲ್ಲದಿವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡುತ್ತಾರೆಂಬ ಊಹಾಪೋಹಗಳು ಹಬ್ಬಿದ್ದವು ಆದರೆ ಅದೆಲ್ಲವೂ ಸುಳ್ಳಾಗಿದೆ.
ಕರ್ನಾಟಕದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ
ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ನಾಯಕರಿಗೆ ಆ ಜಿಲ್ಲೆಯ ಉಸ್ತುವಾರಿ ನೀಡಲು ಎರಡೂ ಪಕ್ಷಗಳು ಪ್ರಯತ್ನಿಸಿವೆ. ಪ್ರಮುಖವಾಗಿ ಬೆಂಗಳೂರು ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಜಾರ್ಜ್ ಫರ್ನಾಂಡಿಸ್ಗೆ ಹಿನ್ನಡೆಯಾಗಿದ್ದು ನಗರ ಉಸ್ತುವಾರಿ ಪರಮೇಶ್ವರ್ ಅವರ ಬಳಿ ಇದೆ.
ಪರಮೇಶ್ವರ್ಗೆ ಡಬಲ್ ಧಮಾಕಾ
ಜಿ.ಪರಮೇಶ್ವರ್ ಅವರಿಗೆ ತಮ್ಮ ಸ್ವ ಜಿಲ್ಲೆ ತುಮಕೂರು ಜೊತೆಗೆ ಬೆಂಗಳೂರು ನಗರ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ಉಸ್ತುವಾರಿ ಸ್ಥಳೀಯರಾದ ಕೆ.ಜೆ.ಜಾರ್ಜ್ ಅವರಿಗೆ ದೊರೆಯುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಹಿನ್ನಡೆ ಆಗಿದೆ. ಕಳೆದ ಬಾರಿ ತುಮಕೂರಿನ ಉಸ್ತುವಾರಿಯನ್ನು ಟಿ.ಬಿ.ಜಯಚಂದ್ರ ಅವರಿಗೆ ನೀಡಲಾಗಿತ್ತು.
ಬೇಡದ ಜಿಲ್ಲೆಗೆ ಹೊರಟ ಜಮೀರ್
ಚಾಮರಾಜಪೇಟೆಯಲ್ಲಿ ಭರ್ಜರಿ ವಿಜಯ ಸಾಧಿಸಿದ್ದ ಜಮೀರ್ ಅಹ್ಮದ್ ಖಾನ್ ಅವರಿಗೆ ಉತ್ತರದ ಹಾವೇರಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ಎನ್ನುವ ಕಾರಣಕ್ಕೆ ಈ ಶಿಕ್ಷೆಯೋ ಎಂಬ ಅನುಮಾನವೂ ಇದೆ. ಜಮೀರ್ ಅವರಿಗೆ ಮೈಸೂರು ಅಥವಾ ಚಾಮರಾಜನಗರದ ಮೇಲೆ ಕಣ್ಣಿತ್ತು. ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ರುದ್ರಪ್ಪ ಲಮಾಣಿ ವಹಿಸಿದ್ದರು.
ಬಳ್ಳಾರಿ ರೆಡ್ಡಿಗಳಿಗೆ ಠಕ್ಕರ್ ಕೊಡಲಿದ್ದಾರೆ ಡಿಕೆಶಿ
ಡಿ.ಕೆ.ಶಿವಕುಮಾರ್ ಅವರಿಗೆ ಒಕ್ಕಲಿಗರು ಬಹುಸಂಖ್ಯಾತರಾಗಿರುವ ಜೆಡಿಎಸ್ ಭದ್ರ ಕೋಟೆ ರಾಮನಗರದ ಉಸ್ತುವಾರಿ ನೀಡಲಾಗಿದೆ. ಅದರ ಜೊತೆಗೆ ಬಳ್ಳಾರಿ ಸಹ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿದೆ. ಡಿಕೆ ಶಿವಕುಮಾರ್ ಕಳೆದ ಬಾರಿ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.
ಜಯಮಾಲಾಗೆ ಉಡುಪಿ
ಅದೃಷ್ಟವಶಾತ್ ಮಂತ್ರಿ ಆಗಿದ್ದಾರೆ ಎಂದು ಸ್ವಪಕ್ಷದಿಂದಲೇ ಟೀಕೆ ಎದುರಿಸುತ್ತಿರುವ ಜಯಮಾಲಾ ಅವರಿಗೆ ಉಡುಪಿ ಜಿಲ್ಲೆ ನೀಡಲಾಗಿದೆ. ಅದೃಷ್ಟದಲ್ಲೇ ಮಂತ್ರಿ ಆದ ಆರ್.ಶಂಕರ್ ಅವರಿಗೆ ಕೊಪ್ಪಳದ ಉಸ್ತುವಾರಿ ವಹಿಸಲಾಗಿದೆ. ಬಿಎಸ್ಪಿಯ ಮಹೇಶ್ ಅವರಿಗೆ ಗದಗದ ಉಸ್ತುವಾರಿ ನೀಡಲಾಗಿದೆ.
ಪಟ್ಟು ಬಿಡದ ಜಿ.ಟಿ.ದೇವೇಗೌಡಗೆ ಒಲಿದ ಮೈಸೂರು
ಮೈಸೂರನ್ನು ಸಿದ್ದರಾಮಯ್ಯ ಅವರ ಬಿಗಿ ಮುಷ್ಠಿಯಿಂದ ಸಡಿಲಗೊಳಿಸಲು ಮುಂದಾಗಿರುವ ಜಿ.ಟಿ.ದೇವೇಗೌಡ ಅವರಿಗೆ ಇನ್ನೊಂದು ಗೆಲುವು ಎಂಬಂತೆ ಮೈಸೂರಿನ ಉಸ್ತುವಾರಿ ಅವರಿಗೆ ದೊರೆತಿದೆ. ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆ ಮಾಡಲು ಈ ಅವಕಾಶವನ್ನು ಅವರು ಬಳಸಿಕೊಳ್ಳುವ ಸಾಧ್ಯತೆ ಇದೆ.
ಹಾಸನಕ್ಕೆ ಎಚ್.ಡಿ.ರೇವಣ್ಣ
ಸ್ವಂತ ಜಿಲ್ಲೆಗೆ ಎಚ್.ಡಿ.ರೇವಣ್ಣ ಅವರು ಉಸ್ತುವಾರಿ ಆಗಿದ್ದಾರೆ. ರೇವಣ್ಣ ಅವರು ಎರಡು ಜಿಲ್ಲೆಯ ಉಸ್ತುವಾರಿ ಕೇಳಬಹುದೆಂಬ ನಿರೀಕ್ಷೆ ಇತ್ತು ಆದರೆ ಅವರಿಗೆ ಒಂದು ಕ್ಷೇತ್ರವನ್ನು ಮಾತ್ರವೇ ನೀಡಲಾಗಿದೆ.
ಎರಡು ಜಿಲ್ಲೆಗಳನ್ನು ಪಡೆದವರಿವರು
ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ತುಮಕೂರಿನ ಜೊತೆಗೆ ಬೆಂಗಳೂರು ಗ್ರಾಮಾಂತರ , ಆರ್.ವಿ.ದೇಶಪಾಂಡೆ ಅವರಿಗೆ ಉತ್ತರ ಕನ್ನಡ ಮತ್ತು ಧಾರವಾಡ, ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳನ್ನು ನೀಡಲಾಗಿದೆ. ಜೆಡಿಎಸ್ನ ಮಂತ್ರಿಗಳೆಲ್ಲರಿಗೂ ಒಂದೊಂದು ಜಿಲ್ಲೆಯನ್ನು ಮಾತ್ರವೇ ನೀಡಲಾಗಿದೆ.