ರಾಜ್ ಜನ್ಮದಿನ: ಮೇವು ವಿತರಣೆಗೆ ಚಾಲನೆ ನೀಡಿದ ಶಿವರಾಜ್ ಕುಮಾರ್
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ಮೇವು ವಿತರಣೆಗೆ ರಾಜ್ ಪುತ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಂದ ಬೆಂಗಳೂರಿನಲ್ಲಿ ಚಾಲನೆ.
ಬೆಂಗಳೂರು, ಏ 24; ವರನಟ ಡಾ.ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ಮೇವು ವಿತರಣೆಗೆ ರಾಜ್ ಪುತ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಿದರು.
ಕಂಠೀರವ ಸ್ಟುಡಿಯೋ ಆವರಣದ ರಾಜ್ ಸ್ಮಾರಕದ ಬಳಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ, ಗೋಸೇನೆಯ ವತಿಯಿಂದ 89 ಚೀಲ ಹಿಂಡಿಯನ್ನು ರಾಮಚಂದ್ರಾಪುರ ಮಠದ "ಗೋಪ್ರಾಣಭಿಕ್ಷಾ" ಯೋಜನೆಗೆ ಶಿವರಾಜ್ ಕುಮಾರ್ ಮೂಲಕ ಸಮರ್ಪಿಸಲಾಯಿತು. (ಡೂಡಲ್ ಮೂಲಕ ಅಣ್ಣಾವ್ರಿಗೆ ಗೂಗಲ್ ಗೌರವ)
ಲಗ್ಗೆರೆಯ ಶಂಕರ ಗುರೂಜಿ ನೇತೃತ್ವದಲ್ಲಿ, ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ಮೇವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಭಕ್ತಿಯಿಂದ ಗೋಪೂಜೆಯನ್ನು ನೆರವೇರಿಸಿ, ಮೇವು ವಿತರಣೆಗೆ ಚಾಲನೆಯನ್ನು ನೀಡಿದರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳ ಗೋಪ್ರಾಣಭಿಕ್ಷಾ ಆಂದೋಲನಕ್ಕೆ ಪೂರಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗೋಸೇವಕ ಲಕ್ಷ್ಮೀನಾರಾಯಣ ಅವರು ಶಂಕರ ಗುರೂಜಿಯವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೇವನ್ನು ಪೂರೈಸುವ ಬಗ್ಗೆ ಆಶ್ವಾಸನೆ ನೀಡಿದರು.
ರಾಮಾಚಂದ್ರಾಪುರಮಠದ ಪ್ರತಿನಿಧಿಗಳು ಹಾಗೂ ಗೋಸೇನೆಯ ಪದಾಧಿಕಾರಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ರಾಜ್ ಅವರ ಜನ್ಮಸ್ಥಳವೂ ಮಲೆಮಹದೇಶ್ವರ ಬೆಟ್ಟದ ಸಮೀಪದ ಗಾಜನೂರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.