ಗೋರಖ್ ಪುರ ದುರಂತ: ಶನಿವಾರ ಸಂಜೆ ನಂತರದ ಪ್ರಮುಖ 5 ಬೆಳವಣಿಗೆ
ಗೋರಖ್ ಪುರ ದುರಂತ: ಶನಿವಾರ ಸಂಜೆ ನಂತರದ ಬೆಳವಣಿಗೆ. ಪ್ರಕರಣ ಜರುಗಿರುವ ಆಸ್ಪತ್ರೆಯ ಉಸ್ತುವಾರಿ ಹೊಂದಿರುವ ಬಾಬಾ ರಾಘವ್ ದಾಸ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರ ಅಮಾನತು.
ಲಖ್ನೋ, ಆಗಸ್ಟ್ 12: ಗೋರಖ್ ಪುರದ ಬಾಬಾ ರಾಘವ್ ದಾಸ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಲ್ಲಿ ನಡೆದ 60ಕ್ಕೂ ಹೆಚ್ಚು ಮಕ್ಕಳ ಸಾವಿನ ಸುಳಿಯಿಂದ ಪಾರಾಗಲು ಯತ್ನಿಸುತ್ತಿರುವ ಉತ್ತರ ಪ್ರದೇಶ ಸರ್ಕಾರ ಆ ಪ್ರಕರಣಕ್ಕೆ ಕ್ಷಣಕ್ಕೊಂದು ಬಣ್ಣ ಬಳಿಯಳು ಶುರು ಮಾಡಿದೆ.
ದೇಶಾದ್ಯಂತ ಸದ್ದು ಮಾಡಿರುವ ಈ ಸುದ್ದಿಯ ಬಗ್ಗೆ ಶನಿವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ಸರ್ಕಾರ, ಆಮ್ಲಜನಕ ಕೊರತೆಯಿಂದ ಮಕ್ಕಳು ಸತ್ತಿಲ್ಲ. ವೈದ್ಯಕೀಯ ನಿರ್ಲಕ್ಷ್ಯದಿಂದ ಸತ್ತಿವೆ ಎಂದು ಹೇಳಿತ್ತು.
ಆದರೆ, ಸಂಜೆ ವೇಳೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಇದಕ್ಕಿಂತ ಭಿನ್ನವಾಗಿದ್ದು, ಮಕ್ಕಳು ಮೆದುಳು ಜ್ವರದಿಂದ ಅಸುನೀಗಿವೆ ಎಂದಿದ್ದಾರೆ. ಆದರೆ, ಸರ್ಕಾರದಿಂದ ತಪ್ಪಾಗಿದೆ ಎಂದು ಅಪ್ಪಿತಪ್ಪಿಯೂ ಹೇಳಲಿಲ್ಲ.
ಗೋರಖ್ ಪುರ ದುರಂತ: ಯೋಗಿ ರಾಜಿನಾಮೆಗೆ ಪಟ್ಟು ಸೇರಿ 6 ಬೆಳವಣಿಗೆ
ಮೂಲಗಳ ಪ್ರಕಾರ, ಆಸ್ಪತ್ರೆಯಲ್ಲಿ 70 ಮಕ್ಕಳು ಕಳೆದ ಐದು ದಿನಗಳಿಂದ ಸಾವನ್ನಪ್ಪಿವೆ. ಮಕ್ಕಳು ಸಾಲು ಸಾಲು ಸಾವುಗಳು ಆರಂಭವಾದ ಸ್ವಲ್ಪ ಹೊತ್ತಿಗೆ ಆಸ್ಪತ್ರೆಯ ವೈದ್ಯರೇ ಆಮ್ಲಜನಕದ ಕೊರತೆಯುಂಟಾಗಿದ್ದಾಗಿ ಹೇಳಿದ ಹೇಳಿಕೆಗಳು ಮಾಧ್ಯಮಗಳಲ್ಲಿ ಹೇಳಿದ್ದರೂ ಸರ್ಕಾರ ಮಾತ್ರ, ಆಮ್ಲಜನಕದ ಕೊರತೆ ಆಗಿಯೇ ಇಲ್ಲ ಎಂದು ಹೇಳುತ್ತಿದೆ.
ಏನಿದರ ಹಕೀಕತ್ತು, ಸರ್ಕಾರ ಏಕೆ ಹೀಗೆ ಹೇಳುತ್ತಿದೆ, ಏನನ್ನಾದರೂ ಮರೆಮಾಚಲು ಯತ್ನಿಸುತ್ತಿದೆಯೇ, ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
(ಚಿತ್ರಗಳು: ಪಿಟಿಐ)
ಅನುದಾನದ ಕೊರತೆಯೇ?
ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಸತ್ತಿದ್ದೆಂದು ಜಗಜ್ಜಾಹೀರಾಗಿದೆ. ಅತ್ತ, ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡುತ್ತಿದ್ದ ಕಂಪನಿಯು ಆಸ್ಪತ್ರೆ ವತಿಯಿಂದ ತನಗೆ 70 ಲಕ್ಷ ರು. ಹಣ ಬಾಕಿ ಇದ್ದಿದ್ದರಿಂದಲೇ ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್ ಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾಗಿ ಹೇಳಿದೆ. ಅಲ್ಲಿಗೆ, ಆಸ್ಪತ್ರೆಯ ಆಡಳಿತ ಮಂಡಳಿಯಿಂದಲೋ ಅಥವಾ ಸರ್ಕಾರದಿಂದ ಬರುವ ಅನುದಾನದ ಕೊರತೆಯಿಂದಲೋ ಸಮಸ್ಯೆ ಉಂಟಾಗಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಪರೋಕ್ಷವಾಗಿ ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಿದೆ.
ಮುಗ್ಧ ಮಕ್ಕಳ ಕೊಲೆ ಎಂದ ಧುರೀಣ
ಉತ್ತರ ಪ್ರದೇಶದಲ್ಲಿ ನಡೆದಿರುವ ಈ ದುರಂತಕ್ಕೆ ಬಿಹಾರದಲ್ಲಿ ಆರ್ ಜೆಡಿ ಪಕ್ಷದ ನಾಯಕ ಲಾಲೂ ಪ್ರಸಾದ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಲೇ ಮಕ್ಕಳ ಸಾವಾಗಿದೆ ಎಂಬುದನ್ನು ಪ್ರತಿಪಾದಿಸಿದ ಅವರು, ಇದು ಮುಗ್ಧ ಮಕ್ಕಳ ಕಗ್ಗೊಲೆ ಎಂದು ಹೇಳಿದ್ದಾರೆ.
ಪ್ರಾಂಶುಪಾಲರ ಅಮಾನತು
ಇತ್ತ, ಪ್ರಕರಣ ನಡೆದಿರುವ ಆಸ್ಪತ್ರೆಯ ಉಸ್ತುವಾರಿ ಹೊತ್ತಿರುವ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ನಿರ್ಧಾರವನ್ನು ಸರ್ಕಾರದ ಪರವಾಗಿ ವೈದ್ಯಕೀಯ ವ್ಯಾಸಂಗ ಸಚಿವ ಅಶುತೋಷ್ ಟಂಡನ್ ಪ್ರಕಟಿಸಿದ್ದಾರೆ. ಆದರೆ, ಪ್ರಾಂಶುಪಾಲರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ತಮ್ಮ ಅಮಾನತು ಆದೇಶಕ್ಕೂ ಮುನ್ನವೇ ತಾವು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು
ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ದಾರ್ಥ ನಾಥ್ ಸಿಂಗ್ ಹಾಗೂ ವೈದಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಅವರು ಗೋರಖ್ ಪುರ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮುಖ್ಯಮಂತ್ರಿ ಯೋಗಿ ಹೇಳಿಕೆ
ರಾತ್ರಿ ಸುಮಾರು 7:45ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೋರಖ್ ಪುರ ಆಸ್ಪತ್ರೆಯಲ್ಲಿ ನಡೆದ ದುರಂತ ವಿಷಾದನೀಯ. ಮಕ್ಕಳಿಗೆ ಸಾಮೂಹಿಕ ಮೆದುಳು ಜ್ವರ ಕಾಣಿಸಿಕೊಂಡಿದ್ದೇ ಅವುಗಳ ಸಾವಿಗೆ ಕಾರಣ ಎಂದಿದ್ದಾರೆ. ಅಲ್ಲದೆ, ಶೀಘ್ರವೇ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂದು ಮಾಮೂಲಿ ಮಾತುಗಳನ್ನಾಡಿದ್ದಾರೆ.