ಗೂಗಲ್ ಮ್ಯಾಪ್: ಈಗ ತಮಿಳುನಾಡಿನ ಸ್ಥಳದ ಹೆಸರು ಕನ್ನಡದಲ್ಲಿ!
ಬೆಂಗಳೂರು, ಸೆಪ್ಟೆಂಬರ್ 24: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹೆಸರು ಗೂಗಲ್ ಮ್ಯಾಪ್ನಲ್ಲಿ ಕನ್ನಡದ ಬದಲು ತಮಿಳು ಅಕ್ಷರಗಳಲ್ಲಿ ತೋರಿಸುತ್ತಿರುವುದರ ವಿರುದ್ಧ ಅಸಮಾಧಾನಗೊಂಡಿದ್ದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ಆಂದೋಲನವನ್ನೇ ನಡೆಸಿ ಅಲ್ಲಿ ಕನ್ನಡವನ್ನು ಮರುಸ್ಥಾಪಿಸಿದ್ದಾರೆ. ಅದರ ಜತೆಗೆ ಮುಂದುವರಿದು ಅಲ್ಲಿ ತಮಿಳು ಬರುವಂತೆ ಮಾಡಿದ್ದಕ್ಕೆ 'ಪ್ರತೀಕಾರ'ವನ್ನೂ ತೀರಿಸಿಕೊಂಡಿದ್ದಾರೆ.
ರಾಜ್ಯದ ರಾಜಧಾನಿಯಲ್ಲಿನ ಹೆಸರು ತಮಿಳಿನಲ್ಲಿ ಪ್ರಕಟವಾಗಿದ್ದರೆ, ತಮಿಳುನಾಡಿನ ಪ್ರಖ್ಯಾತ ಕ್ರೀಡಾಂಗಣವೊಂದರ ಹೆಸರನ್ನು ಕನ್ನಡದಲ್ಲಿ ಮೂಡುವಂತೆ ಮಾಡುವ ಮೂಲಕ ಮುಯ್ಯಿ ತೀರಿಸಿಕೊಂಡಿದ್ದಾರೆ. ಇದನ್ನು ಯಾರು ಹೇಗೆ ಬದಲಿಸಿದರೋ ತಿಳಿಯದು. ಟ್ರೋಲ್ ಪುಟಗಳನ್ನು ಅದರ ಚಿತ್ರವನ್ನು ಹಂಚಿಕೊಂಡು ಸಂಭ್ರಮಿಸುತ್ತಿವೆ.
ಇರುವುದು ಬೆಂಗಳೂರಲ್ಲಿ, ಗೂಗಲ್ ಮ್ಯಾಪ್ ತೋರಿಸುವುದು ತಮಿಳಿನಲ್ಲಿ!
ಗೂಗಲ್ ಮ್ಯಾಪ್ ಸಾಮಾನ್ಯವಾಗಿ ಇಂಗ್ಲಿಷ್ ಜತೆಗೆ ಆಯಾ ಪ್ರದೇಶದ ಭಾಷೆಯನ್ನು ಪ್ರದರ್ಶಿಸುತ್ತದೆ. ಆದರೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹೆಸರು ತಮಿಳಿನಲ್ಲಿ ತೋರಿಸುತ್ತಿತ್ತು. ಮೆಜೆಸ್ಟಿಕ್ ಸುತ್ತಮುತ್ತಲಿನ ಹೆಸರೆಲ್ಲವೂ ಕನ್ನಡದಲ್ಲಿ ತೋರಿಸುತ್ತಿರುವಾಗ ಇದು ತಮಿಳಿನಲ್ಲಿ ಮೂಡುವುದು ಹೇಗೆ ಎಂಬ ಪ್ರಶ್ನೆ ಹಲವರದು. ತಾಂತ್ರಿಕ ಸಮಸ್ಯೆಗಳಿಂದ ಈ ಪ್ರಮಾದ ಉಂಟಾಗುವ ಸಾಧ್ಯತೆ ಕಡಿಮೆ. ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಅಲ್ಲಿ ತಮಿಳಿನಲ್ಲಿ ಹೆಸರು ಮೂಡುವಂತೆ ಮಾಡಿದ್ದರು ಎಂದೇ ಊಹಿಸಲಾಗಿದೆ.
ಚಿದಂಬರಂ ಸ್ಟೇಡಿಯಂ ಕನ್ನಡದಲ್ಲಿ
ಭಾರತದ ಪ್ರಸಿದ್ಧ ಕ್ರಿಕೆಟ್ ಮೈದಾನಗಳಲ್ಲಿ ಚೆನ್ನೈನ ಚೆಪಾಕ್ನಲ್ಲಿರುವ ಎಂಎ ಚಿದಂಬರಂ ಕ್ರೀಡಾಂಗಣ ಒಂದು. ಇಲ್ಲಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. 1934ರಲ್ಲಿಯೇ ಈ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರಯ ಪಂದ್ಯ ನಡೆದಿತ್ತು. ಮೊಟ್ಟ ಮೊದಲ ರಣಜಿ ಪಂದ್ಯ ನಡೆದಿದ್ದು ಇದೇ ಮೈದಾನದಲ್ಲಿ. ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದು ಸಹ ಇಲ್ಲಿಯೇ. ಈ ಮೈದಾನವನ್ನು ಗೂಗಲ್ ಮ್ಯಾಪನಲ್ಲಿ ಹುಡುಕಿದಾಗ ಇಂಗ್ಲಿಷ್ ಜತೆ ತಮಿಳಿನ ಬದಲು ಕನ್ನಡ ಮೂಡುವಂತೆ ಮಾಡಿದ್ದಾರೆ.
ಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವ
ಮದ್ರಾಸ್ ಕ್ರಿಕೆಟ್ ಕ್ಲಬ್ ಕೂಡ ಕನ್ನಡದಲ್ಲಿ
ಚೆಪಾಕ್ನ ಎಂಎ ಚಿದಂಬರಂ ಕ್ರೀಡಾಂಗಣಕ್ಕೆ ಅಂಟಿಕೊಂಡಂತೆಯೇ ಮದ್ರಾಸ್ ಕ್ರಿಕೆಟ್ ಕ್ಲಬ್ ಇದೆ. ಇಲ್ಲಿ ಕ್ರಿಕೆಟ್ ಅಲ್ಲದೆ, ಇತರೆ ಕ್ರೀಡಾ ಚಟುವಟಿಕೆಗಳೂ ನಡೆಯುತ್ತವೆ. 1846ರಲ್ಲಿಯೇ ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದ ಇದಕ್ಕೆ ಬಹುದೊಡ್ಡ ಇತಿಹಾಸವಿದೆ. ಗೂಗಲ್ ಮ್ಯಾಪ್ನಲ್ಲಿ ಚಿದಂಬರಂ ಸ್ಟೇಡಿಯಂ ಪಕ್ಕದಲ್ಲಿಯೇ ಮದ್ರಾಸ್ ಕ್ರಿಕೆಟ್ ಕ್ಲಬ್ ಹೆಸರು ಕೂಡ ಕನ್ನಡದಲ್ಲಿ ಪ್ರದರ್ಶನವಾಗುತ್ತಿದೆ.
ರೈಲು ನಿಲ್ದಾಣ ತಮಿಳಿನಲ್ಲಿ
ತಮಿಳುನಾಡಿನ ಎರಡು ಸ್ಥಳಗಳ ಹೆಸರು ಕನ್ನಡದಲ್ಲಿ ಪ್ರಕಟವಾಗುವಂತೆ ಮಾಡಿದ್ದಕ್ಕೆ ಕಾರಣವೂ ಇದೆ. ಕಿಡಿಗೇಡಿಗಳ ಕೃತ್ಯವಿಲ್ಲದೆ ಕರ್ನಾಟಕದ ಸ್ಥಳದ ಹೆಸರು ತಮಿಳಿನಲ್ಲಿ ಮೂಡಲು ಸಾಧ್ಯವಿರಲಿಲ್ಲ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ' ಎಂಬ ಹೆಸರು ತಮಿಳಿನಲ್ಲಿ ಪ್ರದರ್ಶನವಾಗುತ್ತಿದ್ದದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಗೂಗಲ್ ಮ್ಯಾಪ್ಗೆ ಹೋಗಿ ಅದರ ಹೆಸರನ್ನು ಕನ್ನಡದಲ್ಲಿ ತಿದ್ದಿ ಬರೆದು ಆಂದೋಲನ ನಡೆಸಿದ ಫಲವಾಗಿ ಅಲ್ಲಿ ಮತ್ತೆ ಕನ್ನಡ ಗೋಚರಿಸುವಂತೆ ಮಾಡಲಾಗಿದೆ. ಕನ್ನಡದ ಹೋರಾಟ ಇಲ್ಲಿ ಯಶಸ್ಸು ಕಂಡಿದೆ.
"370 ನೇ ವಿಧಿ ಪ್ರಕಾರ ಕನ್ನಡಕ್ಕೆ ವಿಶೇಷ ಸ್ಥಾನ ಮಾನ ನೀಡಿ": ಕಾಂಗ್ರೆಸ್
ನೀವು ಕೆಟ್ಟವರಾದರೆ, ನಾವು...
ಕೆಲವರ ಕಿತಾಪತಿಗೆ ಪ್ರತಿಯಾಗಿ ತಾವೂ ಹೀಗೆ ಮಾಡಬಲ್ಲೆವು ಎಂಬುದನ್ನು ತೋರಿಸಿದ ಟ್ರೋಲ್ ಪೇಜ್ಗಳು ತಮಿಳುನಾಡಿನ ಸ್ಥಳಗಳ ಹೆಸರು ಕನ್ನಡದಲ್ಲಿ ಮೂಡಿರುವ ಚಿತ್ರಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿವೆ. 'ಇಫ್ ಯು ಆರ್ ಬ್ಯಾಡ್, ಆಮ್ ಯುವರ್ ಡ್ಯಾಡ್' ಎಂದು ತಮ್ಮನ್ನು ಕೆಣಕುವವರಿಗೆ ಎಚ್ಚರಿಕೆಯ ದಾಟಿಯಲ್ಲಿ ಉತ್ತರ ನೀಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ 'ಪೋಸ್ಟ್ ವಾರ್'ಗಳು ಹೊಸತಲ್ಲ. ಆದರೆ ಭಾಷೆಯ ವಿಚಾರದಲ್ಲಿ ಇದು ಹೊಸಬಗೆಯ 'ಮ್ಯಾಪ್ ಯುದ್ಧ'ಕ್ಕೆ ನಾಂದಿ ಹಾಡಿದೆ.