ಗೋ ಉತ್ಪನ್ನಗಳ ಮಾರುಕಟ್ಟೆಗೆ ಗೋ ಮಾತಾ ಸಹಕಾರ ಸಂಘ ಸ್ಥಾಪಿಸಲು ಸಿಎಂ ಸೂಚನೆ
ಬೆಂಗಳೂರು, ಮೇ 7: ರಾಜ್ಯದಲ್ಲಿ ಪ್ರಾಯೋಗಿಕವಾಗಿ ಗೋ ಮಾತಾ ಸಹಕಾರ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗೋವು ಪ್ರಮುಖ ಸ್ಥಾನ ಪಡೆದಿದೆ. ಗೋವಿನ ಅನೇಕ ಉತ್ಪನ್ನಗಳನ್ನು ಜನರು ಆಸಕ್ತಿಯಿಂದ ಖರೀದಿ ಮಾಡುತ್ತಾರೆ. ರೈತರೂ ಸಹ ಹಾಲು ಅಷ್ಟೇ ಅಲ್ಲದೆ, ಅದರ ಉಪ ಉತ್ಪನ್ನಗಳ ಕಡೆಯೂ ಆಸಕ್ತಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಗೋ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸಹಕಾರ ಸಂಘ ಸ್ಥಾಪಿಸಿ ಇದರ ಪ್ರಾಯೋಗಿಕ ಅಧ್ಯಯನ ನಡೆಸಬೇಕು ಎಂದು ಮುಖ್ಯಮಂತ್ರಿ ಸಭೆಯಲ್ಲಿ ಸೂಚಿಸಿದರು.
ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸಲು ಕೆಎಂಎಫ್ ಮೂಲಕ 2000 ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡುವುದು. ಈ ವರ್ಷ ಇದಕ್ಕಾಗಿ 4 ಕೋಟಿ ಅನುದಾನ ಒದಗಿಸುವುದು ಎಂದು ಹೇಳಿದರು.
ಗೋಶಾಲೆಗಳ ಸಂಖ್ಯೆಯನ್ನು 31 ರಿಂದ 100 ಕ್ಕೆ ಹೆಚ್ಚಿಸುವ ಸಂಬಂಧ 70 ಹೊಸ ಗೋಶಾಲೆಗಳನ್ನು ಸ್ಥಾಪಿಸಲು ನಿವೇಶನಗಳನ್ನು ಗೊತ್ತು ಮಾಡುವುದು. ಪುಣ್ಯಕೋಟಿ ದತ್ತು ಯೋಜನೆಯ ಪೋರ್ಟಲ್ ನ್ನು ಜೂನ್ ಮಾಹೆಯ ಅಂತ್ಯದಲ್ಲಿ ಪ್ರಾರಂಭಿಸುವುದು. ಯಾವ ಗೋಶಾಲೆಯಲ್ಲಿ ಯಾವ ಗೋವುಗಳನ್ನು ದತ್ತು ಪಡೆಯಲಾಗಿದೆ ಎನ್ನುವುದನ್ನು ಪೋರ್ಟಲ್ ನಲ್ಲಿ ಬಿಂಬಿಸುವ ಬಗ್ಗೆ ಚರ್ಚಿಸಲಾಯಿತು.
ಹೊಸ ಮಾದರಿಯಲ್ಲಿ ಪಶು ಚಿಕಿತ್ಸಾಲಯಗಳು
ಗ್ರಾಮೀಣ ಪ್ರದೇಶಗಳ ಪಶುಚಿಕಿತ್ಸಾಲಯಗಳನ್ನು ಹೊಸ ಮಾದರಿಯಲ್ಲಿ ಮಾಡಬೇಕು. ಸಿಬ್ಬಂದಿ ನೇಮಕಾತಿಗಾಗಿ ಡಿಪ್ಲೊಮಾ ವಿದ್ಯಾರ್ಥಿಗಳನ್ನು ಇದಕ್ಕಾಗಿ ನೇಮಿಸುವುದು. 50 ಪಶುಚಿಕಿತ್ಸಾಲಯಗಳನ್ನು ಬಾಡಿಗೆ ಆಧಾರದ ಮೇಲೆ ಪ್ರಾರಂಭಿಸಲು ಅನುಮತಿ ನೀಡುವುದು. ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಾಮಾಣೀಕರಣದ ಅಭಿವೃದ್ಧಿಗಾಗಿ ಸಂಶೋಧನಾ ಕೋಶವನ್ನು ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯಡಿ ಯುಹೆಚ್ಟಿ ಘಟಕಕ್ಕೆ ಅಗತ್ಯವಿರುವ 20 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಅದಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು. ಕುರಿಗಾಹಿಗಳಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು ಐದು ಲಕ್ಷ ಸಹಾಯಧನ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಈ ಕಾರ್ಯಕ್ರಮವನ್ನು ವಹಿಸಿ, ನಿವೇಶನವಿದ್ದವರಿಗೆ ಮನೆ ನಿರ್ಮಿಸಿಕೊಡುವುದು. ನರೇಗಾ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಸೇರಿಸಿ 5000 ಗುರಿ ನಿಗದಿಪಡಿಸಿಕೊಳ್ಳುವುದು ಎಂದು ಚರ್ಚಿಸಲಾಯಿತು.
Recommended Video