ಹೊಸ ವಿನ್ಯಾಸದೊಂದಿಗೆ ಹಳಿ ಮೇಲೆ ಗೋಲ್ಡನ್ ಚಾರಿಯಟ್
ಬೆಂಗಳೂರು, ನವೆಂಬರ್ 19 : ಕರ್ನಾಟಕದ ಹೆಮ್ಮೆಯ ಗೋಲ್ಡನ್ ಚಾರಿಯಟ್ ರೈಲು ಪುನಃ ಸಂಚಾರ ಆರಂಭಿಸಲಿದೆ. ಕೆಎಸ್ಟಿಡಿಸಿ ಮತ್ತು ಐಆರ್ಸಿಟಿಸಿ ಜಂಟಿ ಸಹಭಾಗಿತ್ವದಲ್ಲಿ ರೈಲು ಸಂಚಾರ ನಡೆಸಲಿದ್ದು, ಪ್ರವಾಸಿ ಸ್ಥಳಗಳಿಗೆ ರೈಲಿನ ಮೂಲಕ ಭೇಟಿ ನೀಡಬಹುದಾಗಿದೆ.
ನವದೆಹಲಿಯಲ್ಲಿ ಮಂಗಳವಾರ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ.
ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ನೇತೃತ್ವದಲ್ಲಿ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. 2020ರ ಮಾರ್ಚ್ನಲ್ಲಿ ಐಷಾರಾಮಿ ರೈಲು ಪುನಃ ಹಳಿಯ ಮೇಲೆ ಬರಲಿದೆ.
ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ
ಕೆಎಸ್ಟಿಡಿಸಿ ಗೋಲ್ಡನ್ ಚಾರಿಯಟ್ ರೈಲು ಸೇವೆಯ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಐಷಾರಾಮಿ ರೈಲಿನಿಂದ ನಷ್ಟವೇ ಹೆಚ್ಚಾದ ಕಾರಣ ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಈಗ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಐಆರ್ಸಿಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇತಿಹಾಸದಲ್ಲೇ ಮೊದಲ ಸಲ ಲಾಭ ಗಳಿಸಿದ ಪ್ರವಾಸೋದ್ಯಮ ಇಲಾಖೆ
ಶೀಘ್ರವೇ ಹಕ್ಕುಗಳ ಹಸ್ತಾಂತರ
ಐಆರ್ಸಿಟಿಸಿ ಗೋಲ್ಡನ್ ಚಾರಿಯಟ್ ರೈಲುಗಳ ಸಂಚಾರ ಮತ್ತು ಮಾರುಕಟ್ಟೆ ಕುರಿತ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ರೈಲುಗಳ ಮೇಲಿನ ಹಕ್ಕನ್ನು ಶೀಘ್ರದಲ್ಲಿಯೇ ಹಸ್ತಾಂತರ ಮಾಡಲಿದೆ.
ಮಾರ್ಚ್ನಲ್ಲಿ ಸಂಚಾರ ಆರಂಭ
ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಪ್ರವಾಸೋದ್ಯಮ ಉತ್ತೇಜನಗೊಳಿಸುವ ದೃಷ್ಟಿಯಿಂದ ಗೋಲ್ಡನ್ ಚಾರಿಯಟ್ ಸಂಚಾರವನ್ನು ಪುನಃ ಆರಂಭಿಸಲಾಗುತ್ತಿದೆ. ಸಾಮಾನ್ಯ ಜನರ ಕೈಗೆಟುವ ರೀತಿಯ ಟಿಕೆಟ್ ವ್ಯವಸ್ಥೆ ಇರುತ್ತದೆ. ಐಷಾರಾಮಿ ರೈಲಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, 2020ರ ಮಾರ್ಚ್ ವೇಳೆಗೆ ರೈಲು ಹಳಿಯ ಮೇಲೆ ಪುನಃ ಸಂಚಾರವನ್ನು ಆರಂಭಿಸಲಿದೆ.
ಪ್ರವಾಸೋದ್ಯಮ, ಇತಿಹಾಸ
ಗೋಲ್ಡನ್ ಚಾರಿಯಟ್ ಸಂಚಾರ ಆರಂಭಗೊಂಡರೆ ಇತಿಹಾಸ, ಸಂಸ್ಕೃತಿ, ಪರಿಸರ ಮುಂತಾದ ಅಂಶಗಳನ್ನು ಸೇರಿಸಿ ಟೂರಿಂಗ್ ಪ್ಯಾಕೇಜ್ ಸಿದ್ಧಪಡಿಸಲಾಗುತ್ತದೆ. ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ವಿಜಯಪುರ, ಗೋವಾ ಮುಂತಾದ ಸ್ಥಳಗಳಿಗೆ ಸಂಪರ್ಕಿಸುವಂತೆ ಪ್ಯಾಕೇಜ್ ಸಿದ್ಧವಾಗಲಿದೆ.
2008ರಲ್ಲಿ ಸಂಚಾರ ಆರಂಭ
18 ಬೋಗಿಗಳನ್ನು ಹೊಂದಿರುವ 44 ಅತಿಥಿ ರೂಂಗಳು ಇರುವ ಐಷಾರಾಮಿ ಗೋಲ್ಡನ್ ಚಾರಿಯಟ್ 2008ರಲ್ಲಿ ಸಂಚಾರ ಆರಂಭಿಸಿತ್ತು. ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆ ಜಂಟಿ ಸಹಯೋಗದಲ್ಲಿ ಸಂಚಾರ ನಡೆಯುತ್ತಿತ್ತು. ಆದರೆ, ನಷ್ಟದ ನೆಪದ ಕಾರಣ 1 ವರ್ಷದಿಂದ ರೈಲಿನ ಸಂಚಾರ ಸ್ಥಗಿತಗೊಂಡಿದೆ.
|
ಪಿಯೂಷ್ ಘೋಯೆಲ್ ಟ್ವೀಟ್
ಗೋಲ್ಡನ್ ಚಾರಿಯಟ್ ಸಂಚಾರದ ಕುರಿತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಟ್ವೀಟ್ ಮಾಡಿದ್ದಾರೆ.