ಸೋಂದಾ ವಾದಿರಾಜ ಗುರುಗಳಿಗೆ ಸಾಲಿಗ್ರಾಮ ಹಾರ ಸಮರ್ಪಣೆ
ಶಿರಸಿ, ಮಾ 7: ಉತ್ತರಕನ್ನಡ ಜಿಲ್ಲೆ ಶಿರಸಿ ಬಳಿಯ ಪುಣ್ಯಕ್ಷೇತ್ರ ಸೋಂದಾ (ಸೋದೆ) ದಲ್ಲಿರುವ ಶ್ರೀವಾದಿರಾಜ ಗುರುಗಳ ಮೂಲ ವೃಂದಾವನಕ್ಕೆ 108 ಸಾಲಿಗ್ರಾಮಗಳನ್ನು ಹೊಂದಿರುವ ಚಿನ್ನದ ಹಾರ ಸಮರ್ಪಣೆಯಾಗಲಿದೆ,
ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಈ ಹಾರವನ್ನು ಇದೇ ಭಾನುವಾರ (ಮಾ 8) ವಾದಿರಾಜ ಗುರುಗಳ ಆರಾಧನ ಮಹೋತ್ಸವದ ಸಂದರ್ಭದಲ್ಲಿ ಗುರುಗಳಿಗೆ ಸಮರ್ಪಿಸಲಾಗುತ್ತದೆ.
ಉಡುಪಿ ಪೇಜಾವರ ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು, ಪಲಿಮಾರು ಮತ್ತು ಅದಮಾರು ಕಿರಿಯ ಶ್ರೀಗಳ ಸಮ್ಮುಖದಲ್ಲಿ ಸೋದೆ ಮಠದ ಶ್ರೀಗಳಾದ ಶ್ರೀವಿಶ್ವವಲ್ಲಭತೀರ್ಥರು ಗುರುಗಳ ವೃಂದಾವನಕ್ಕೆ ಸಮರ್ಪಣೆ ಮಾಡಲಿದ್ದಾರೆ.
ನೆಲ್ಲಿಕಾಯಿಯಿಂದ ಲಿಂಬೆಹಣ್ಣಿನ ಗಾತ್ರದ ವರೆಗಿನ ಸಾಲಿಗ್ರಾಮಗಳ ಮೂಲಕ ಈ ಹಾರ ಸಿದ್ದಪಡಿಸಲಾಗಿದೆ. ಮಂಗಳೂರಿನ ಎಸ್ ಎಲ್ ಶೇಟ್ ಮತ್ತು ತಂಡದವರ ಮಾರ್ಗದರ್ಶನದಲ್ಲಿ, ಎರಡು ತಿಂಗಳ ಸತತ ಪರಿಶ್ರಮದಿಂದ ಈ ಹಾರ ಸಿದ್ದಗೊಂಡಿದೆ.
ಬೆಂಗಳೂರಿನ ಉದ್ಯಮಿ ಸೂರ್ಯನಾರಾಯಣ ಅಡಿಗ ಅವರು ಹಾರದ ಖರ್ಚನ್ನು ಭರಿಸಿದ್ದು, ಇದಕ್ಕೆ ಸುಮಾರು ಎರಡು ಕೆಜಿಯಷ್ಟು ಚಿನ್ನವನ್ನು ಬಳಸಲಾಗಿದೆ. ಸೋದೆ ವಿಶ್ವವಲ್ಲಭ ಶ್ರೀಗಳು ನೇಪಾಳದ ಗಂಡಕಿ ನದಿ ತಟದಿಂದ ಈ ಸಾಲಿಗ್ರಾಮಗಳನ್ನು ತಂದಿದ್ದಾರೆ.
ರಮಾ ತ್ರಿವಿಕ್ರಮ ದೇವರ ಉತ್ಸವ ಮತ್ತು ಗುರುಗಳ ಆರಾಧನೆಯ ಈ ಸಮಯದಲ್ಲಿ ಚೆನ್ನೈನ ಹೋಟೆಲ್ ಉದ್ಯಮಿ ಬಾಲೂ ಭಟ್ ಶ್ವೇತವರ್ಣದ ಕುದುರೆಯನ್ನು ಮಠಕ್ಕೆ ದಾನವಾಗಿ ನೀಡಿದ್ದಾರೆ.
ಬುಧವಾರದಂದು (ಮಾ 4) ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ದಿವಾನರಾದ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ, ಹೆರ್ಗ ವೇದವ್ಯಾಸ ಭಟ್ ಅವರಿಂದ, ಶ್ರೀ ವಾದಿರಾಜ ಗುರುಸಾರ್ವಭೌಮರಿಗೆ ಪ್ರಿಯರಾದ ಮತ್ತು ಕ್ಷೇತ್ರದ ಕ್ಷೇತ್ರಪಾಲ ಶ್ರೀ ಭೂತರಾಜರ ವಿಶೇಷ ಪೂಜೆ ಹಾಗು ದಂಡೆಬಲಿ ಉತ್ಸವ ವೈಭವದಿಂದ ಸಂಪನ್ನಗೊಂಡಿದೆ.
ಉತ್ಸವದ ಪರ್ವಕಾಲದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರು, ರಮಾತ್ರಿವಿಕ್ರಮ ದೇವರ, ವಾದಿರಾಜ ಗುರುಗಳ ಮತ್ತು ಭೂತರಾಜರ ದರ್ಶನವನ್ನು ಪಡೆದರು. (ಚಿತ್ರಕೃಪೆ: ಮಧ್ವೇಶ್ ತಂತ್ರಿ)