ಕೈತಪ್ಪಿದ ಗೋಕರ್ಣ ದೇಗುಲ: ನಿಲುವು ಸ್ಪಷ್ಟಪಡಿಸಿದ ರಾಮಚಂದ್ರಾಪುರ ಮಠ
ಯಡಿಯೂರಪ್ಪನವರ ಅವಧಿಯಲ್ಲಿ ರಾಮಚಂದ್ರಾಪುರ ಮಠದ ಸುಪರ್ದಿಗೆ ಹಸ್ತಾಂತರಗೊಂಡಿದ್ದ, ಗೋಕರ್ಣ ಮಹಾಬಲೇಶ್ವರ ದೇವಾಲಯ
ಯಡಿಯೂರಪ್ಪನವರು ಸಿಎಂ ಆಗಿದ್ದ ಅವಧಿಯಲ್ಲಿ ರಾಮಚಂದ್ರಾಪುರ ಮಠದ ಸುಪರ್ದಿಗೆ ಹಸ್ತಾಂತರಗೊಂಡಿದ್ದ, ದಕ್ಷಿಣದ ಕಾಶಿ, ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಮತ್ತೆ ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಧರ್ಮದಾಯ ಇಲಾಖೆಗೆ ವಹಿಸಿ ರಾಜ್ಯ ಉಚ್ಚ ನ್ಯಾಯಾಲಾಯ ಆದೇಶ ಹೊರಡಿಸಿದೆ. ಈ ಸಂಬಂಧ ರಾಮಚಂದ್ರಾಪುರ ಮಠ ತಮ್ಮ ನಿಲುವನ್ನು ಪ್ರಕಟಿಸಿದೆ.
ಶಂಕರಾಚಾರ್ಯರ ಕಾಲದಿಂದಲೂ ರಾಮಚಂದ್ರಾಪುರಮಠ ಹಾಗೂ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಪಾರಂಪರಿಕ ಸಂಬಂಧವಿದ್ದು, 2008ರಲ್ಲಿ ಮಠಕ್ಕೆ ಪುನರ್ಹಸ್ತಾಂತರವಾದ ನಂತರ ದೇವಹಿತ - ಭಕ್ತಹಿತ - ಸೇವಕಹಿತ ಎಂಬ ಅಂಶಗಳನ್ನು ಇಟ್ಟುಕೊಂಡು ದೇವಾಲಯದ ಕೈಂಕರ್ಯವನ್ನು ಕೈಗೊಳ್ಳಲಾಗಿದೆ.
ಪ್ರಸ್ತುತ ರಾಜ್ಯ ಉಚ್ಚನ್ಯಾಯಾಲಯದ ಆದೇಶದಿಂದ ಶ್ರೀಮಠಕ್ಕೆ ಆಘಾತವಾಗಲೀ, ಹಿನ್ನೆಡೆಯಾಗಲೀ ಆಗಿಲ್ಲ. ಏಕೆಂದರೆ ಶ್ರೀಮಠಕ್ಕೆ ಮಹಾಬಲೇಶ್ವರ ದೇವಾಲಯ ಸೇವೆಯ ಸಾಧನವಾಗಿತ್ತು ಹೊರತು, ಸಂಪಾದನೆಯ ಮೂಲವಾಗಿರಲಿಲ್ಲ. (ಗೋಕರ್ಣ ದೇಗುಲ ಹಸ್ತಾಂತರ ಆದೇಶ ರದ್ದುಗೊಳಿಸಿದ ಹೈಕೋರ್ಟ್)
ಶಂಕರಾಚಾರ್ಯರು ಶ್ರೀಕ್ಷೇತ್ರ ಗೋಕರ್ಣದಲ್ಲಿ 1300 ವರ್ಷಗಳ ಹಿಂದೆ ಶ್ರೀಮಠಕ್ಕೆ ಶ್ರೀಕಾರ ಹಾಕುವ ಜೊತೆಗೆ "ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೆ| ಮಹಾಬಲಸ್ಯ ಚ ಲಿಂಗಂಚ ನಿತ್ಯಂ ವಿಧಿವದರ್ಚನಮ್||" ಎಂದು ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಯ ನಿರ್ವಹಣೆಯನ್ನು ಶ್ರೀಮಠಕ್ಕೆ ನೀಡಿದ್ದು, ಪರಂಪರಾಗತವಾಗಿ ಶ್ರೀಮಠ ಗೋಕರ್ಣದ ದೇವಾಲಯವನ್ನು ನಿರ್ವಹಿಸಿಕೊಂಡು ಬರುತ್ತಿದೆ.
ಈತನ್ಮದ್ಯೆ, ಮಠಕ್ಕೆ ಸೇರಿದ ಮಹಾಬಲೇಶ್ವರ ದೇವಾಲಯ ಕಣ್ತಪ್ಪಿನಿಂದ ಮುಜರಾಯಿ ವ್ಯಾಪ್ತಿಗೆ ಸೇರಿತ್ತು. ಈ ತಪ್ಪನ್ನು 2008ರಲ್ಲಿ ಸರಿಪಡಿಸಿಕೊಂಡ ಘನ ಸರ್ಕಾರ ದೇವಾಲಯವನ್ನು ಶ್ರೀಮಠಕ್ಕೆ ಪುನಃ ಹಸ್ತಾಂತರ ಮಾಡಿ, ಅವ್ಯವಸ್ಥೆಯ ಆಗರವಾಗಿದ್ದ ದೇವಾಲಯವನ್ನು ಸುವ್ಯವಸ್ಥೆಯೆಡೆಗೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿತ್ತು.
2008ರಲ್ಲಿ ಮಹಾಬಲೇಶ್ವರ ದೇವಾಲಯ ಶ್ರೀಮಠಕ್ಕೆ ಪುನಃ ಹಸ್ತಾಂತರವಾದ ನಂತರ ಶ್ರೀಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಮಹಾಪರ್ವವೇ ನಡೆದಿದ್ದು, ಕಳೆದ ಎರಡು ವರ್ಷಗಳ ಹಿಂದೆ ದೇವಾಲಯದ ಸುವ್ಯವಸ್ಥಿತ ಆಡಳಿತ, ಸಮರ್ಥ ನಿರ್ವಹಣೆ ಹಾಗೂ ಪಾರದರ್ಶಕತೆಯನ್ನು ಪ್ರಮಾಣೀಕರಿಸುವ ISO ಪ್ರಮಾಣಪತ್ರ ಸಿಕ್ಕಿರುವುದು ಶ್ರೀಮಠದ ಮಾದರಿ ಆಡಳಿತಕ್ಕೆ ಸಾಕ್ಷಿಯಾಗಿದೆ. ಹೈಕೋರ್ಟ್ ಆದೇಶಕ್ಕೆ ಒಂದು ತಿಂಗಳ ತಡೆ, ಮುಂದೆ ಓದಿ..
ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶಕ್ಕೆ ನ್ಯಾಯಾಲಯವೇ 1ತಿಂಗಳ ತಡೆ
ಆದೇಶಕ್ಕೆ ಒಂದು ತಿಂಗಳ ತಡೆ: ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯ ಕುರಿತಾಗಿ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶಕ್ಕೆ ನ್ಯಾಯಾಲಯವೇ ಒಂದು ತಿಂಗಳ ತಡೆ ನೀಡಿದೆ. ತಿಂಗಳ ನಂತರ ಈ ಆದೇಶ ಅನ್ವಯವಾಗಬಹುದಾಗಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಯಲಿರುವುದನ್ನು ಜನತೆ ಗಮನಿಸಬೇಕಿದೆ. ಇತಿಹಾಸವನ್ನು ಅವಲೋಕಿಸಿದಾಗ ಶ್ರೀಮಠ ಹಾಗೂ ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಸಂಬಂಧ ಸುಸ್ಪಷ್ಟವಿದ್ದು, ವರ್ತಮಾನವನ್ನು ಅವಲೋಕಿಸಿದಾಗ ಕ್ಷೇತ್ರದಲ್ಲಿ ಮಠದಿಂದಾದ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ ದಾಖಲಾಗಿವೆ. ಭವಿಷ್ಯದಲ್ಲಿ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀಮಠ ಪ್ರಶ್ನಿಸಲಿದೆ.
ಪ್ರತಿ ರೂಪಾಯಿಗೂ ಆಡಿಟೆಡ್ ಲೆಕ್ಕ ಪತ್ರ
ಹಸ್ತಾಂತರಕ್ಕೂ ಮೊದಲು ಹಾಗೂ ಹಸ್ತಾಂತರದ ನಂತರ ಅಜಗಜಾಂತರ ವ್ಯತ್ಯಾಸವನ್ನು ಗಮನಿಸಬಹುದಾಗಿದೆ. 2008ಕ್ಕೂ ಮೊದಲು ಲೆಕ್ಕ ಪತ್ರಗಳೇ ಇಲ್ಲದಿರುವುದು ಹಾಗೂ ಮಠದ ಆಡಳಿತದಲ್ಲಿ ಪ್ರತಿ ರೂಪಾಯಿಗೂ ಆಡಿಟೆಡ್ ಲೆಕ್ಕ ಪತ್ರ ಇರುವುದು, ಮೊದಲು ಆಗಮಿಸುವ ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ಹಾಗೂ ಈಗ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಹೊತ್ತಿನ ಪ್ರಸಾದ ಭೋಜನ ವ್ಯವಸ್ಥೆ ಮಾಡಿರುವುದು, ಸ್ವಚ್ಛತೆಗೆ ಆದ್ಯತೆ ನೀಡಿರುವುದು, ನಾಡಿನ ಎಲ್ಲ ಸಂತರಿಗೆ ದಿನಕ್ಕೊಬ್ಬರಿಗೆ 'ಗೋಕರ್ಣ ಗೌರವ' ನೀಡಲು ಆರಂಭಿಸಿದ್ದು ಸೇರಿದಂತೆ ದೇವಹಿತ - ಭಕ್ತಹಿತ - ಸೇವಕಹಿತ ಎಂಬ ಅಂಶಗಳ ಆಧಾರದಲ್ಲಿ ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ.
ಹಣ - ಅಧಿಕಾರ - ಪ್ರತಿಷ್ಠೆ ಮುತಾಂಗಿ ಬಯಸದೇ, ಕೇವಲ ಸೇವೆಯ ಸಾಧನ
"ನಾವು ಗೋಕರ್ಣದ ಮಹಾಬಲೇಶ್ವರ ದೇವಾಲಯದಿಂದ ಹಣ - ಅಧಿಕಾರ - ಪ್ರತಿಷ್ಠೆ ಮುತಾಂಗಿ ಯಾವುದನ್ನೂ ಬಯಸದೇ, ಕೇವಲ ಸೇವೆಯ ಸಾಧನವಾಗಿ ಕಂಡಿದ್ದೇವೆ. ಪರಂಪರೆಯ ಸಂಬಂಧ ಇರುವುದರಿಂದ ದೇವಾಲಯದ ಸಂರಕ್ಷಣೆಯ ದೃಷ್ಟಿಯನ್ನಿಟ್ಟುಕೊಂಡು ಕಾನೂನಿನ ಅವಕಾಶಗಳನ್ನು ಬಳಸಿ ಈ ತೀರ್ಪನ್ನು ಪ್ರಶ್ನಿಸುತ್ತೇವೆ", ರಾಘವೇಶ್ವರಭಾರತೀ ಶ್ರೀಗಳು.
ಭಕ್ತರಿಗೆ ಮನಸ್ಸಂತೋಷ, ಆಶ್ರಿತರಿಗೆ ಹಿತ
ಸಾರ್ವಭೌಮ ಮಹಾಬಲನ ಸಂತೋಷವೇ ಪ್ರಮುಖ ಉದ್ಧೇಶ, ಭಕ್ತರಿಗೆ ಮನಸ್ಸಂತೋಷ, ಆಶ್ರಿತರಿಗೆ ಹಿತ, ಶಾಸ್ತ್ರಾಧಾರದಂತೆ ಮತ್ತು ಪೂರ್ವ ಕಾಲದಲ್ಲಿದ್ದ ರೂಢಿ ಪ್ರಕಾರ ದಿನ ನಿತ್ಯದ ಪೂಜೆಯನ್ನು ಮೂರು ಹೊತ್ತಿನ ಬಲಿ, ಪ್ರಾಯಶ್ಚಿತ ಹೋಮದೊಂದಿಗೆ ನಡೆಸಲಾಗುತ್ತದೆ. ಶ್ರೀ ದೇವಾಲಯದಲ್ಲಿ ಶಾಂತಿ, ಸುಗಮ ದರ್ಶನ ಇವುಗಳಿಗೆ ಆದ್ಯತೆ ನೀಡಲಾಗಿದೆ. ದೇವಾಲಯದಲ್ಲಿ ಜನ ನಿಬಿಡತೆಯ ನಡುವೆಯೂ ಶುಚಿತ್ವ ಮತ್ತು ಸ್ವಚ್ಛತೆ ಕಾಪಾಡಲಾಗಿದೆ - ರಾಮಚಂದ್ರಾಪುರ ಮಠ.
ಮಧ್ಯಾಹ್ನ ಮತ್ತು ಸಾಯಂಕಾಲ ಎರಡೂ ಹೊತ್ತು ಉಚಿತವಾಗಿ ಭೋಜನ
'ಅಮೃತಾನ್ನ' ಪ್ರಸಾದ ಭೋಜನವನ್ನು ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ಸಾಯಂಕಾಲ ಎರಡೂ ಹೊತ್ತು ಉಚಿತವಾಗಿ ವಿತರಿಸುತ್ತಿರುವುದು. ದೇವಾಲಯದ ವತಿಯಿಂದ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಗುತ್ತಿದೆ. ಪರಮಪೂಜ್ಯರ ಅನುಗ್ರಹದಿಂದ 'ಸಾರ್ವಭೌಮ' ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆ - ರಾಮಚಂದ್ರಾಪುರ ಮಠ.