ಗೋವಾ ಸಚಿವರ ಹೇಳಿಕೆ : ಯಾರು, ಏನು ಹೇಳಿದರು?
ಬೆಂಗಳೂರು, ಜನವರಿ 15 : 'ಕರ್ನಾಟಕದವರು ಹರಾಮಿಗಳು' ಎಂಬ ಗೋವಾ ನೀರಾವರಿ ಸಚಿವ ವಿನೋದ ಪಾಳೇಕರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ವಿವಿಧ ಪಕ್ಷಗಳ ನಾಯಕರು, ಕನ್ನಡ ಪರ ಹೋರಾಟಗಾರರು ಹೇಳಿಕೆಯನ್ನು ಖಂಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಕಳಸಾ ನಾಲಾ ಕಾಮಗಾರಿಯನ್ನು ವಿನೋದ ಪಾಳೇಕರ ಶನಿವಾರ ವೀಕ್ಷಣೆ ಮಾಡಿದ್ದರು. ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
'ಟ್ರಿಬ್ಯುನಲ್ ಆದೇಶದವರೆಗೂ ಮಹದಾಯಿ ನೀರು ಕೊಡಲ್ಲ'
ಕಾಮಗಾರಿ ವೀಕ್ಷಣೆ ಮಾಡಿ ವಿನೋದ ಪಾಳೇಕರ ಗೋವಾಕ್ಕೆ ಮರಳಿದ್ದರು. ಅಲ್ಲಿ ಮಾಧ್ಯಮದವರು ಕಾಮಗಾರಿ ವೀಕ್ಷಣೆಗೆ ಪೊಲೀಸ್ ಭದ್ರತೆಯಲ್ಲಿ ತೆರಳಿದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಅವರು, 'ಕರ್ನಾಟಕದವರು ಹರಾಮಿಗಳು. ಆದ್ದರಿಂದ, ಪೊಲೀಸ್ ಬಂದೋಬಸ್ತ್ನಲ್ಲಿ ಹೋಗಿದ್ದೆ' ಎಂದು ಹೇಳಿದ್ದಾರೆ.
ಮಹಾದಾಯಿ ವಿವಾದ, ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷದ ಸಭೆ: ಸಿಎಂ
'ಮಹದಾಯಿ ನಮ್ಮ ತಾಯಿ. ಕರ್ನಾಟಕದ ರೈತರು ಪ್ರತಿಭಟನೆ ಮಾಡಿದರೆ ನಮಗೇನು?. ಮಹದಾಯಿ ವಿವಾದ ಪ್ರಕರಣ ನ್ಯಾಯಾಧೀಕರಣದಲ್ಲಿ ಇತ್ಯರ್ಥವಾಗುವ ತನಕ ನೀರು ಕೊಡುವ ಪ್ರಶ್ನೆಯೇ ಇಲ್ಲ' ಎಂದು ಗೋವಾದಲ್ಲಿ ಹೇಳಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೊಳ್ಳುವುದು ಅನಿವಾರ್ಯ:ಪರಿಕ್ಕರ್
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಿಸಬೇಕು' ಎಂದು ಒತ್ತಾಯಿಸಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡುತ್ತಿದ್ದಾರೆ.
|
ಗೋವಾ ಜನರ ಬಗ್ಗೆ ನಮಗೆ ದ್ವೇಷವಿಲ್ಲ
ಗೋವಾ ಸಚಿವರ ಹೇಳಿಕೆ ಖಂಡನೀಯ. ಆದರೆ, ನಮಗೆ ಗೋವಾ ಜನರ ಬಗ್ಗೆ ದ್ವೇಷವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ಕರ್ನಾಟಕಕ್ಕೆ ಬಂದಿದ್ದೆ ಅಪರಾಧ
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, 'ಗೋವಾದ ಸಚಿವರು ಕರ್ನಾಟಕಕ್ಕೆ ಬಂದಿದ್ದೇ ಮೊದಲ ಅಪರಾಧ. ಗೋವಾ ಮಂತ್ರಿ ಮಂಡಳಕ್ಕೆ ಹುಚ್ಚು ಹಿಡಿದಿದೆ. ಏನು ಭಾಷೆ ಬಳಸುತ್ತಾನೆ ಅವನು. ಕೂಡಲೇ ಅವರು ಕನ್ನಡಿಗರ ಕ್ಷಮೆ ಕೇಳಬೇಕು' ಎಂದು ಒತ್ತಾಯಿಸಿದರು.
ಇಂತಹ ಹೇಳಿಕೆಯಿಂದ ಯಾರಿಗೂ ಲಾಭವಿಲ್ಲ
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ವಿನೋದ ಪಾಳೇಕರ ಅವರು ಕನ್ನಡಿಗರ ಬೇಷರತ್ ಕ್ಷಮೆ ಯಾಚಿಸಬೇಕು. ಎರಡೂ ರಾಜ್ಯಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳಿಂದ ಯಾರಿಗೂ ಪ್ರಯೋಜನವಿಲ್ಲ' ಎಂದು ಹೇಳಿದ್ದಾರೆ.
|
ಗೋವಾ ಜನರನ್ನು ಮೆಚ್ಚಿಸಲು ಹೊರಟಿದ್ದಾರೆ
ಕನ್ನಡಿಗರ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.
ಹೇಳಿಕೆ ಮೂರ್ಖತನದ್ದು
'ವಿನೋದ ಪಾಳೇಕರ ಅವರ ಹೇಳಿಕೆ ಮೂರ್ಖತನದ್ದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಅವರು ಬೇಷರತ್ ಆಗಿ ಕ್ಷಮೆ ಯಾಚಿಸಬೇಕು' ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಕನ್ನಡಿಗರ ಕ್ಷಮೆ ಕೋರಲಿ
'ವಿನೋದ ಪಾಳೇಕರ ಅವರು ಕರ್ನಾಟಕದ ಜನರ ಕ್ಷಮೆ ಕೇಳಬೇಕು. ನಮ್ಮ ನೆಲಕ್ಕೆ ಬಂದು ಕನ್ನಡಿಗರು ಮತ್ತು ರಾಜ್ಯಕ್ಕೆ ಅಪಮಾನ ಮಾಡಲು ಅವರು ಯಾರು?. ಅವರು ಹೇಳಿಕೆಗೆ ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ' ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನೀರಿನ ವಿಚಾರದಲ್ಲಿ ರಾಜಕಾರಣ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು, 'ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು. ನಾವು ಅವರನ್ನು ನಿಂದಿಸುಷ್ಟು ಕೀಳು ಮಟ್ಟದವರಲ್ಲ. ಕನ್ನಡಿಗರ ಹೃದಯ ಶ್ರೀಮಂತಿಕೆ ಬಗ್ಗೆ ವಿಶ್ವಕ್ಕೆ ಗೊತ್ತಿದೆ' ಎಂದು ಹೇಳಿದ್ದಾರೆ.