ಕನಸು ಕಟ್ಟಿಕೊಂಡು ಗೋವಾಕ್ಕೆ ಬಂದಿದ್ದ ಕನ್ನಡಿಗರ ಬದುಕು ಮೂರಾಬಟ್ಟೆ
ಕಾರವಾರ, ಸೆಪ್ಟೆಂಬರ್ 26: ಗೋವಾದ ವಾಸ್ಕೋ ಬೈನಾ ಕಡಲತೀರದ 55 ಕನ್ನಡಿಗರ ಮನೆಗಳನ್ನು ಹಾಗೂ 2 ದೇವಾಲಯಗಳನ್ನು ಇಂದು (ಸೆ.26) ಮುರಗಾಂವ್ ನಗರಪಾಲಿಕೆ ತೆರವು ಮಾಡಿದ್ದು, ಗೋವಾದಲ್ಲಿ ಕನ್ನಡಿಗರ ಸ್ಥಿತಿ ಈಗ ಅತಂತ್ರವಾಗಿದೆ.
ತೆರವು ಮಾಡಿದ 55 ಕನ್ನಡಿಗರಿಗೆ ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡದೇ ಗೋವಾ ಸರ್ಕಾರ ಕರುಣಾಹೀನವಾಗಿ ಕನ್ನಡಿಗರನ್ನು ಬೀದಿಗೆ ಬೀಳಿಸಿದೆ. ಇನ್ನು ಸುಮಾರು 50 ಕನ್ನಡಿಗರ ಮನೆಗಳು ಬೈನಾದಲ್ಲಿ ಇದ್ದು, ಅವರಿಗೆ ಒಂದು ತಿಂಗಳಲ್ಲಿ ನೋಟಿಸ್ ನೀಡಿ ಖಾಲಿ ಮಾಡಲು ತಿಳಿಸಲಾಗುತ್ತದೆ. ಖಾಲಿ ಮಾಡದಿದ್ದಲ್ಲಿ ಇದೇ ರೀತಿ ತೆರವು ಮಾಡಲಾಗುತ್ತದೆ ಎಂದು ಗೋವಾ ಸರ್ಕಾರ ಎಚ್ಚರಿಕೆ ಕೂಡ ನೀಡಿದೆಯಂತೆ.
ಬದುಕು ಕಟ್ಟಿಕೊಳ್ಳಲು ಗೋವಾಕ್ಕೆ ತೆರಳಿದ್ದರು
ಸುಮಾರು 40 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಗೋವಾ ರಾಜ್ಯಕ್ಕೆ ವಲಸೆ ಹೋಗಿದ್ದ ಕನ್ನಡಿಗರು ವಾಸ್ಕೋದ ಬೈನಾ ಕಡಲತೀರದ ಬಳಿ ಮನೆ ಕಟ್ಟಿಕೊಂಡು ತಮ್ಮ ವಾಸ್ತವ್ಯ ಹೂಡಿದ್ದರು. ಅಂದು ಗೋವಾ ಸರ್ಕಾರ ಈ ಕನ್ನಡಿಗರ ಮನೆಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಮನೆ ಸಂಖ್ಯೆ ಕೂಡ ನೀಡಿತ್ತು. ಆದರೆ ಅದೇ ಸರ್ಕಾರ ಈಗ ಮನೆಗಳ ತೆರವು ಕಾರ್ಯಾಚರಣೆ ಮಾಡಿದೆ. ಆದರೆ ಇದು ಮೊದಲೇನಲ್ಲ!
ವೋಟ್ ಬ್ಯಾಂಕ್ ಆಗಿಬಿಟ್ಟ ಬೈನಾ ಕನ್ನಡಿಗರು!
ಎಲ್ಲ ಕಡೆಯಲ್ಲಿಯೂ ಇರುವಂತೆಯೆ ಗೋವಾದಲ್ಲಿಯೂ ರಾಜಕಾರಣಿಗಳಿದ್ದಾರೆ. ಅಲ್ಲೂ ಕೂಡ ರಾಜಕೀಯ ನಡೆಯುತ್ತದೆ. ಗೋವಾದ ರಾಜಕಾರಣಿಗಳು ಬೈನಾ ಕನ್ನಡಿಗರನ್ನ ತಮ್ಮ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಇದೆ. ಚುನಾವಣೆ ಬಂದಾಗ ಪೊಳ್ಳು ಆಶ್ವಾಸನೆಗಳನ್ನು ನೀಡಿ, ಬೈನಾ ಕನ್ನಡಿಗರನ್ನು ಓಲೈಕೆ ಮಾಡಲಾಗುತ್ತದೆ. ಅಧಿಕಾರಕ್ಕೆ ಬಂದ ಬಳಿಕ ಅವರದೇ ಮನೆಗಳನ್ನು ತೆರವು ಮಾಡಲು ಸೂಚನೆ ನೀಡಲಾಗುತ್ತದೆ ಎಂಬುದು ಆರೋಪ.
ಕ್ರೈಸ್ತರಿಗೆ ಸೇರಿದ ಭೂಮಿ
ಪ್ರಸ್ತುತ ತೆರವುಗೊಳಿಸಲಾಗುತ್ತಿರುವ ಕನ್ನಡಿಗರಿದ್ದ ಭೂಮಿ ಕ್ರೈಸ್ತರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಅದನ್ನು ಚರ್ಚ್ ಆನಂದ್ ಬೋಸ್ ಎಂಬ ಕಂಪನಿಗೆ ಮಾರಾಟ ಮಾಡಲಾಗಿದೆ. ಆ ಕಂಪನಿ, ಕನ್ನಡಿಗರಿಗೆ ಬೇರೆ ವಸತಿಯ ವ್ಯವಸ್ಥೆ ಮಾಡಿಕೊಡುವುದಾಗಿಯೂ ವಾಗ್ದಾನ ನೀಡಿತ್ತು. ಈಗ ವಾಗ್ದಾನವೂ ಮಣ್ಣುಪಾಲಾಗಿದೆ.
800ಕ್ಕೂ ಅಧಿಕ ಕನ್ನಡಿಗರ ಮನೆ ತೆರವು
2004ರಿಂದ ಸುಮಾರು 800ಕ್ಕೂ ಅಧಿಕ ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ಈಗಾಗಲೆ ತೆರವು ಮಾಡಿದೆ. ಆದರೆ ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಮಾತ್ರ ಈವರೆಗೆ ಮಾಡಿಲ್ಲ. ತೆರವು ಕಾರ್ಯಾಚರಣೆಯಿಂದ ಬೀದಿ ಪಾಲಾಗುತ್ತಿರುವ ಕನ್ನಡಿಗರ ಬಗ್ಗೆ ಕಿಂಚಿತ್ತು ಸಹಾಯ ಕೂಡ ಗೋವಾ ಸರ್ಕಾರ ಮಾಡುತ್ತಿಲ್ಲ. ಪದೇ ಪದೇ ಕನ್ನಡಿಗರ ಮನೆಗಳ ತೆರವು ಕಾರ್ಯಾಚರಣೆ ಗೋವಾದಲ್ಲಿ ನಡೆಯುತ್ತಿದ್ದರೂ ಕೂಡ ಕರ್ನಾಟಕದಿಂದಲೂ ಕೂಡ ಯಾವುದೇ ನೆರವು ಸಿಗುತ್ತಿಲ್ಲ ಎಂಬ ಆರೋಪ ಕೂಡ ಇದೆ.