ಮಹದಾಯಿ; ಬಿಜೆಪಿಯಿಂದ ಕರ್ನಾಟಕಕ್ಕೆ ಇದೆಂತಾ ಮೋಸ?
ಬೆಂಗಳೂರು, ಡಿಸೆಂಬರ್ 28: ಉತ್ತರ ಕರ್ನಾಟಕದ ಜನ ಮಹದಾಯಿ ನೀರು ಕುಡಿಯಬೇಕು ಎಂದು ಆರು ದಶಕಗಳಿಂದ ಕಾಯ್ದು ಕುಳಿತರೂ ಸರ್ಕಾರಗಳು, ರಾಜಕೀಯ ಪಕ್ಷಗಳು ಮಾತ್ರ ಅಲ್ಲಿನ ಜನರೊಂದಿಗೆ ಅಕ್ಷರಶಃ ಚೆಲ್ಲಾಟ ಆಡುತ್ತಿವೆ. ಆದರೆ, ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹದಾಯಿ ವಿಚಾರದಲ್ಲಿ ಉಕ ಜನತೆಗೆ ವಿಶ್ವಾಸಾಘಾತವನ್ನುಂಟು ಮಾಡುತ್ತಿರುವುದು ಈಗ ಬಟಾಬಯಲಾಗಿದೆ.
ಸ್ಥಗೀತಗೊಂಡಿದ್ದ ಕಳಸಾ ಬಂಡೂರಿ ಯೋಜನೆಯ ಕಾಮಗಾರಿಯನ್ನು ಕೆಲವು ಷರತ್ತುಗಳೊಂದಿಗೆ ಕರ್ನಾಟಕ ಆರಂಭಿಸಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ಕಳೆದ ಅಕ್ಟೋಬರ್ 17 ರಂದು (ಕರ್ನಾಟಕ ಉಪ ಚುನಾವಣೆ ಘೋಷಣೆಯಾದ ನಂತರ) ಆದೇಶ ಹೊರಡಿಸಿತ್ತು. ನಂತರ ಡಿಸೆಂಬರ್ 18 ರಂದು (ಉಪ ಚುನಾವಣೆ ಫಲಿತಾಂಶ ಬಂದ ನಂತರ) ಮತ್ತೊಂದು ಆದೇಶ ಹೊರಡಿಸಿ, ತನ್ನ ಹಿಂದಿನ ಆದೇಶವನ್ನು ತಡೆ ಹಿಡಿದಿರುವುದಾಗಿ ಸೂಚನಾ ಪತ್ರ ಹೊರಡಿಸಿತು. ಆದರೆ, ಇದೊಂದು ಬಿಜೆಪಿಯ ಬೃಹತ್ ನಾಟಕ, ಕೇವಲ ಕರ್ನಾಟಕ ಉಪಚುನಾವಣೆಯಲ್ಲಿ ತನ್ನ ಪರವಾಗಿ ಈ ವಿಷಯವನ್ನು ಬಳಸಿಕೊಳ್ಳುವ ಸಲುವಾಗಿ ಮಾಡಿದ್ದ ಗಿಮಿಕ್ ಎಂಬುದು ಬಯಲಾಗಿದೆ. ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಗೋವಾ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರೇ ಈ ವಿಷಯ ಬಹಿರಂಗಗೊಳಿಸಿದ್ದಾರೆ.
ಸತ್ಯಪಾಲ್ ಮಲಿಕ್ ಹೇಳಿದ ಸತ್ಯ
'ಕುಡಿಯುವ ನೀರಿಗಾಗಿ ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಿಸಬಹುದು ಎಂದು ಪರಿಸರ ಸಚಿವಾಲಯ ಕರ್ನಾಟಕಕ್ಕೆ ಸಮ್ಮತಿ ನೀಡಿದ್ದು ಗೋವಾದ ಸಿಟ್ಟಿಗೆ ಕಾರಣವಾಗಿತ್ತು. ಇದನ್ನು ಹಿಂಪಡೆಯಲು ನಾನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರ ಬಳಿ ಗೋವಾದ ಆಕ್ಷೇಪವನ್ನು ತಿಳಿಸಿದಾಗ, ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ಸಮ್ಮತಿ ನೀಡಿರುವುದನ್ನು ತಡೆ ಹಿಡಿಯಲು ವಿಳಂಬವಾಗಿದೆ. ಚುನಾವಣೆ ಮುಗಿದ ನಂತರ ಕಾಮಗಾರಿಗೆ ಅನುಮತಿ ನೀಡುವುದಿಲ್ಲ ಎಂಬ ಪತ್ರವನ್ನು ನಿಮಗೆ ಕಳಿಸುತ್ತೇನೆ ಎಂದು ಜಾವಡೇಕರ್ ಹೇಳಿದ್ದರು' ಎಂದು ಮಲಿಕ್ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಸ್ಪೋಟಕ ಸತ್ಯ ಹೇಳಿದ್ದಾರೆ.
ಮಹದಾಯಿಗೆ ಇಲ್ಲ ತಡೆ: ರಾಜ್ಯಕ್ಕೆ ಕೇಂದ್ರ ಸಚಿವ ಪತ್ರ
ಅಕ್ಟೋಬರ್ 17 ರ ಆದೇಶ ಏನು?
ಅಕ್ಟೋಬರ್ 17 ರಂದು ಕೇಂದ್ರ ಪರಿಸರ ಇಲಾಖೆಯು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, 'ಜಲವಿದ್ಯುತ್ ಅಥವಾ ನೀರಾವರಿ ಯೋಜನೆ ಹಾಗೂ ಹೊಸ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಹಾಯಿಸುವ ಉದ್ದೇಶವನ್ನು ಕಳಸಾ ಬಂಡೂರಿ ಯೋಜನೆ ಒಳಗೊಂಡಿಲ್ಲ. ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಯೋಜನೆ ಆರಂಭಿಸಲು ಅಡ್ಡಿ ಇಲ್ಲ. ಕರ್ನಾಟಕ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬಹುದಾಗಿದೆ' ಎಂದು ಪತ್ರ ಬರೆದಿತ್ತು.
ಡಿಸೆಂಬರ್ 18 ರ ಆದೇಶ ಏನು?
ಕರ್ನಾಟಕದ ಉಪ ಚುನಾವಣೆ ಫಲಿತಾಂಶ ಬಂದು ಬಿಜೆಪಿ ಅದರಲ್ಲಿ ಯಶಸ್ವಿಯಾದ ಬೆನ್ನಲ್ಲೇ ಕೇಂದ್ರ ಪರಿಸರ ಸಚಿವಾಲಯದಿಂದ ಮತ್ತೊಂದು ಆದೇಶ ಹೊರಡುತ್ತದೆ. ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತಡೆ ಹಿಡಿದಿದೆ ಎಂದು ಆದೇಶ ಹೊರಡಿಸಿತು. ಗೋವಾ ರಾಜ್ಯದ ದಾವೆ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸಚಿವಾಲಯ ಹೇಳಿತು.
ಕರ್ನಾಟಕಕ್ಕೆ ಹಿನ್ನಡೆ; ಮಹದಾಯಿ ಯೋಜನೆಗೆ ನೀಡಿದ್ದ ಒಪ್ಪಿಗೆ ವಾಪಸ
ಶೇಮ್ ಆನ್ ಬಿಜೆಪಿ
ಕಳೆದ ಆರು ದಶಕಗಳ ಬೇಡಿಕೆಯಾಗಿರುವ ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯೋಜನೆಯನ್ನು ದಾಳವಾಗಿಸಿಕೊಂಡು ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೇ ನಮ್ಮ ಕೆಲಸ ಆಗುತ್ತವೆ ಎಂದು ಬಿಜೆಪಿ ಬೆಂಬಲಿಸಿದ ಉತ್ತರ ಕರ್ನಾಟಕದ ಜನತೆಗೆ ಬಿಜೆಪಿ ನಡೆಯಿಂದ ಮರ್ಮಾಘಾತವಾಗಿದೆ. ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಗೋವಾ ೨೮ ಸ್ಥಾನಗಳನ್ನು ಹೊಂದಿರುವ ಕರ್ನಾಟಕವನ್ನು ಮಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಳಸಾ ಬಂಡೂರಿ ಹೋರಾಟಗಾರರು ಹೇಳುತ್ತಿದ್ದಾರೆ.