ಪ್ರಸ್ತಾವ ತಿರಸ್ಕರಿಸಿದ ಗೋವಾ ಸಿಎಂ; ಮತ್ತೆ ಮುನ್ನೆಲೆಗೆ ಬಂದ ಮಹದಾಯಿ ವಿವಾದ
Recommended Video
ಹುಬ್ಬಳ್ಳಿ, ಸೆಪ್ಟೆಂಬರ್ 18: ಮಹದಾಯಿ ವಿವಾದದ ಕುರಿತು ಕಳೆದ ಹಲವು ದಿನಗಳಿಂದ ಸರ್ಕಾರದ ನಡೆಯಿಂದ ಸಹಜವಾಗಿ ಹಲವು ನಿರೀಕ್ಷೆಗಳು ಮೂಡಿದ್ದವು. ಆದರೆ ಸಿಎಂ ಯಡಿಯೂರಪ್ಪ ಅವರು ಗೋವಾ ಸಿಎಂಗೆ ನ್ಯಾಯಾಲಯದ ಆಚೆಗೆ ವಿವಾದ ಇತ್ಯರ್ಥಕ್ಕೆ ಮೂರು ರಾಜ್ಯಗಳ ಸಿಎಂ ಸಭೆ ನಡೆಸುವ ಕುರಿತ ಪ್ರಸ್ತಾಪವನ್ನು ಗೋವಾ ಸಿಎಂ ತಿರಸ್ಕರಿಸಿದ್ದಾರೆ. ಇದರಿಂದ ಗೋವಾ ಸರ್ಕಾರ ಮತ್ತೊಂದು ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಖ್ಯಾತೆ ತೆಗೆದಿದೆ.
ನ್ಯಾಯಾಲಯದ ಆಚೆಗೆ ವಿವಾದ ಬಗೆಹರೆಸಿಕೊಳ್ಳುವುದು ಅಸಾಧ್ಯವಾದ ಮಾತು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ ಸ್ಪಷ್ಟ ಪಡಿಸಿದ್ದಾರೆ.
ಮಹದಾಯಿ ವಿವಾದ: ಸೆ.14ಕ್ಕೆ ಗೋವಾ, ಕರ್ನಾಟಕ ಸಿಎಂಗಳ ಸಭೆ
ಈಗಾಗಲೇ ಈ ಹಿಂದೇ ಇದೇ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬರೆದ ಪತ್ರ ಓದುವ ಮೂಲಕ ಯಡಿಯೂರಪ್ಪ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ಸಭೆಯ ಮೂಲಕ ವಿವಾದ ಇತ್ಯರ್ಥ ಪಡಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇದರಿಂದ ಮಹದಾಯಿ ವಿವಾದಕ್ಕೆ ಮತ್ತೆ ರಾಜಕೀಯ ಲೇಪನವಾಗುವ ಸಾಧ್ಯತೆಯೇ ಹೆಚ್ಚು.
ಮಲಪ್ರಭಾ ಜಲಾನಯನಕ್ಕೆ ಹರಿಸುವ ಆದೇಶ ನೀಡಿದ್ದ ನ್ಯಾಯಮಂಡಳಿ
ಕಳೆದ ವರ್ಷವಷ್ಟೆ ನ್ಯಾಯಮಂಡಳಿ ವಿವಾದದ ಕುರಿತು ಆದೇಶ ನೀಡಿತ್ತು. ನಂತರ ಈ ಬಗ್ಗೆ ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಮನವಿ ಅರ್ಜಿಗಳನ್ನು ಸಲ್ಲಿಸಿವೆ. ನದಿ ನೀರನ್ನು ಹಂಚಿಕೊಳ್ಳುವ ಬಗ್ಗೆ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮೂರು ರಾಜ್ಯಗಳ ನಡುವಿನ ವಿವಾದವನ್ನು ಆಲಿಸಿದ ನ್ಯಾಯಮಂಡಳಿ, ಕಳೆದ ವರ್ಷ ಆಗಸ್ಟ್ನಲ್ಲಿ ಮಹದಾಯಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿಯನ್ನು ಅಂದರೆ 3.9 ಟಿಎಂಸಿ ಸೇರಿದಂತೆ ಬರಿದಾಗಿರುವ ಮಲಪ್ರಭಾ ನದಿ ಜಲಾನಯನ ಪ್ರದೇಶಕ್ಕೆ ಹರಿಸುವಂತೆ ನಿರ್ದೇಶಿಸಿತ್ತು. ಅಲ್ಲದೆ ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರನ್ನು ಹಂಚಿಕೆ ಮಾಡಿ ಆದೇಶಿಸಿತ್ತು.
ಫಲ ಕೊಡಲಿಲ್ಲ ಗೋವಾ ಸಿಎಂ ಜೊತೆ ಸಂವಾದದ ಇಂಗಿತ
ಆದರೆ ವಿವಾದದ ಕುರಿತು ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಗೋವಾ ಸಿಎಂ ಜೊತೆ ಸಭೆ ನಡೆಸುವ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಗೋವಾ ಸಿಎಂ ನ್ಯಾಯಾಲಯದಾಚೆಗೆ ವಿವಾದ ಇತ್ಯರ್ಥಕ್ಕೆ ನಿರಾಕರಿಸಿದ್ದಾರೆ. ಇದರಿಂದ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಮಹದಾಯಿ : ಕರ್ನಾಟಕದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗೋವಾ
ಮತ್ತೆ ವಿವಾದಕ್ಕೆ ರಾಜಕೀಯ ಲೇಪನ!
ಈಗಾಗಲೇ ನಾಲ್ಕನೇ ವರ್ಷದತ್ತ ಮಹದಾಯಿಗಾಗಿ ಗದಗ ಜಿಲ್ಲೆ ನರಗುಂದದಲ್ಲಿ ನಿರಂತರ ಪ್ರತಿಭಟನೆ ಮುಂದುವರಿದಿದೆ. ಆದರೆ ರಾಜಕೀಯ ಪಕ್ಷಗಳು ಈ ವಿವಾದವನ್ನು ಪರಸ್ಪರ ಕೆಸರೆರಚಾಟದ ಮೂಲಕ ಜೀವಂತವಾಗಿಟ್ಟುಕೊಂಡೇ ಬಂದಿವೆ ಎನ್ನುವುದು ಹೋರಾಟಗಾರರ ಆರೋಪ. ಆದರೆ ಸದ್ಯ ಮತ್ತೆ ಈ ವಿವಾದವನ್ನು ರಾಜಕೀಕರಣಗೊಳಿಸುವ ಸಾಧ್ಯತೆಯೇ ಹೆಚ್ಚು. ಕಾಂಗ್ರೆಸ್ ಮತ್ತು ಜೆಡಿಎಸ್, ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಅವರನ್ನು ಮನವೊಲಿಸುವುದು ಸಾಧ್ಯವಾಗಲಿಲ್ಲ ಎಂಬ ಆರೋಪವನ್ನು ಸಹಜವಾಗಿಯೇ ಮಾಡುವ ಸಾಧ್ಯತೆ ಹೆಚ್ಚು. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಗೋವಾ ಸಿಎಂ ಸಾವಂತ್ ಸಭೆಗೆ ನಿರಾಕರಿಸಿರುವುದಕ್ಕೆ ಅಲ್ಲಿನ ವಿರೋಧ ಪಕ್ಷಗಳೇ ಕಾರಣ ಎಂಬ ಪ್ರತ್ಯುತ್ತರವನ್ನು ನೀಡುವ ಸಾಧ್ಯತೆಯೇ ಹೆಚ್ಚು.
ಅಸ್ತ್ರವಾಗುವುದೇ ಕಾಂಗ್ರೆಸ್ ವಿರೋಧ
ಗೋವಾ ಪ್ರತಿಪಕ್ಷದ ನಾಯಕ ದಿಗಂಬರ ಕಾಮತ್ ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿ ತನ್ನ ಆದೇಶವನ್ನು ನೀಡಿರುವುದರಿಂದ, ಯಾವುದೇ ಮಾತುಕತೆಗೆ ಅವಕಾಶವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಗೋವಾ ಸಿಎಂ ಸಭೆಗೆ ನಿರಾಕರಣೆ ಮಾಡಿದ್ದಾರೆ. ಹೀಗಾಗಿ ಗೋವಾ ಕಾಂಗ್ರೆಸ್ಸಿಗರ ವಿರೋಧವನ್ನು ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಆದರೆ 4 ಜಿಲ್ಲೆ, 11 ತಾಲೂಕಿನ ಜನರಲ್ಲಿ ವಿವಾದವನ್ನು ಇತ್ಯರ್ಥ ಪಡಿಸುವ ಕುರಿತು ಯಡಿಯೂರಪ್ಪ ನೀಡಿರುವ ಹೇಳಿಕೆಯಿಂದ ಬಹು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಗೋವಾ ನಡೆಯಿಂದ ನಿರೀಕ್ಷೆ ಹುಸಿಯಾಯಿತು. ಸಧ್ಯ ಗೋವಾ ಹಾಗೂ ಕರ್ನಾಟಕ ರಾಜ್ಯದಿಂದ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯ ಕುರಿತು ನ್ಯಾಯಾಲಯದ ಆದೇಶದೆಡೆಗೆ ಜನರು ಮುಖ ಮಾಡಿದ್ದಾರೆ.