ನ್ಯಾನೋ ಕಾರು ಉತ್ಪಾದನೆ ಕಾರ್ಖಾನೆ ಕೈತಪ್ಪಿದ್ದರ ಹಿಂದಿನ ಕಾರಣ ವಿವರಿಸಿದ ಸಚಿವ ನಿರಾಣಿ!
ಬೆಂಗಳೂರು, ಸೆ. 25: ರಾಜ್ಯದಲ್ಲಿ 2022ರ ನವೆಂಬರ್ ತಿಂಗಳ 2ರಿಂದ 4ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಧಾಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸದುದ್ದೇಶದಿಂದ 2022ರ ನವೆಂಬರ್ 2ರಿಂದ ಮೂರು ದಿನಗಳ ಕಾಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಮತ್ತೊಮ್ಮೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸುವುದಾಗಿ ಹೇಳಿದರು.
ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ದೇಶ-ವಿದೇಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಅಲ್ಲದೆ ಉದ್ಯೋಗ ಕ್ರಾಂತಿಯಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ನಿರ್ಮಾಣವಾಗಬೇಕಿದ್ದ ನ್ಯಾನೋ ಕಾರು ಉತ್ಪಾದನಾ ಘಟಕ ತಪ್ಪಿದ್ದರ ಹಿಂದಿನ ಕಾರಣವನ್ನು ಇದೇ ಸಂದರ್ಭದಲ್ಲಿ ಕೈಗಾರಿಕಾ ಸಚಿವ ನಿರಾಣಿ ಬಹಿರಂಗ ಪಡಿಸಿದ್ದಾರೆ.
ಯಾದಗಿರಿಯಲ್ಲಿ ಉದ್ಯೋಗ ಅವಕಾಶಗಳು!
ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಔಷಧಿ ಕಾರ್ಖಾನೆಯನ್ನು ತೆರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನವನ್ನು ಕೊಡುತ್ತದೆ. ಇದಕ್ಕಾಗಿ ಮೂರು ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕವೂ ಸಹ ಆರ್ಥಿಕ ನೆರವು ಪಡೆಯಲಿದೆ. ಇದರಿಂದ ಈ ಭಾಗದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನ್ಯಾನೋ ಕಂಪನಿ ತಪ್ಪಲು ಇದ್ದ ಕಾರಣವನ್ನೂ ಅವರು ವಿವರಿಸಿದ್ದಾರೆ.
ಕರ್ನಾಟಕದಲ್ಲಿ ತಯಾರಾಗಬೇಕಿತ್ತು ನ್ಯಾನೋ ಕಾರು!
ಟಾಟಾ ನ್ಯಾನೋ ಕಾರು ತಯಾರಿಕಾ ಕಂಪನಿಯು ಕರ್ನಾಟಕದಲ್ಲಿ ಕಾರ್ಯಾರಂಭ ಮಾಡಬೇಕಾಗಿತ್ತು. ಆದರೆ ಅದಾಗಿರಲಿಲ್ಲ. ಅದರ ಹಿಂದಿದ್ದ ಕಾರಣವನ್ನು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿವರಿಸಿದ್ದಾರೆ.
"ಈ ಹಿಂದೆ ಲ್ಯಾಂಡ್ ಬ್ಯಾಂಕ್ ಇಲ್ಲದ ಕಾರಣ 2010ರಲ್ಲಿ ನ್ಯಾನೋ ಕಂಪನಿ ರಾಜ್ಯಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಂಪನಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಸಕಾಲಕ್ಕೆ ಸರಿಯಾಗಿ ಭೂಮಿ ಸಿಗದ ಕಾರಣ ಕಂಪನಿಯು ಗುಜರಾತಿಗೆ ತೆರಳಬೇಕಾಯಿತು" ಎಂದು ನ್ಯಾನೋ ಕಂಪನಿ ಕರ್ನಾಟಕದಿಂದ ಹೊರಗೆ ಹೋಗಲು ಇದ್ದ ಕಾರಣವನ್ನು ಸಚಿವ ನಿರಾಣಿ ವಿವರಿಸಿದ್ದಾರೆ. ನ್ಯಾನೊ ಕಂಪನಿ ಕೈತಪ್ಪಿದರೂ ಮುಂದೆ ಸರ್ಕಾರ ತಿದ್ದಿಕೊಳ್ಳಲು ಸಹಾಯಕವಾಗಿದ್ದನ್ನು ನಿರಾಣಿ ವಿವರಿಸಿದ್ದಾರೆ.
ನ್ಯಾನೋ ಕಾರು ಕೈತಪ್ಪಿದ್ದರಿಂದ ಭೂ ಬ್ಯಾಂಕ್ ಯೋಜನೆ!
"ನ್ಯಾನೋ ಕಂಪನಿ ರಾಜ್ಯಕ್ಕೆ ಬರಲಿಲ್ಲ. ಹೀಗಾಗಿಯೇ ರಾಜ್ಯದಲ್ಲಿ ಲ್ಯಾಂಡ್ ಬ್ಯಾಂಕ್ ಪರಿಕಲ್ಪನೆಯನ್ನು ಜಾರಿಗೆ ತಂದೆವು. ಪರಿಣಾಮ ಅನೇಕ ಕೈಗಾರಿಕೆಗಳು ಜಾರಿಯಾಗಲು ಸಾಧ್ಯವಾಯಿತು" ಎಂದು ಸಚಿವ ನಿರಾಣಿ ತಿಳಿಸಿದ್ದಾರೆ. ಯಾದಗಿರಿ ಜಿಲ್ಲೆ ಕಡೆಚೂರು ಮತ್ತು ಬಾಡಿಯಾಳ ಗ್ರಾಮದಲ್ಲಿ 3232 ಹಾಗೂ 3282 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಯಿತು. ಇದರಲ್ಲಿ 1600 ಎಕರೆ ಜಮೀನನ್ನು ಅಭಿವೃದ್ಧಿಪಡಿಸಿ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ" ಎಂದು ಭೂ ಬ್ಯಾಂಕ್ ಯೋಜನೆ ಕುರಿತು ವಿವರಿಸಿದ್ದಾರೆ.
ಕರ್ನಾಟಕದಲ್ಲಿ
ಈಗಾಗಲೇ
ಕೈಗೆತ್ತಿಕೊಳ್ಳಲಾಗಿರುವ
ಚೆನ್ನೈ-ಮುಂಬೈ
ಕೈಗಾರಿಕಾ
ಕಾರಿಡಾರ್
ತುಮಕೂರು,
ಬೆಂಗಳೂರು,
ಮುಂಬೈ,
ಆರ್ಥಿಕ
ಕಾರಿಡಾರ್,
ಹೈದರಾಬಾದ್-ಬೆಂಗಳೂರು
ಯೋಜನೆಯನ್ನು
ಅನುಷ್ಠಾನಗೊಳಿಸಲು
ಕ್ರಮ
ಕೈಗೊಳ್ಳಲಾಗಿದೆ
ಎಂದು
ವಿವರಿಸಿದ್ದಾರೆ.
ಕೈಗಾರಿಕೆಗೆ ಭೂಮಿ ಬಳಕೆ ಹೆಚ್ಚಾಗಬೇಕು!
ಮಾಜಿ ಸಚಿವ ಈಶ್ವರ್ ಖಂಡ್ರೆ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವ ನಿರಾಣಿ ಅವರು, "ಕೈಗಾರಿಕಾ ಪ್ರದೇಶಾಭಿವೃದ್ಧಿ ವತಿಯಿಂದ ಬೀದರ್ ಜಿಲ್ಲೆಯಲ್ಲಿ 1096.55 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 1432.33 ಎಕರೆ ಜಮೀನನ್ನು 1392 ಘಟಕಗಳಿಗೆ ಹಂಚಿಕೆ ಮಾಡಲಾಗಿದೆ. 1150 ಎಕರೆ ಜಮೀನನ್ನು ನಾಲ್ಕು ಯೋಜನೆಗಳಿಗೆ ಕಾಯ್ದಿರಿಸಲಾಗಿದೆ" ಎಂದು ತಿಳಿಸಿದ್ದಾರೆ. "ರಾಜ್ಯದಲ್ಲಿ ಕೈಗಾರಿಕಾ ಬಳಕೆಗೆ 0.48 ಜಮೀನು ಬಳಸಿಕೊಳ್ಳುತ್ತಿದ್ದೇವೆ. ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕಿದೆ. ಭೂ ಬ್ಯಾಂಕ್ ಯೋಜನೆ ಮೂಲಕ ನಾವು ಕೈಗಾರಿಕಾ ಬೆಳವಣಿಗೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ" ಎಂದು ಇದೇ ವೇಳೆ ತಿಳಿಸಿದ್ದಾರೆ.
Recommended Video