ಪುಂಡರಿಗೆ ಬಿಸಿ ಮುಟ್ಟಿಸಿದ ಬಿಸಿಲ ನಾಡ ಹುಡುಗೀರು
ರಾಯಚೂರು, ಜುಲೈ, 15 : ಹುಡುಗಿಯರನ್ನು ಚುಡಾಯಿಸುವುದನ್ನು ಕರ್ತವ್ಯ ಮಾಡಿಕೊಂಡ ಪಡ್ಡೆ ಹುಡುಗರಿಗೆ ಉತ್ತರ ಕರ್ನಾಟಕದ ಯುವತಿಯರು ಸರಿಯಾಗಿಯೇ ಒಂದು ಟಾಂಗ್ ನೀಡಿದ್ದಾರೆ. ಅದೇನಪ್ಪಾ ಅಂದ್ರೇ?
ರಾಯಚೂರಿನ ವಿವಿಧ ಕಾಲೇಜಿನ ಸುಮಾರು 100 ಜನ ಯುವತಿಯರು ಎಐಎಂಎಸ್ ಎಸ್ (All India Mahila Sanskritik Sanghathan) ಬ್ಯಾನರ್ ಅಡಿಯಲ್ಲಿ ಜಾಥಾ ಕೈಗೊಂಡಿದ್ದು, ಬುಧವಾರ ಮಾಣಿಕ್ಯಪ್ರಭು ದೇವಾಲಯದ ಬಳಿಯ ಸದಾರ್ ಪೊಲೀಸ್ ಠಾಣೆ ಮುಂದೆ ಹುಡುಗರು ಚುಡಾಯಿಸುವುದರ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.[ಗೋವಾ : ಪೋಲಿ ಚಿತ್ರ ನೋಡುವ ಕಾಲೇಜು ಹುಡುಗರು]
ಹಲವು ಏರಿಯಾಗಳಲ್ಲಿ ಪುಂಡರು ಪೋಲಿಗಳ ಸಂಖ್ಯೆ ಅಧಿಕವಾಗಿದ್ದು, ಕಾಲೇಜು, ಶಾಲೆಗೆ ಹೋಗುವ ದಾರಿಯಲ್ಲಿ ಬಂದು ನಿಲ್ಲುವ ಹುಡುಗರು ಅವಾಚ್ಯ ಶಬ್ದಗಳನ್ನು ಬಳಸಿ ಹುಡುಗಿಯರನ್ನು ಚುಡಾಯಿಸುತ್ತಿರುವುದು ಹೆಚ್ಚಾಗಿದೆ. ಇದರಿಂದ ವಿದ್ಯಾನಗರ ಸುತ್ತಮುತ್ತಲು ಹುಡುಗಿಯರು ಓಡಾಡುವುದು ಕಷ್ಟಕರವಾಗಿದೆ. ಯಾವಾಗಲೂ ಭಯದಲ್ಲಿಯೇ ಹೆಜ್ಜೆ ಹಾಕಬೇಕಾಗಿದೆ. ಹಾಗಾಗಿ ಇದರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹುಡುಗಿಯರು ಪ್ರತಿಭಟನೆ ನಡೆಸಿದ್ದಾರೆ.
ಮನೆಗೆ ಹೋಗುವ ದಾರಿಯಲ್ಲಿ ಹಿಂಬಾಲಿಸುವ ಹುಡುಗರು ಅಶ್ಲೀಲ ಪದ ಬಳಕೆ ಮಾಡಿ ಮಾತನಾಡುವುದಲ್ಲದೇ ಓಡಾಡುವುದಕ್ಕೆ ಹಿಂಜರಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಯುವತಿಯರು ಬೇಸರ ವ್ಯಕ್ತ ಪಡಿಸಿದ್ದಾರೆ. ಇವರ ಅಹವಾಲು ಸ್ವೀಕರಿಸಿದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.