BTS2020: ಟೊಮ್ಯಾಟೊ ಚೆಲ್ಲುವುದು ತಪ್ಪಲಿದೆ, ಸೋಯಾ ತೈಲದಂಶ ಹೆಚ್ಚಲಿದೆ!
ಬೆಂಗಳೂರು, ನ. 21: ತರಕಾರಿ, ಹಣ್ಣು, ಭತ್ತ, ಗೋಧಿಯಂತಹ ಬೆಳೆಗಳ ವಂಶವಾಹಿ ಪರಿವರ್ತನೆ ಇಂದು ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಮುಂದಿನ ದಿನಗಳಲ್ಲಿ ಅದು ರೈತರಿಗೆ ವರವಾಗಿ ಪರಿಣಮಿಸಲಿದೆ ಎಂದು ಆಹಾರ ಭದ್ರತೆ, ಜೈವಿಕ ತಂತ್ರಜ್ಞಾನದ ತಜ್ಞ ಹಾಗೂ ಸಂಶೋಧಕ ಡಾ. ಚನ್ನಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಟಿಎಸ್-2020 ಟೆಕ್ ಶೃಂಗಸಭೆಯಲ್ಲಿ ಶುಕ್ರವಾರ ಔಷಧಗಳಾಗಿ ಆಹಾರ ಮತ್ತು ಪೌಷ್ಟಿಕಾಂಶ ಕುರಿತ ಸಂವಾದದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
BTS2020: ಗ್ರಾಮೀಣ ಐಟಿ ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ; ಫೈನಲ್ಗೆ ಕನ್ನಡಿಗ!
ಬೆಳೆಗಳ ವಂಶವಾಹಿಯಲ್ಲಿ ಪರಿವರ್ತನೆ ಮಾಡುವುದರಿಂದ ರೈತರಿಗೆ ಹಲವಾರು ಲಾಭಗಳಿವೆ. ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಇದಕ್ಕೆ ಅನುಮತಿ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ನಿಬಂಧನೆಗಳನ್ನು ಹೇರುವ ಸಂದರ್ಭದಲ್ಲಿ ಎಚ್ಚರಿಕೆಯ ನಿಲುವು ತಳೆಯಬೇಕು ಎಂದು ಸಲಹೆ ನೀಡಿದರು.
ಟೊಮೆಟೊದಲ್ಲಿ ವಂಶವಾಹಿಯಲ್ಲಿ ಪರಿವರ್ತನೆ
ಟೊಮೆಟೊದಲ್ಲಿ ಕ್ರಿಸ್ಪರ್ ವಂಶವಾಹಿಯಲ್ಲಿ ಪರಿವರ್ತನೆ ಮಾಡುವುದರಿಂದ ಅದು ಮಾಗುವ ಅಥವಾ ಹಣ್ಣಾಗಲು ತಗಲುವ ಅವಧಿ ಹೆಚ್ಚಾಗುತ್ತಾ ಹೋಗುತ್ತದೆ. ಅದರ ಕಾಪಿಡುವ ಅವಧಿ ಕೂಡ ಹೆಚ್ಚುತ್ತದೆ. ಇದರಿಂದಾಗಿ ಟೊಮೆಟೊ ಬೆಳೆಗಾರರು ತಮ್ಮ ಬೆಳೆಗಳನ್ನು ಹೆಚ್ಚು ಕಾಲ ಕಾಯ್ದಿಡಬಹುದು. ಅದನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು, ಬೆಲೆಯೇ ಸಿಗಲಿಲ್ಲ ಎಂದು ಬೀದಿ ಬದಿಯಲ್ಲಿ ಚೆಲ್ಲುವ ಪರಿಸ್ಥಿತಿ ತಪ್ಪುತ್ತದೆ. ನಾವು ಬೆಳೆದ ಪಸಲಿಗೆ ಉತ್ತಮ ಬೆಲೆ ದೊರೆಯಲು ಸಾಧ್ಯವಾಗುತ್ತದೆ.
ಇದು ಟೊಮೆಟೊದಲ್ಲಿ ಮಾತ್ರವಲ್ಲ ಇತರ ತರಕಾರಿಗಳು, ಹಣ್ಣುಗಳು, ಗೋಧಿ, ಭತ್ತದಲ್ಲಿಯೂ ಸಾಧ್ಯವಿದೆ ಎಂಬುದನ್ನು ತಳಿ ವಿಜ್ಞಾನ ಸಾಬೀತು ಮಾಡಿ ತೋರಿಸಿದೆ. ಇದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಅತಿ ಮುಖ್ಯ. ಟೊಮೆಟೊದಲ್ಲಿನ ಲಿಕೊಪಿನ್ ಅಂಶವನ್ನು ಹೆಚ್ಚು ಮಾಡುವುದರಿಂದ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ಗೆ ಕಡಿವಾಣ ಹಾಕಬಹುದು ಎಂದು ಅವರು ತಿಳಿಸಿದರು.
ಬರಗಾಲದಲ್ಲಿ ಸೋಯಾ ಬೆಳೆ
ಸೋಯಾಬೀನ್ನ್ನು ಹೆಚ್ಚು ತೈಲದ ಅಂಶವಿರುವಂತೆ ವಂಶವಾಹಿ ಪರಿವರ್ತನೆ ಮಾಡಬಹುದು. ಜೊತೆ ಅದು ಬರಗಾಲದಂತಹ ಪರಿಸ್ಥಿತಿಯಲ್ಲಿಯೂ ಬೆಳೆಯಲು ಸಾಧ್ಯವಾಗುತ್ತದೆ. ನಾವು ಬೆಳೆಯುವ ಭತ್ತವನ್ನು ರೋಗ ಪ್ರತಿಬಂಧಕವಾಗಿ ಪರಿವರ್ತಿಸಲು ಹಾಗೂ ಮಧುಮೇಹ ಸ್ನೇಹಿ ಅಕ್ಕಿಯನ್ನು ಬಳಸುವಂತೆ ಮಾಡಲು ಸಾಧ್ಯವಾಗಿದೆ.
ಅಕ್ಕಿಯ ಗಾತ್ರವನ್ನು ಹೆಚ್ಚು ಅಥವಾ ಕಡಿಮೆ ಮಾಡಲೂ ಇದರಿಂದ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಹುವಂಶವಾಹಿಗಳನ್ನು ಅಳವಡಿಸುವ ಹಾಗೂ ಪರಿವರ್ತಿಸುವ ಪ್ರಯೋಗಗಳು ನಡೆಯುತ್ತಲೇ ಇವೆ. ಇವನ್ನು ನಾವು ನಮ್ಮ ಆರೋಗ್ಯ, ಪೌಷ್ಟಿಕಾಂಶದ ದೃಷ್ಟಿಯಿಂದ ನೋಡಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ ಎಂದು ಡಾ. ಚನ್ನಪ್ರಕಾಶ್ ಮನವರಿಕೆ ಮಾಡಿದರು.
ವಂಶವಾಹಿ ಮಾರ್ಪಾಡು ಹೊಸದಲ್ಲ
ಬೆಳೆಗಳಲ್ಲಿನ ವಂಶವಾಹಿಯಲ್ಲಿ ಮಾಡುವ ಮಾರ್ಪಾಡುಗಳು ಹೊಸದೇನೂ ಅಲ್ಲ. ಮನುಷ್ಯ ಗುಹೆಗಳನ್ನು ದಾಟಿ ಒಂದು ನಾಗರಿಕ ಸಮಾಜದಲ್ಲಿ ಜೀವನ ನಡೆಸುವ ದಿನದಿಂದಲೂ ನಡೆಯುತ್ತಲೇ ಬಂದಿದೆ. ನೂರಾರು ವರ್ಷಗಳ ಇತಿಹಾಸ ಇದಕ್ಕಿದೆ. ಈ ತನಕ ಅನೇಕ ತಂತ್ರಜ್ಞಾನ, ವಿಜ್ಞಾನ ಬೆಳೆದು ಬಂದಿದೆ. ಭಾರತದಲ್ಲಿ ಯಶಸ್ವಿಯಾಗಿರುವ ಬಿಟಿ ಹತ್ತಿ ಇದಕ್ಕೊಂದು ಸಾಕ್ಷಿ. ಉಳಿದೆಲ್ಲ ಸಾಂಪ್ರದಾಯಿಕ ಪದ್ಧತಿಗಳಿಗಿಂತ ಇದು ಸುಲಭ.
Recommended Video
ಆಹಾರವೇ ನಮಗೆ ಔಷಧವಾಗಬೇಕು
ಮತ್ತೊಬ್ಬ ಪೌಷ್ಟಿಕ ಆಹಾರ ತಜ್ಞ ಡಾ. ಶಶಿಕರಣ್ ಮಾತನಾಡಿ, ನಾವು ತಿನ್ನುವ ಆಹಾರವೇ ನಮಗೆ ಔಷಧವಾಗಬೇಕು. ಪೌಷ್ಟಿಕ ಆಹಾರ ಎನ್ನುವುದು ಕೆಲವೇ ಕೆಲವರಿಗಷ್ಟೇ ದಕ್ಕುವಂತೆ ಮಾಡುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟಕುವಂತಿರಬೇಕು. ಅದು ಈ ಸಮಾಜದ ಕರ್ತವ್ಯ ಕೂಡ ಹೌದು. ಇಂತಹ ಪರಿಕಲ್ಪನೆಯಲ್ಲಿ ನಮ್ಮ ನೀತಿಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಶಕ್ತಿವರ್ಧಕ ಆಹಾರಗಳನ್ನು ನೀಡುವ ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಪೌಷ್ಟಿಕಾಂಶದಿಂದ ಕೂಡಿದ ಆಹಾರವನ್ನು ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡುವುದು ಈಗಿನ ದಿನಮಾನಗಳಲ್ಲಿ ಮುಖ್ಯ. ಆದರೆ ಇದರ ಅಗತ್ಯ ಕೆಲವರಿಗೆ ಹೆಚ್ಚಾಗಿದ್ದರೆ ಕೆಲವರಿಗೆ ಕಡಿಮೆ ಇರುತ್ತದೆ. ಆ ಬಗ್ಗೆ ನಾವು ಯೋಚನೆ ಮಾಡಬೇಕು ಎಂದು ತಿಳಿಸಿದರು.