ಗೌಡರ ತಂತ್ರಗಾರಿಕೆ, ಗೀತಾ ಶಿವರಾಜ್ ಕುಮಾರ್ ಕಣಕ್ಕೆ?
ಬೆಂಗಳೂರು, ಸೆ.26: ಇತ್ತೀಚೆಗಷ್ಟೇ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಸೋಲು ಅನುಭವಿಸಿದ ಮೇಲೆ ಮತ್ತೆ ಜೆಡಿಎಸ್ ನಲ್ಲಿ ಹೊಸ ಹುರುಪು ತರಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸರ್ವಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಜೆಡಿಎಸ್ ಯುವ ಘಟಕಕ್ಕೆ ಅನಿರೀಕ್ಷಿತವಾಗಿ ಮಧು ಬಂಗಾರಪ್ಪರನ್ನು ತಂದು ಕೂರಿಸಿದ ದೇವೇಗೌಡ ಅವರು ಈಗ ಮಧು ಸೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆದಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಡಾ.ರಾಜ್ ಕುಟುಂಬದ ಸೊಸೆ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿದೆ, ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಂಬಂಧ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಮೊದಲಿನಿಂದಲೂ ರಾಜಕೀಯದಿಂದ ದೂರವುಳಿದಿರುವ ರಾಜ್ ಕುಟುಂಬ ಈಗ ಸೊಸೆ ರಾಜಕೀಯ ಪ್ರವೇಶಕ್ಕೆ ಅಸ್ತು ಎನ್ನುವುದೇ ಎಂಬ ಕುತೂಹಲದ ಪ್ರಶ್ನೆ ಮನೆ ಮಾಡಿದೆ.
ಡಾ.ರಾಜ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿ ರಾಜಕೀಯ ಪಕ್ಷಗಳು ಸೋತಿತ್ತು ಎಂಬುದನ್ನು ಮರೆಯುವಂತಿಲ್ಲ. ಬಂಗಾರಪ್ಪ ಅವರ ನಂಟಿದ್ದರೂ ರಾಜಕೀಯವನ್ನು ಎಂದಿಗೂ ರಾಜ್ ಕುಟುಂಬ ಹೊದ್ದು ಮಲಗಿರಲಿಲ್ಲ.
ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿನ ಚಿತ್ರರಂಗದ ದಿಗ್ಗಜರು ರಾಜಕೀಯಕ್ಕೆ ಪ್ರವೇಶಿಸುತ್ತಿರುವಾಗ ಇಲ್ಲಿ ಮಾತ್ರ ಏಕೆ ಹೀಗೆ? ಅದರಲ್ಲೂ ರಾಜ್ ಕುಟುಂಬ ಯಾಕೆ ಸಕ್ರಿಯವಾಗಿ ರಾಜಕೀಯದಿಂದ ದೂರ ಉಳಿದಿದೆ ಎಂಬ ಪ್ರಶ್ನೆ ಎದ್ದಿದೆ. ಈ ನಡುವೆ ಪತ್ನಿ ಗೀತಾ ಅವರ ರಾಜಕೀಯ ಪ್ರವೇಶಕ್ಕೆ ಶಿವರಾಜ್ ಒಪ್ಪುವರೇ ಎಂಬುದನ್ನು ಕಾದು ನೋಡಬೇಕಿದೆ...
ಮಧುಗೆ ಜವಾಬ್ದಾರಿ
ಮಾಜಿ ಮುಖ್ಯಮಂತ್ರಿ ಎಸ್ .ಬಂಗಾರಪ್ಪ ಪತ್ನಿ ಶಕುಂತಲಾ ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿತ್ತು. ಆದರೆ, ಶಕುಂತಲಾ ಬಂಗಾರಪ್ಪ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಪುತ್ರ ಮಧು ಹೇಳಿದ್ದಾರೆ.
ಗೀತಾ ಮತ್ತು ಪತಿ ಶಿವರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನೂ ಪಕ್ಷದ ನಾಯಕರು ಮಧುಗೆ ವಹಿಸಿದ್ದಾರೆ
ಯಾವ ಕ್ಷೇತ್ರ ಸುರಕ್ಷಿತ
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮೂವರು ಜೆಡಿಎಸ್ ಶಾಸಕರಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಮತ್ತು ತೀರ್ಥಹಳ್ಳಿಯಲ್ಲೂ ಹೆಚ್ಚಿನ ಮತ ಪಡೆದಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಬಗ್ಗೆ ಇಂದಿಗೂ ಕ್ಷೇತ್ರಾದ್ಯಂತ ಅಭಿಮಾನ ಹೊಂದಿದ್ದಾರೆ ಹೀಗಾಗಿ ಅವರ ಪುತ್ರಿ ಗೀತಾ ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದು ದೇವೇಗೌಡರ ಲೆಕ್ಕಾಚಾರ.
ಇತ್ತೀಚೆಗೆ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿ ಬಂದ ದೇವೇಗೌಡರು, ಶಿವಮೊಗ್ಗ ಜಿಲ್ಲೆ ಜತೆಗೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲೂ ಜೆಡಿಎಸ್ ಗೆ ಅನುಕೂಲಕರ ವಾತಾವರಣ ಇರುವುದನ್ನು ಗಮನಿಸಿದ್ದಾರೆ. ಈಡಿಗ ಸಮುದಾಯ, ಅಲ್ಪಸಂಖ್ಯಾತರ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸವಿದೆ.
ಉತ್ತರ ಕನ್ನಡದಲ್ಲಿ
ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ ಅಥವಾ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ ಹೆಗಡೆ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ.
ಜತೆಗೆ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಹಾಗೂ ಕಾರವಾರ ಎರಡೂ ಕ್ಷೇತ್ರಗಳ ಉಸ್ತುವಾರಿ ವಹಿಸಲು ನಿರ್ಧರಿಸಲಾಗಿದೆ. ಮಧು ಅವರಿಗೆ ವಿಧಾನಸಭೆಯ ಮುಖ್ಯ ಸಚೇತಕ ಹುದ್ದೆ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
|
ಅಭಿಮಾನಿಗಳ ಅಭಿಮತ
ಗೀತಾ ಶಿವರಾಜ್ ಕುಮಾರ್ ಅವರು ಕಣಕ್ಕಿಳಿಯುವ ಬಗ್ಗೆ ಅಭಿಮಾನಿಗಳು ಕೂಡಾ ಕುತೂಹಲಕಾರಿಯಾಗಿದ್ದಾರೆ. ಆದರೆ, ಶಿವಣ್ಣನ ಅಭಿಮಾನಿಗಳು ಮನಸಾರೆ ಒಪ್ಪಿಗೆ ಸೂಚಿಸುವ ಧೈರ್ಯ ತೋರಿಲ್ಲ. ಗೀತಾ ಅವರು ಧೈರ್ಯ ಮಾಡಿ ನಿಲ್ಲುವ ಸಾಧ್ಯತೆ ಕಮ್ಮಿ ಎಂದೇ ಹೇಳಲಾಗುತ್ತಿದೆ
ಗೀತಾ ಚಿತ್ತ ಎತ್ತ?
ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಜೆ ಎಚ್ ಪಟೇಲ್ ರಂತೆ ವರ್ಣಮಯ ವ್ಯಕ್ತಿತ್ವ ಹಾಗೂ ಭಾಷಾ ಪ್ರೌಢಿಮೆ ಹೊಂದಿದ್ದ ದಿವಂಗತ ಸಾರೆಕೊಪ್ಪ ಬಂಗಾರಪ್ಪ ಅವರು ತಮ್ಮ ಪುತ್ರಿ ಗೀತಾ ಅವರಿಗೂ ಸಮಾಜಮುಖಿ ಚಿಂತನೆಯನ್ನು ತುಂಬಿದ್ದಾರೆ.
ಸುಮಾರು 31 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಕೊನೆಗಾಲದಲ್ಲಿ ಅವರಿಗೆ ರಾಜಕೀಯವಾಗಿ ಪುತ್ರ ವಸಂತ್ ಕುಮಾರ್(ಕುಮಾರ್ ಬಂಗಾರಪ್ಪ) ವೈರಿಯಾಗಿದ್ದು ಸಹಿಸಲು ಆಗದಂಥ ನೋವುಂಟು ಮಾಡಿತ್ತು. ಇನ್ನೊಬ್ಬ ಪುತ್ರ ಮಧುವನ್ನು ರಾಜಕೀಯವಾಗಿ ಮೇಲಕ್ಕೆ ತರಲು ಇನ್ನಿಲ್ಲದ್ದಂತೆ ಯತ್ನಿಸಿ ಸೋತಿದ್ದರು.ಈ ಎಲ್ಲಾ ರಾಜಕೀಯದಿಂದ ನೋವು ನಲಿವು ಹತ್ತಿರದಿಂದ ಕಂಡಿರುವ ಗೀತಾ ಅವರು ಕಣಕ್ಕಿಳಿಯುವರೇ ಎಂಬ ಪ್ರಶ್ನೆ ಇದ್ದೇ ಇದೆ.