ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮೇಲೆ ಗಂಭೀರ ಆರೋಪ ಮಾಡಿದ ಕಾಂಗ್ರೆಸ್!
ಬೆಂಗಳೂರು, ಜ. 19: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಿಂದ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಇದೀಗ ಎದುರಾಗಿದೆ. ಕಳೆದ ಜನವರಿ 16ರಂದು ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್ನಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಅಡಿಪಾಯ ಹಾಕಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ್ದರು. ಆ ಕಾರ್ಯಕ್ರಮವೀಗ ವಿವಾದಕ್ಕೆ ಕಾರಣವಾಗಿದೆ. ಕುವೆಂಪು ಅವರಿಗೆ ಬಿಜೆಪಿ ಅವಮಾನ ಮಾಡಿದೆ ಎಂಬ ಆರೋಪ ಎದುರಾಗಿದೆ.
ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಕಳೆದ ಎರಡು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಂದು ವಿವಾದವನ್ನು ಬಿಜೆಪಿ ಮೈಮೇಲೆ ಎಳೆದುಕೊಂಡಂತಾಗಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕುವೆಂಪು ಅವರ ತವರು ಜಿಲ್ಲೆಯಲ್ಲಿ ಕನ್ನಡಕ್ಕೆ ಅಪಮಾನವಾಗಿದೆ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರಣ ಎಂದು ಆರೋಪಿಸಲಾಗಿದೆ. ಆ ಘಟನೆ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಿಎಂ ಯಡಿಯೂರಪ್ಪಗೆ ಪತ್ರ
ಗೃಹ ಸಚಿವ ಅಮಿತ್ ಶಾ ಅವರು ಇತರ ರಾಜ್ಯಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಪ್ರಾದೇಶಿಕ ಭಾಷೆಗೆ ಮಹತ್ವ ಕೊಡಲಾಗಿರುತ್ತದೆ. ಸ್ವಾಗತ ಕೋರುವ ಫಲಕಗಳು, ಫ್ಲೆಕ್ಸ್ ಹಾಗೂ ಹೊರ್ಡಿಂಗ್ಗಳನ್ನು ಸ್ಥಳೀಯ ಭಾಷೆಯಲ್ಲಿಯೇ ಹಾಕುತ್ತಾರೆ. ಆದರೆ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟಿರುವ ಕುವೆಂಪು ಅವರ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ಕೊಟ್ಟಾಗ ರಾಜ್ಯ ಪಾಲಿಸುತ್ತಿರುವ ತ್ರಿಭಾಷಾ ಸೂತ್ರಕ್ಕೆ ತೀಲಾಂಜಲಿ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಕನ್ನಡಿಗರ ಸ್ವಾಭಿಮಾನ ಕೆಣಕಿದ ಶಾ
ಶಿವಮೊಗ್ಗದಲ್ಲಿ ನಡೆದಿದ್ದು ಸರ್ಕಾರಿ ಕಾರ್ಯಕ್ರಮ ಎಂಬುದನ್ನು ಮರೆತು ಒಂದು ರಾಜಕೀಯ ಪಕ್ಷದ ಖಾಸಗಿ ಕಾರ್ಯಕ್ರಮದಂತೆ ಸ್ಥಳೀಯ ಬಿಜೆಪಿ ನಾಯಕರು ನಡೆದು ಕೊಂಡಿದ್ದಾರೆ. ಕೇಂದ್ರ ಬಿಜೆಪಿ ನಾಯಕರನ್ನು ಮೆಚ್ಚಿಸಲು ಕನ್ನಡವನ್ನು ಕಡೆಗಣಿಸಿ, ಕೇವಲ ಹಿಂದಿ ಭಾಷೆಯ ಫಲಕಗಳನ್ನು ಮೆರೆಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದೀರಿ. ಈಗಾಗಲೇ ಎಷ್ಟೋ ವಿಚಾರಗಳಾದ ನಾಡು, ನುಡಿ, ಗಡಿ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರರ ಪರ ಸದ್ಯದ ಬಿಜೆಪಿ ಸರ್ಕಾರ ನಿಲ್ಲದೆ ಇರುವುದು ದುರ್ದೈವದ ಸಂಗತಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಚಂದ್ರಶೇಖರ್ ಅವರು ಉಲ್ಲೇಖಿಸಿದ್ದಾರೆ.
ನೀವೇನು ಆನೆಯಲ್ಲ!
ಪ್ರಜಾಪ್ರಭುತ್ವದಲ್ಲಿ ಆನೆ ನಡೆದದ್ದೇ ದಾರಿ ಎಂಬ ಧೋರಣೆ ಸಲ್ಲದು. ಹೀಗಾಗಿ ಆ ಪ್ರಮಾದಕ್ಕೆ ಕಾರಣೀಭೂತರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. ಹಾಗು ತಮ್ಮ ಸರ್ಕಾರ ಅಧಿಕಾರ ನಡೆಸುತ್ತಿರುವುದು ಪ್ರಜ್ಞಾವಂತ, ಸ್ವಾಭಿಮಾನಿ ಕನ್ನಡ ಮತಬಾಂಧವರಿಂದಲೇ ಎಂಬುದನ್ನು ಮರೆಯಬಾರದು. ಈಗಾಗಲೇ ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿಚಾರ ವಿಕೋಪಕ್ಕೆ ಹೋಗುತ್ತಿದ್ದು, ಇದು ಗಾಯದ ಮೇಲೆ ಬರೆ ಎಳೆದಂತೆ ಆಗುವುದಿಲ್ಲವೇ? ಎಂದು ಸಿಎಂ ಯಡಿಯೂರಪ್ಪ ಅವರನ್ನು ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.
Recommended Video
ಹಿಂದಿ ಭಾಷಿಕರ ಸರ್ಕಾರವಲ್ಲ
ಇದು 7.5 ಕೋಟಿ ಕನ್ನಡಿಗರ ಸರ್ಕಾರವೇ ಹೊರತು ಹಿಂದಿ ಭಾಷಿಗರ ಸರ್ಕಾರವಲ್ಲ. ಆದುದರಿಂದ ನಾಡು, ನುಡಿ, ಗಡಿಯನ್ನು ಕಾಪಾಡಬೇಕಾದ ಸರ್ಕಾರಗಳೇ ಈ ರೀತಿ ವರ್ತಿಸುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯ ನಡೆಯದಂತೆ ಕನ್ನಡಿಗರ ಹಿತ ಕಾಯಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.