ಗೌರಿ ಲಂಕೇಶ್ ಹತ್ಯೆ : ಎಸ್ಐಟಿ ಅಧಿಕಾರಿಗಳು ಸ್ವ ಸ್ಥಾನಕ್ಕೆ ವಾಪಸ್!
ಬೆಂಗಳೂರು, ಅಕ್ಟೋಬರ್ 22 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದಲ್ಲಿರುವ ಅಧಿಕಾರಿಗಳಿಗೆ ಸ್ವ ಸ್ಥಾನಕ್ಕೆ ಮರಳಲು ಸೂಚನೆ ನೀಡಲಾಗಿದೆ. ಸೆ.5ರಂದು ಬೆಂಗಳೂರಿನ ಆರ್.ಆರ್.ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಹತ್ಯೆ ಮಾಡಲಾಗಿತ್ತು.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈಗಾಗಲೇ ಹಂತಕರ ಶಂಕಿತ ರೇಖಾಚಿತ್ರವನ್ನು ಬಿಡುಗಡೆ ಮಾಡಿದೆ. ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಸೆ.6ರಿಂದ ಎಸ್ಐಟಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದೆ. 100ಕ್ಕೂ ಹೆಚ್ಚು ಅಧಿಕಾರಿಗಳು ಎಸ್ಐಟಿ ತಂಡದಲ್ಲಿದ್ದಾರೆ.
ಗೌರಿ ಲಂಕೇಶ್ ಹಂತಕನ ಮೊತ್ತಮೊದಲ ಚಿತ್ರ ಬಿಡುಗಡೆ
ಅಕ್ಟೋಬರ್ 19ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಎಸ್ಐಟಿ ತಂಡದಲ್ಲಿರುವ ಅಧಿಕಾರಿಗಳು ಸ್ವಸ್ಥಾನಕ್ಕೆ ಮರಳಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ, ತನಿಖೆಯನ್ನು ತಂಡ ಸ್ಥಗಿತಗೊಳಿಸಿಲ್ಲ.
ಗೌರಿ ಲಂಕೇಶ್ ಶಂಕಿತ ಹಂತಕನ ರೇಖಾಚಿತ್ರದಲ್ಲಿ 'ತಿಲಕ': SIT ಸ್ಪಷ್ಟನೆ
ಮೊದಲು ಬಿ.ಕೆ.ಸಿಂಗ್ ನೇತೃತ್ವದಲ್ಲಿ 21 ಸದಸ್ಯರ ಎಸ್ಐಟಿ ತಂಡ ರಚನೆಯಾಗಿತ್ತು. ನಂತರ 40 ಸದಸ್ಯರನ್ನು ತಂಡಕ್ಕೆ ಸೇರಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಲಾಯಿತು. ನಂತರ ಹಿರಿಯ ಮತ್ತು ಸಹಾಯಕ ಅಧಿಕಾರಿಗಳು ಸೇರಿ 61 ಸದಸ್ಯರು ಎಸ್ಐಟಿ ತಂಡ ಸೇರಿದರು.
ಗೌರಿ ಲಂಕೇಶ್ ಹತ್ಯೆ: ಸನಾತನ ಸಂಸ್ಥೆಯ ಐವರ ವಿಚಾರಣೆ
ಹುಬ್ಬಳ್ಳಿ, ಬೆಳಗಾವಿ, ವಿಜಯಪುರದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಅಧಿಕಾರಿಗಳು ತಮ್ಮ ಕೆಲಸಕ್ಕೆ ರಜೆ ಹಾಕಿ ಎಸ್ಐಟಿ ಸೇರಿದ್ದರು. ಈ ಅಧಿಕಾರಿಗಳು ಹಲವು ಪ್ರಕರಣಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿದೆ. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಬೇಕಿದೆ.
ತನಿಖೆ ನಿಂತು ಹೋಗಿಲ್ಲ : 'ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆಯನ್ನು ಎಸ್ಐಟಿ ಕೈ ಬಿಟ್ಟಿಲ್ಲ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.