ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್
ಬೆಂಗಳೂರು, ಜೂನ್ 15: ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಘ್ಮೋರೆ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಐಟಿ ಹೇಳಿದೆ. ಅಲ್ಲದೆ ಕೊಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆತನೇ ನೀಡುತ್ತಿದ್ದಾನೆ.
ನಿನ್ನೆ (ಜೂನ್ 15) ಆತ ಉಳಿದುಕೊಂಡಿದ್ದ ಜಾಗ, ಕರೆ ಮಾಡಿದ ಕಾಯಿನ್ ಬೂತ್, ಗೌರಿ ಲಂಕೇಶ್ ಮನೆ, ಬೈಕಿನಲ್ಲಿ ತಪ್ಪಿಸಿಕೊಂಡ ಜಾಗ ಎಲ್ಲವನ್ನೂ ತೋರಿಸಿದ್ದಾನೆ. ಪೊಲೀಸರು ಸಹ ಮಹಜರು ಮಾಡಿಕೊಂಡಿದ್ದಾರೆ.
ಗೌರಿ ಹತ್ಯೆ ಆರೋಪಿ ಪರಶುರಾಮ್ ತಪ್ಪೊಪ್ಪಿಕೊಂಡಿದ್ದಾನೆ: ಎಸ್ಐಟಿ
ಗೌರಿ ಲಂಕೇಶ್ ಅನ್ನು ಹತ್ಯೆ ಮಾಡಲು ಹೇಗೆ ತಯಾರಾದೆ, ಅವರನ್ನು ಹತ್ಯೆ ಮಾಡಬೇಕು ಅನಿಸಿದ್ದು ಏಕು, ತಾನು ಗೌರಿಯನ್ನು ಹೇಗೆ ಹತ್ಯೆ ಮಾಡಿದೆ ಎಂಬ ಬಗ್ಗೆ ಪರಶುರಾಮ್ ಪೂರ್ಣ ಮಾಹಿತಿಯನ್ನು ಎಸ್ಐಟಿ ತಂಡಕ್ಕೆ ನೀಡಿದ್ದಾನೆ.
ಬ್ರೇನ್ ವಾಷ್ ಮಾಡಿದ್ದರು ಅವರು
ಹಿಂದೂ ಧರ್ಮವನ್ನು ಪ್ರೀತಿಸುತ್ತೀಯಾ ಹಾಗಾಗಿ ನಿನಗೆ ದೇವರೇ ಈ ಅವಕಾಶ ಕೊಟ್ಟಿದ್ದಾರೆ ಇದನ್ನು ಸದುಪಯೋಗ ಪಡಿಸಿಕೊ. ನಿನ್ನ ಧರ್ಮದ ವಿರುದ್ಧ ಮಾತನಾಡುವವರನ್ನು ಬಿಡಬೇಡ. ನೀನು ಕಾರ್ಯ ಮಾಡಲು ತಯಾರಾದರೆ ನಾನು ನಿನ್ನನ್ನು ಸಜ್ಜುಗೊಳಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಪರಶುರಾಮ್ ವಾಗ್ಮೋರೆಗೆ ಬ್ರೇನ್ ವಾಷ್ ಮಾಡಿದ್ದನಂತೆ. ಆದರೆ ಆತನ ಬಗ್ಗೆ ಪರಶುರಾಮ್ಗೆ ಮಾಹಿತಿ ಇಲ್ಲ, ನೋಡಿದರೆ ಗುರುತು ಹಿಡಿಯುತ್ತೇನೆ ಎಂದಿದ್ದಾನೆ. ಆ ವ್ಯಕ್ತಿ 2017 ರ ಆಗಸ್ಟ್ನಲ್ಲಿ ಪರಶುರಾಮ್ನನ್ನು ಭೇಟಿ ಆಗಿದ್ದ.
ಗೌರಿಯನ್ನು ಹತ್ಯೆ ಮಾಡಬೇಕೆನಿಸಿದ್ದು ಏಕೆ
ಗೌರಿ ಹತ್ಯೆಯ ಡೀಲ್ ಬಂದಾಗ ಮೊದಲಿಗೆ ಆಕೆಯ ಭಾಷಣದ ವಿಡಿಯೋಗಳನ್ನು ಯುಟ್ಯೂಬ್ನಲ್ಲಿ ನೋಡಿದ್ದಾನೆ ಪರಶುರಾಮ್. ಆಕೆಯ ಮಾತುಗಳಿಂದ ನನ್ನ ರಕ್ತ ಕುದಿಯಿತು. ಆಕೆಯನ್ನು ಕೊಂದೇ ಸಿದ್ಧ ಎನಿಸಿತು. ನಾನು ಆತನಿಗೆ ನಾನು ಗೌರಿಯನ್ನು ಕೊಲ್ಲಲು ಸಿದ್ಧನಿದ್ದೇನೆ ತರಬೇತಿ ಕೊಡು ಎಂದು ಕೇಳಿದ್ದಾಗಿ ಪರಶುರಾಮ್ ಹೇಳಿದ್ದಾನೆ.
ಗೌರಿ ಕೊಲೆ ಪ್ರಕರಣ: ಪರಶುರಾಮ್ ವಾಗ್ಮೋರೆ ಬೆನ್ನತ್ತಿದ ರೋಚಕ ಕಥೆ
ಏರ್ಗನ್ನಿಂದ ತರಬೇತಿ, 500 ಸುತ್ತು ಗುಂಡು
ಗೌರಿಯನ್ನು ಹತ್ಯೆ ಮಾಡುತ್ತೇನೆ ಎಂದಾದ ಮೇಲೆ ಆ ವ್ಯಕ್ತಿಯೇ ನನಗೆ ಗುಂಡು ಹಾರಿಸುವುದನ್ನು ಹೇಳಿಕೊಟ್ಟ. ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ ಏರ್ಗನ್ನಲ್ಲಿ ನನಗೆ ತರಬೇತಿ ಕೊಟ್ಟು. ತರಬೇತಿಯ 20 ದಿನಗಳಲ್ಲಿ ಸುಮಾರು 500 ಸುತ್ತು ಗುಂಡು ಹಾರಿಸಿದೆ ಎಂದಿದ್ದಾನೆ ಪರಶುರಾಮ್.
ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?
ಕಾಯಿನ್ ಬೂತ್ನಲ್ಲಿ ಚರ್ಚೆ
ತರಬೇತಿ ನಂತರ ಆ ವ್ಯಕ್ತಿಯೇ ಕೊಟ್ಟಿದ್ದ ಮೊಬೈಲ್ ಸಂಖ್ಯೆಗೆ ಕಾಯಿನ್ ಬೂತ್ನಿಂದ ಕರೆ ಮಾಡಿದ್ದ ಪರಶುರಾಮ್ ಕೊಲೆಯ ರೂಪುರೇಷೆಗಳನ್ನು ತಿಳಿದುಕೊಂಡ. ಕರೆ ಸ್ವೀಕರಿಸುತ್ತಿದ್ದ ವ್ಯಕ್ತಿಯ ಸೂಚನೆಯಂತೆ ಸೆಪ್ಟೆಂಬರ್ 3ಕ್ಕೆ ಬೆಂಗಳೂರಿಗೆ ತೆರಳಿ ಸುಂಕದಕಟ್ಟೆಯ ಮನೆಯೊಂದರಲ್ಲಿ ಉಳಿದುಕೊಂಡ. ಅದೇ ಮನೆಯಲ್ಲಿ ಸುಜಿತ್ ಅಲಿಯಾಸ್ ಪ್ರವೀಣ್ ಕೂಡಾ ಇದ್ದ.
ಸೆಪ್ಟೆಂಬರ್ 4ರಂದೇ ಗೌರಿಯನ್ನು ಕೊಲ್ಲುವ ಉದ್ದೇಶ
ಸೆಪ್ಟೆಂಬರ್ 4ರಂದೇ ಗೌರಿ ಲಂಕೇಶ್ ಅನ್ನು ಕೊಲ್ಲಲು ಯೋಜನೆ ರೂಪಿಸಲಾಗಿತ್ತು ಆದರೆ ಅಂದು ಗೌರಿ ಲಂಕೇಶ್ ಬೇಗನೆ ಬಂದು ಮನೆಯೊಳ್ಳಕ್ಕೆ ಹೋದ ಕಾರಣ ಅಂದು ಕೊಲೆ ಸಾಧ್ಯವಾಗಿರಲಿಲ್ಲ. ಆದರೆ ಸೆಪ್ಟೆಂಬರ್ 5ರಂದು ಬೇಗನೇ ಬಂದು ಅಲ್ಲೇ ಪಾರ್ಕ್ ಒಂದರಲ್ಲಿ ಅಡಗಿ ಕೂತಿದ್ದ ಹಂತಕರು ಗೌರಿ ಕಾರು ಹಿಂಬಾಲಿಸಿಕೊಂಡು ಬಂದು ಗೌರಿ ಮನೆ ಬಾಗಿಲಲ್ಲೇ ಹತ್ಯೆ ಮಾಡಿದ್ದರು.
ಗೌರಿ ಲಂಕೇಶ್ ಹತ್ಯೆ, ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ವಿಶ್ಲೇಷಣೆ
'ಪಿಸ್ತೂಲಿನಿಂದ ಹೊಡೆಯುವಾಗ ಕೈ ನಡುಗಿತು'
ಏರ್ಗನ್ನಲ್ಲಿ ತರಬೇತಿ ಪಡೆದಿದ್ದ ನನಗೆ ಪಿಸ್ತೂಲಿನಿಂದ ಶೂಟ್ಮಾಡುವಾಗ ಕೈ ನಡುಗಿತು. ಆದರೂ ಕೇವಲ ಎರಡು ಅಡಿ ದೂರದಿಂದಲೇ ಮೂರು ಗುಂಡು ಹಾರಿಸಿದೆ. ಹಿಂದಕ್ಕೆ ಬಂದು ಮತ್ತೊಂದು ಗುಂಡು ಹಾರಿಸಿದೆ ಅದು ಗೋಡೆಗೆ ಬಿತ್ತು. 5-6 ಸೆಕೆಂಡ್ನಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದು ಪರಶುರಾಮ್ ಎಸ್ಐಟಿ ಹೇಳಿಕೊಂಡಿದ್ದಾನೆ.
ತಪ್ಪಿಸಿಕೊಂಡಿದ್ದು ಹೇಗೆ?
ಗುಂಡು ಹೊಡೆದ ಕೂಡಲೇ ನನ್ನ ಬಳಿ ಇದ್ದ ಬಂದೂಕು ನಾನು ತೊಟ್ಟಿದ್ದ ಜಾಕೆಟ್ ಅನ್ನು ಬೈಕ್ ಚಲಾಯಿಸುತ್ತಿದ್ದಾತ ತೆಗೆದುಕೊಂಡ ಹೋದ. ಹೋಗುವ ಮುನ್ನಾ 'ಗುಡ್ ಜಾಬ್, ನೀನು ನಮಗಾರಿಗೂ ಕರೆ ಮಾಡಬೇಡ, ಸಮಯ ಬಂದಾಗ ನಾವೇ ನಿನ್ನನ್ನು ಭೇಟಿ ಮಾಡುತ್ತೇವೆ' ಎಂದು ಹೇಳಿ ಹೊರಟುಹೋದ ಎಂದು ಪರಶುರಾಮ್ ಎಸ್ಐಟಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರ ವೈಫಲ್ಯದ ಬಗ್ಗೆ ನಕ್ಕಿದ್ದ
ನವೀನ್ ಕುಮಾರ್ಗೂ ಪರಶುರಾಮ್ಗೂ ಪರಿಚಯ ಇರಲಿಲ್ಲ. ಗೌರಿ ಲಂಕೇಶ್ ಹತ್ಯೆ ಕೇಸಲ್ಲಿ ಕೆ.ಟಿ.ನವೀನ್ ಕುಮಾರ್ ಬಂಧನವಾದಾಗ ಪೊಲೀಸರು ಹಂತಕನನ್ನು ಬಿಟ್ಟು ಯಾರೋ ಅಮಾಯಕನನ್ನು ಹಿಡಿದುಕೊಂಡಿದ್ದಾರೆ ಎಂದು ಪರಶುರಾಮ್ ಆಡಿಕೊಂಡು ನಕ್ಕಿದ್ದನಂತೆ. ಆದರೆ ಯಾವಾಗ ಸುಜಿತ್ ಅಲಿಯಾಸ್ ಪ್ರವೀಣ್ ಬಂಧನವಾಯ್ತೋ ತನ್ನ ಬಂಧನವೂ ಖಾತ್ರಿ ಆಗಿತ್ತಂತೆ.
ಜೂನ್ 11ರಂದು ಬಂಧನ
ಪರಶುರಾಮ್ನನ್ನು ಮೊದಲಿಗೆ ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ ಎನ್ನಲಾಗಿತ್ತು ಆದರೆ ಎಸ್ಐಟಿ ತಂಡ ಆತನನ್ನು ಆತನ ಮನೆಯಲ್ಲಿಯೇ ಬಂಧಿಸಿದೆ. ಜೂನ್ 11 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಪರಶುರಾಮ್ನನ್ನು ಪೊಲೀಸರು ಬಂಧಿಸಿದ್ದಾರೆ.
126 ಕಾಯಿನ್ಬೂತ್ ಬಳಸಿದ್ದ ಆರೋಪಿ
ಆರೋಪಿ ಪರಶುರಾಮ್ ಒಟ್ಟು 126 ಕಾಯಿನ್ ಬೂತ್ ಬಳಸಿ ಕರೆಗಳನ್ನು ಮಾಡಿದ್ದ. ಎಸ್ಐಟಿ ತಂಡ ಲಕ್ಷಾಂತರ ಕರೆಗಳನ್ನು ಪರಿಶೀಲನೆ ನಡೆಸಿ ಕೊನೆಗೆ ಪರಶುರಾಮ್ ಕರೆ ಮಾಡಿದ್ದ ಎಲ್ಲ ಕಾಯಿನ್ ಬೂತ್ ಹಾಗೂ ಕರೆಗಳ ಮಾಹಿತಿಯನ್ನು ಪಡೆದುಕೊಂಡಿದೆ.
ವಾಗ್ಮೋರೆಯನ್ನು ಗುರುತಿಸಿರುವ ಪ್ರತ್ಯಕ್ಷದರ್ಶಿ
ಗೌರಿ ಲಂಕೇಶ್ ಹತ್ಯೆಗೆ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ಒಬ್ಬ ಕೂಲಿ ಕೆಲಸದವ ಪ್ರತ್ಯಕ್ಷದರ್ಶಿಗಳಿದ್ದಾರೆ. ಅವರಿಬ್ಬರೂ ಪರಶುರಾಮ್ ವಾಘ್ಮೋರೆಯನ್ನು ಗುರುತಿಸಿದ್ದಾರೆ ಎನ್ನಲಾಗಿದೆ.