ಗೌರಿ ಲಂಕೇಶ್ ಹತ್ಯೆ: ಎಸ್ಐಟಿ ನಡೆಸಿದ ತನಿಖೆಯ ಇಂಚಿಂಚು ಮಾಹಿತಿ
ಬೆಂಗಳೂರು, ನವೆಂಬರ್ 26: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಿದ್ದ ಎಸ್ಐಟಿ ಇತ್ತೀಚೆಗಷ್ಟೆ 9360 ಪುಟಗಳ ಬೃಹತ್ ಗಾತ್ರದ ದ್ವಿತೀಯ ಚಾರ್ಜ್ಶೀಟ್ ಸಲ್ಲಿಸಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಯಾವ ಸಿನಿಮಾ ಕತೆಗಳಿಗೂ ಕಡಿಮೆ ಇಲ್ಲದ್ದಷ್ಟು ರೋಚಕವಾಗಿದೆ. ಎಂದು ಸರ್ಕಾರಿ ವಕೀಲರು ಚಾರ್ಜ್ ಶೀಟ್ ಸಲ್ಲಿಸುವ ದಿನದಂದೇ ನ್ಯಾಯಾಲಯಕ್ಕೆ ಹೇಳಿದ್ದರು. ಅದಕ್ಕೆ ತಂಕ್ಕಂತೆ ಎಸ್ಐಟಿ ಗೌರಿ ಹತ್ಯೆ ತನಿಖೆ ಮಾಡಿದ ರೀತಿಯ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಗೌರಿ ಲಂಕೇಶ್ ಹತ್ಯೆ : 6 ಸಾವಿರ ಪುಟದ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ
ಎಸ್ಐಟಿಯು ಗೌರಿ ಹತ್ಯೆ ತನಿಖೆಯನ್ನು ಯಾವ ರೀತಿ ಮಾಡಿತು. ಯಾರ್ಯಾರು ಆರೋಪಿಗಳು, ಆರೋಪಿಗಳನ್ನು ಬಂಧಿಸಿದ ಬಗೆ ಎಲ್ಲದುದರ ಬಗ್ಗೆ ವಿವರ ಮಾಹಿತಿ ಇದೀಗ ಲಭ್ಯವಾಗಿದೆ.
2017 ರ ನವೆಂಬರ್ 05 ರಂದು ರಾತ್ರಿಸುಮಾರು 8:00 ಗಂಟೆಯ ಸಮಯದಲ್ಲಿ ಗೌರಿ ಲಂಕೇಶ್ ಅವರ ನಿವಾಸವಾದ ಬೆಂಗಳೂರು ನಗರ ಐಡಿಯಲ್ ಹೋಮ್ಸ್ನ, 15ನೇ ಕ್ರಾಸ್, ಮನೆ ನಂ.473/ಎ ರಲ್ಲಿ ನಡೆದಿತ್ತು. ಅದೇ ದಿನ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.
ತನಿಖೆಗೆ ಹಲವು ತಂಡ ಮತ್ತು ಉಪತಂಡಗಳು
ಈ ಪ್ರಕರಣದ ತನಿಖೆಯನ್ನು ಕೈಗೊಂಡ ವಿಶೇಷ ತನಿಖಾ ತಂಡ ಪ್ರಕರಣವನ್ನು ಭೇದಿಸುವ ಸಲುವಾಗಿ ಆರಂಭದಲ್ಲಿ ಈ ಕೆಳಕಂಡ 4 ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಡಿವೈಎಸ್ಪಿ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ 4 ಉಪ ತಂಡಗಳನ್ನು ರಚಿಸಲಾಯಿತು. ಆ ನಂತರ ಸಿಸಿಟಿವಿ ವೀಕ್ಷಣೆ, ಮೊಬೈಲ್ ಟವರ್ ಡಂಪಿಂಗ್ ಇನ್ನೂ ಹಲವು ಆಯಾಮಗಳ ತನಿಖೆಗೆಂದು ಹಲವು ಉಪತಂಡಗಳನ್ನು ರಚಿಸಿ ತನಿಖೆ ಮುಂದುವರೆಸಲಾಗಿತ್ತು.
ನಾಲ್ಕು ಆಯಾಮದಲ್ಲಿ ತನಿಖೆ
ಗೌರಿ ಲಂಕೇಶ್ ಅವರ ಕುಟುಂಬ ಅಥವಾ ಸ್ನೇಹಿತ ವಲಯದಲ್ಲಿನ ವೈಯಕ್ತಿಕ ವೈರತ್ವ. ಎಡಪಂಥೀಯ ವಿಚಾರಧಾರೆಯಾದ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಯ ಸಲುವಾಗಿ ಅವರು ಕೈಗೊಂಡ ಕಾರ್ಯಗಳು. ಪತ್ರಕರ್ತರಾಗಿ ಅವgವೃತ್ತಿಯಲ್ಲಿನ ವೈರತ್ವ. ಹಿಂದುತ್ವ ಹಾಗೂ ಬಲಪಂಥಿಯ ವಿಚಾರಧಾರೆಗಳ ಬಗೆಗಿನ ಅವರ ದೃಷ್ಠಿಕೋನ. ಈ ನಾಲ್ಕು ಆಯಾಮದಲ್ಲಿ ಎಸ್ಐಟಿ ತನಿಖೆ ನಡೆಸಿತು. ಇದಲ್ಲದೆ ತಾಂತ್ರಿಕ ವಿಶ್ಲೇಷಣೆ ಹಾಗೂ ಸಿಸಿಟಿವಿ ಪರಿಶೀಲನೆಯ ಸಂಬಂಧ 2 ಪ್ರತ್ಯೇಕ ಉಪ ತಂಡಗಳನ್ನು ರಚಿಸಲಾಯಿತು.
ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?
10000 ಕ್ಕೂ ಹೆಚ್ಚು ಅನುಮಾಸ್ಪದರ ವಿಚಾರಣೆ
ಮೃತೆ ಗೌರಿ ಲಂಕೇಶ್ ರವರ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಗೌರಿ ಲಂಕೇಶ್ ರವರಿಗೆ 4 ಸುತ್ತು ಫೈರ್ ಮಾಡಿ ಹತ್ಯೆ ಮಾಡಿರುವುದು ದೃಢಪಟ್ಟಿರುತ್ತದೆ. ಕೃತ್ಯ ನಡೆದ ಸುಮಾರು 5 ಕಿ.ಮೀ ಸುತ್ತಳತೆಯ ವ್ಯಾಪ್ತಿಯಲ್ಲಿನ ಸಿಸಿ ಟಿವಿ, ಬೆಂಗಳೂರು ನಗರ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಿಂದ ಸುಮಾರು 200 ಟೆರ್ರಾಬೈಟ್ಗಳಷ್ಟು ವಿಡಿಯೋ ಡಾಟಾ ಸಂಗ್ರಹಿಸಿ, ಘಟನಾ ಸ್ಥಳದಲ್ಲಿ ದೊರೆತ ಅನುಮಾನಾಸ್ಪದ ವ್ಯಕ್ತಿ ಮತ್ತು ವಾಹನಗಳ ವಿಡಿಯೋ ಫುಟೆಜ್ಗಳೊಂದಿಗೆ ಹೋಲಿಕೆ ಮಾಡಲಾಯಿತು. ಸುಮಾರು 2500 ಕ್ಕೂ ಅಧಿಕ ವ್ಯಕ್ತಿಗಳನ್ನು ಸುಮಾರು 10000 ಕ್ಕೂ ಹೆಚ್ಚು ಅನುಮಾನಾಸ್ಪದ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ಅವುಗಳ ಮಾಲೀಕರು ಹಾಗೂ ಬಳಕೆದಾರರನ್ನು ವಿಚಾರಣೆಗೊಳಪಡಿಸಲಾಯಿತು. ತಂಡದಲ್ಲಿದ್ದ ತಾಂತ್ರಿಕ ಪರಿಣಿತರಿಂದ, ವಿವಿಧ ಸ್ಥಳಗಳಲ್ಲಿನ ಮೊಬೈಲ್ ಟವರ್ ಡಂಪ್ ಗಳಿಂದ ಸಂಗ್ರಹಿಸಲಾದ ಲಕ್ಷಾಂತರ ಮೊಬೈಲ್ ಕರೆಗಳನ್ನು ವಿಶ್ಲೇಷಿಸಲಾಯಿತು.
ಸಿಕ್ಕಿತು ಮೊದಲ ಸುಳಿವು
ಕೃತ್ಯ ನಡೆದ ಸ್ಥಳದಲ್ಲಿ ವಶಪಡಿಸಿಕೊಳ್ಳಲಾದ ಭೌತಿಕ ಸಾಕ್ಷ್ಯಗಳನ್ನು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಅಭಿಪ್ರಾಯ ವರದಿಯನ್ನು ಪಡೆದಾಗ, ಈ ಹಿಂಧಾರವಾಡದಲ್ಲಿ ನಡೆದ ಪ್ರೊ. ಎಂ.ಎಂ.ಕಲ್ಬುರ್ಗಿರವರ ಹತ್ಯೆಗೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಶ್ರೀ ಗೋವಿಂದ ಪನ್ಸಾರೆ ರವರ ಹತ್ಯೆಗೆ ಉಪಯೋಗಿಸಿದ ನಾಡ ಪಿಸ್ತೂಲ್ ಅನ್ನೇ ಗೌರಿ ಲಂಕೇಶ್ ರವರ ಹತ್ಯೆಗೆ ಬಳಸಿರುವುದು ಖಚಿತಪಟ್ಟಿತ್ತು. ಇದು ವಿಶೇಷ ತನಿಖಾ ತಂಡಕ್ಕೆ ದೊರೆತ ಮೊದಲ ಮಹತ್ವದ ಸುಳಿವಾಗಿತ್ತು. ಆನಂತರ ತನಿಖಾ ತಂಡವು ನಿರ್ದಿಷ್ಟ ಕೋನದಲ್ಲಿ ತನಿಖೆಯನ್ನು ಮುಂದುವರಿಸಿ 16 ಜನರನ್ನು ಬಂಧಿಸಿ ವಿಚಾರಣೆ ನಡೆಸಿತು. ವಿಚಾರಣೆ ಹಂತದಲ್ಲಿ ಎಸ್ಐಟಿಯೇ ಗಾಬರಿ ಪಡುವಂತೆ ಕೊಲೆಯ ರಹಸ್ಯ ತೆರೆದುಕೊಳ್ಳುತ್ತಾ ಹೋಯಿತು.
ಗೌರಿ ಲಂಕೇಶ್ ಹತ್ಯೆಗೆ ವಾಹನ ಒದಗಿಸಿದ್ದ 'ಮೆಕ್ಯಾನಿಕ್' ಬಂಧನ
'ಕ್ಷಾತ್ರಧರ್ಮ ಸಾಧನ' ಪುಸ್ತಕ ಪಾಲಿಸುತ್ತಿದ್ದ ಆರೋಪಿಗಳು
ಕೃತ್ಯಕ್ಕೆ ಸಂಬಂಧಪಟ್ಟ 18 ಜನ ಆರೋಪಿಗಳು ವ್ಯವಸ್ಥಿತ ಅಪರಾಧದ ಸಿಂಡಿಕೇಟ್ನ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಎಸ್ಐಟಿ ಹೇಳಿದೆ. ಈ ಅಪರಾಧಿ ಕೃತ್ಯದ ಸಿಂಡಿಕೇಟ್ ನೇ ಸಾಲಿನಲ್ಲಿ ಡಾ||ವಿರೇಂದ್ರ ತಾವಡೆ @ ಬಡೇಬಾಯಿಸಾಬ್ನ ಮುಂದಾಳತ್ವದಲ್ಲಿ ರಚನೆಯಾಗಿರುತ್ತದೆ. ಸನಾತನ ಪ್ರಭಾತ್ ಪತ್ರಿಕೆಯ ಮಾಜಿ ಸಂಪಾದಕರೊಬ್ಬರು ಈ ವ್ಯವಸ್ಥಿತ ಅಪರಾಧದ ಸಿಂಡಿಕೇಟ್ ಸದಸ್ಯರಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದು, ಈ ಸಿಂಡಿಕೇಟ್ನ ಸದಸ್ಯರುಗಳು ತಮ್ಮ ನಂಬಿಕೆ ಮತ್ತು ಸಿದ್ದಾಂತಗಳಿಗೆ ವಿರುದ್ದವಿರುವ ವ್ಯಕ್ತಿಗಳನ್ನು ಗುರಿಯಾಗಿಸಿರುತ್ತಾರೆ. ಈ ಗುಂಪಿನ ಸದಸ್ಯರು, ಸನಾತನ ಸಂಸ್ಥೆಯು ಪ್ರಕಟಿಸಿರುವ "ಕ್ಷಾತ್ರಧರ್ಮ ಸಾಧನ" ಪುಸ್ತಕದಲ್ಲಿನ ನಿಯಮಗಳನ್ನು ಪರಿಪಾಲಿಸುತ್ತಾರೆ. 2016 ನೇ ವರ್ಷದಲ್ಲಿ ಸಿಬಿಐ ತನಿಖಾ ಸಂಸ್ಥೆಯ ಅಧಿಕಾರಿಗಳು ಮಹಾರಾಷ್ಟ್ರದ ಪ್ರಗತಿಪರ ಚಿಂತಕ ಡಾ|| ನರೇಂದ್ರ ದಾಬೋಲ್ಕರ್ರವರ ಕೊಲೆ ಪ್ರಕರಣದಲ್ಲಿ ಡಾ|| ವಿರೇಂದ್ರ ತಾವಡೆ ರವರನ್ನು ದಸ್ತಗಿರಿಪಡಿಸಿದ ನಂತರ ಈ ಸಿಂಡಿಕೇಟ್ನ ಮುಂದಾಳತ್ವವನ್ನು ಗೌರಿ ಹತ್ಯೆ ಪ್ರಕರಣ ಮೊದಲ ಆರೋಪಿ ಅಮೋಲ್ ಕಾಳೆ ವಹಿಸಿಕೊಂಡಿರುತ್ತಾನೆ.
ಕೊಲೆಯ ಸಂಚಿನ ಆರಂಭ
ಗೌರಿ ಲಂಕೇಶ್ ಅವರು ತಮ್ಮ ಭಾಷಣ ಹಾಗೂ ಬರಹಗಳ ಮೂಲಕ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಆಲಿಸಿದ ಆರೋಪಿಗಳು ತಮ್ಮ "ಕ್ಷಾತ್ರ ಧರ್ಮ ಸಾಧನ' ಪುಸ್ತಕದಲ್ಲಿ ತಿಳಿಸಿರುವಂತೆ, "ಗೌರಿ ಲಂಕೇಶ್ ದುರ್ಜನಳೆಂದು ತೀರ್ಮಾನಿಸಿ 2016ರ ಆಗಸ್ಟ್ ತಿಂಗಳಲ್ಲಿ ಒಟ್ಟುಗೂಡಿ, ಕೊಲೆ ಮಾಡಲು ಒಳಸಂಚು ರೂಪಿಸಿರುತ್ತಾರೆ. ಆ ವೇಳೆಯಲ್ಲಿ ಅಮೋಲ್ ಕಾಳೆಯು 'ದಾದ' ಅಲಿಯಾಸ್ ನಿಹಾಲ್ಗೆ ಗೌರಿ ಲಂಕೇಶ್ ರವರ ಮನೆ ಮತ್ತು ಕಚೇರಿಯ ವಿಳಾಸವನ್ನು ಸಂಗ್ರಹಿಸಲು ಸೂಚಿಸಿರುತ್ತಾನೆ. ಅಮೋಲ್ ಕಾಳೆಯು ಈ ಪ್ರಕರಣದಲ್ಲಿ ವಾಸುದೇವ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿನ್ಗೆ ಈ ಕೃತ್ಯಕ್ಕಾಗಿ ಒಂದು ಬೈಕನ್ನು ಒದಗಿಸಲು ತಿಳಿಸಿದ್ದು, ಸುಜಿತ್ಕುಮಾರನ ಸಹಾಯದೊಂದಿಗೆ ವಾಸುದೇವ ಸೂರ್ಯವಂಶಿಯು ದಾವಣಗೆರೆಯಲ್ಲಿ ಪ್ಯಾಷನ್ ಪ್ರೋ ಬೈಕನ್ನು ಕಳ್ಳತನ ಮಾಡಿ ಅಮೋಲ್ ಕಾಳೆಗೆ ನೀಡಿರುತ್ತಾನೆ. 2017ರ ಜನವರಿಯಲ್ಲಿ ದಾದ @ ನಿಹಾಲನು ಬೆಂಗಳೂರಿನ ಎಚ್.ಎಲ್.ಸುರೇಶನಿಗೆ ಗೌರಿ ಲಂಕೇಶ್ ರವರ ಕಚೇರಿಯ ವಿಳಾಸವನ್ನು ಪತ್ತೆ ಮಾಡಿಕೊಡಲು ಹೇಳಿದ್ದು, ಆ ಪ್ರಕಾರ ಸುರೇಶನು ಅವರ ಕಚೇರಿಯ ವಿಳಾಸವನ್ನು ಪತ್ತೆ ಮಾಡಿ ದಾದ ಅಲಿಯಾಸ್ ನಿಹಾಲ್ಗೆ ನೀಡಿದ್ದು, ನಂತರ ದಾದನು ಇದನ್ನು ಅಮೋಲ್ ಕಾಳೆಗೆ ನೀಡಿರುತ್ತಾನೆ. ನಂತರ 2017ರ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಅಮೋಲ್ ಕಾಳೆಯು ಅಮಿತ್ ಬದ್ದಿ ಮತ್ತು ಗಣೇಶ್ ಮಿಸ್ಕಿನ್ ರವರಿಗೆ ಗೌರಿ ಲಂಕೇಶ್ ರವರ ಕಚೇರಿ ವಿಳಾಸ ನೀಡಿ ಸದರಿ ಕಚೇರಿಯನ್ನು ಪತ್ತೆ ಮಾಡುವಂತೆ ಮತ್ತು ಗೌರಿ ಲಂಕೇಶ್ ರವರ ಚಲನವಲನಗಳನ್ನು ನಿಗಾವಹಿಸುವಂತೆ ತಿಳಿಸಿರುತ್ತಾನೆ. ಅಮಿತ್ ಬದ್ದಿ ಮತ್ತು ಗಣೇಶ್ ಮಿಸ್ಕಿನ್ ರವರು ಆ ಎರಡು ತಿಂಗಳಲ್ಲಿ ಬೆಂಗಳೂರಿಗೆ ಅನೇಕ ಬಾರಿ ಬಂದು ಗೌರಿ ಲಂಕೇಶ್ ರವರ ಚಲನವಲನಗಳನ್ನು ಗುರುತಿಸಿ ಕಚೇರಿ ಮತ್ತು ಮನೆಯ ವಿಳಾಸಗಳನ್ನು ಖಚಿತಪಡಿಸಿಕೊಂಡು ಅಮೋಲ್ ಕಾಳೆಗೆ ನೀಡಿರುತ್ತಾರೆ.
ಗೌರಿ ಲಂಕೇಶ್ ಹಂತಕನ ಪತ್ತೆಗೆ ನೆರವು ಮಾಡಿದ ಆ 'ಪರೀಕ್ಷೆ' ಯಾವುದು?
ಶೂಟಿಂಗ್ ತರಬೇತಿ ನೀಡಿದ್ದು ಇಲ್ಲಿಯೇ
2017ರ ಮೇ ತಿಂಗಳಲ್ಲಿ ಅಮೋಲ್ ಕಾಳೆಯ ಸೂಚನೆಯಂತೆ ಆರೋಪಿ ಮನೋಹರ್ ಯಡವೆಯು ಗೌರಿ ಲಂಕೇಶ್ ರವರ ಮನೆಯ ಹತ್ತಿರವಿರುವ ಪ್ರದೇಶಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳು ಇತ್ಯಾದಿಗಳು ಇರುವ ಬಗ್ಗೆ ಸರ್ವೆ ನಡೆಸಿ ಅಮೋಲ್ ಕಾಳಗೆ ತಿಳಿಸಿರುತ್ತಾನೆ. 2017ರ ಜೂನ್ ತಿಂಗಳಲ್ಲಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ದಾದ @ ನಿಹಾಲ್ ರವರು ಇದೂವರೆಗೆ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಮತ್ತು ಮನೋಹರ್ ಯಡವೆ ರವರು ಮಾಡಿದ್ದ ಸರ್ವೆಯ ಬಗ್ಗೆ ಪರಿಶೀಲನೆ ನಡೆಸಿ, ಹತ್ಯೆ ನಡೆಸುವ ತಂಡವು ಹೋಗುವ ಮತ್ತು ಬರುವ ದಾರಿಯನ್ನು ಅಂತಿಮಗೊಳಸಿರುತ್ತಾರೆ. ಅದೇ ತಿಂಗಳು ಈ ಗುಂಪಿನ ಅನೇಕ ಸದಸ್ಯರಿಗೆ ಬೆಳಗಾವಿಯ ಚಿಕಾಲೆ ಬಳಿಯ ಆರೋಪಿ ಭರತ್ ಕುರಣೆಗೆ ಸೇರಿದ ಶೆಡ್ನಲ್ಲಿ ರಾಜೇಶ್ ಬಂಗೇರನು ಶೂಟಿಂಗ್ ತರಬೇತಿ ನೀಡಿರುತ್ತಾನೆ.
ಆರೋಪಿಗಳು ಎಲ್ಲೆಲ್ಲಿ ಉಳಿದುಕೊಂಡಿದ್ದರು
2017ರ ಆಗಸ್ಟ್ನ ಮೊದಲನೇ ವಾರ ಆರೋಪಿಗಳಾದ ಅಮೋಲ್ ಕಾಳೆ, ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್, ಪರುಶುರಾಮ್ ವಾಗ್ಮೋರೆ, ಭರತ್ ಕುರಣೆ ರವರು ಬೆಂಗಳೂರಿನಲ್ಲಿ ಆರೋಪಿ ಸುರೇಶ್ ಮನೆಯಲ್ಲಿ ಸೇರಿದ್ದು, ಅಲ್ಲಿ ಅಮೋಲ್ ಕಾಳೆಯು ಹಾಜರಿದ್ದ ಆರೋಪಿಗಳಿಗೆ ಕೃತ್ಯದ ದಿನದಂದು ಅವರು ನಿರ್ವಹಿಸಬೇಕಾದ ನಿರ್ದಿಷ್ಟ ಕೆಲಸಗಳನ್ನು ಹಂಚಿಕೆ ಮಾಡಿರುತ್ತಾನೆ. ನಂತರ ಅಮೋಲ್ ಕಾಳೆಯು ಆರೋಪಿಗಳಿಗೆ ಗೌರಿಲಂಕೇಶ್ ರವರ ಮನೆಯ ಬಳಿ ಹೋಗಿ ಬರುವ ದಾರಿಗಳ ರೂಟ್ ರಿಹರ್ಸಲ್ಗಳನ್ನು ಹಲವಾರು ಬಾರಿ ಮಾಡಿಸಿ ರೂಟ್ಗಳನ್ನು ಖಚಿತಪಡಿಸಿಕೊಂಡಿರುತ್ತಾರೆ. 2017ರ ಆಗಸ್ಟ್ ತಿಂಗಳಲ್ಲಿ ಆರೋಪಿ ಮೋಹನ್ ನಾಯಕನು ಆಕ್ಯುಪಂಚರ್ ಚಿಕಿತ್ಸಾಲಯ ನಡೆಸುವ ನೆಪದಲ್ಲಿ ಆರೋಪಿಗಳು ಉಳಿದುಕೊಳ್ಳಲು ಬೇಕಾಗಿದ್ದ ಮನೆಯನ್ನು ಕುಂಬಳಗೋಡಿನ ತಗಚುಗುಪ್ಪೆಯಲ್ಲಿ ಬಾಡಿಗೆಗೆ ಪಡೆದಿರುತ್ತಾನೆ.
ತನಿಖಾಧಿಕಾರಿಗಳ ಮೇಲೆ ಆರೋಪ, ಗೌರಿ ಹಂತಕರ ತಂತ್ರ: ಎಸ್ಐಟಿ
ಕೊಲೆಗೆ ಬೇಕಾದ ಪಿಸ್ತೂಲು, ಬೈಕು ತರಿಸಿಕೊಂಡರು
2017 ರ ಸೆಪ್ಟಂಬರ್ ತಿಂಗಳ ಪ್ರಾರಂಭದಲ್ಲಿ ಅಮೋಲ್ ಕಾಳೆ ಮತ್ತು ದಾದಾರವರು ಗೌರಿ ಲಂಕೇಶ್ರವರನ್ನು ಹತ್ಯೆ ಮಾಡಲು ಬರುವ ತಂಡದ ಸದಸ್ಯರಿಗೆ ಕೃತ್ಯಕ್ಕೆ ಉಪಯೋಗಿಸಲು ಬೇಕಾದ ಬೈಕ್, ಪಿಸ್ತೂಲ್ ಇತರೆ ಅವಶ್ಯಕ ಸಾಮಾಗ್ರಿಗಳನ್ನು ತಂದು ಮೋಹನ್ ನಾಯಕನು ಕುಂಬಳಗೋಡಿನಲ್ಲಿ ಬಾಡಿಗೆಗಾಗಿ ಪಡೆದಿದ್ದ ಮನೆಯಲ್ಲಿಟ್ಟಿರುತ್ತಾರೆ. ಮಾರನೇ ದಿನ ಅಮೋಲ್ ಕಾಳೆ ಮತ್ತು ದಾದಾ ರವರ ಸೂಚನೆಯಂತೆ ಕೃತ್ಯ ನಡೆಸುವ ತಂಡದ ಸದಸ್ಯರು ಬೆಂಗಳೂರಿಗೆ ಬಂದು ಆರೋಪಿ ಮೋಹನ್ ನಾಯಕ್ ನು ಕುಂಬಳಗೋಡಿನಲ್ಲಿ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ಆರೋಪಿತರಾದ ಅಮೋಲ್ ಕಾಳೆ ಮತ್ತು ದಾದ ರವರು ಮತ್ತೊಬ್ಬ ಆರೋಪಿ ಸುರೇಶ್ ಮನೆಯಲ್ಲಿ ಉಳಿದು ಕೊಂಡಿದ್ದು, ಎಚ್.ಎಲ್ ಸುರೇಶ್ನು ತನ್ನ ಮನೆಯನ್ನು ದಿನಾಂಕ 02.09.2017 ರಿಂದ 06.09.2017 ರವರೆಗೆ ಅಮೋಲ್ ಕಾಳೆ ಮತ್ತು ಇತರರ ಉಪಯೋಗಕ್ಕೆ ನೀಡಿರುತ್ತಾನೆ.
ಸೆಪ್ಟೆಂಬರ್ 4 ರಂದು ಮಾಡಿದ ಯತ್ನ ವಿಫಲ
ಸೆಪ್ಟೆಂಬರ್-04 ರಂದು ಗಣೇಶ್ ಮಿಸ್ಕಿನ್ ಮತ್ತು ಪರಶುರಾಮ್ ವಾಗ್ಮೋರೆ ರವರು ಶಸ್ತ್ರ ಸಜ್ಜಿತರಾಗಿ ಹಿರೋಹೊಂಡಾ ಪ್ಯಾಷನ್ ಪ್ರೋ ಬೈಕ್ ನಲ್ಲಿ ಗೌರಿ ಲಂಕೇಶ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮನೆಯ ಬಳಿ ಹೋಗಿದ್ದು, ಆ ದಿನದ ಯೋಜನೆಯು ವಿಫಲವಾಗಿರುತ್ತದೆ. 2017 ರ ಸೆಪ್ಟೆಂಬರ್ 05 ರಂದು ಹಿಂದಿನ ದಿನದಂತೆಯೇ ಅದೇ ಮೋಟಾರ್ ಬೈಕ್ ನಲ್ಲಿ ಗಣೇಶ್ ಮಿಸ್ಕಿನ್ ಮತ್ತು ಪರಶುರಾಮ್ ವಾಗ್ಮೋರೆ ರವರುಗಳು ಪಿಸ್ತೂಲ್ ಗಳನ್ನು ತೆಗೆದುಕೊಂಡು ಸ್ವಲ್ಪ ಮುಂಚಿತವಾಗಿ ಹೊರಟು ಗೌರಿ ಲಂಕೇಶ್ ರವರ ಮನೆಯ ಬಳಿ ಹೋಗಿ ಕಾಯುತ್ತಿದ್ದು, ಗೌರಿ ಲಂಕೇಶ್ ಅವರು ಬಂದು, ತಮ್ಮ ಕಾರನ್ನು ನಿಲ್ಲಿಸಿ, ಕೆಳಗೆ ಇಳಿದು ತಮ್ಮ ಮನೆಯ ಗೇಟ್ನ್ನು ತೆರೆಯುತ್ತಿದ್ದಾಗ ರಾತ್ರಿ ಸುಮಾರು -800 ರಿಂದ 8-10 ಗಂಟೆ ಸಮಯದಲ್ಲಿ ಪರಶುರಾಮ್ ವಾಗ್ಮೋರೆಯು ತನ್ನ ಬಳಿ ಇದ್ದ ಪಿಸ್ತೂಲಿನಿಂದ 4 ಸುತ್ತು ಗುಂಡುಗಳನ್ನು ಹಾರಿಸಿ ಕೊಲೆ ಮಾಡಿರುತ್ತಾರೆ.
ಕೊಲೆಯ ನಂತರ ತಪ್ಪಿಸಿಕೊಂಡಿದ್ದು ಹೇಗೆ?
ನಂತರ ಇಬ್ಬರೂ ಆರೋಪಿಗಳು ತಮ್ಮ ಬೈಕಿನಲ್ಲಿ ಅಮಿತ್ ಬದ್ದಿ ಮಾರುತಿ ವ್ಯಾನ್ ನೊಂದಿಗೆ ಇದ್ದ ಸ್ಥಳಕ್ಕೆ ಬಂದು ತಮ್ಮ ಬಳಿ ಇದ್ದ ಪಿಸ್ತೂಲ್ಗಳು, ರೌಂಡ್ಸ್ಗಳು, ಇತ್ಯಾದಿಗಳನ್ನು ಆತನಿಗೆ ಕೊಟ್ಟು ಕುಂಬಳಗೋಡು ಮನೆಗೆ ಹೋಗಿ, ಈಗಾಗಲೇ ಕಾರಿನಲ್ಲಿ ಕಾಯುತ್ತಿದ್ದ ಭರತ್ ಕುರಣೆಯೊಂದಿಗೆ ನೆಲಮಂಗಲ ಟೋಲ್ಗೇಟ್ ಹೋಗಿರುತ್ತಾರೆ. ಈ ಮಧ್ಯೆ ಅಮಿತ್ ಬದ್ದಿಯು ತನಗೆ ನೀಡಿದ್ದ ವಸ್ತುಗಳನ್ನು ಮಾರುತಿ ವ್ಯಾನಿನಲ್ಲಿ ಎಚ್.ಎಲ್.ಸುರೇಶ್ನ ಮನೆಗೆ ಸಾಗಿಸಿರುತ್ತಾನೆ. ನಂತರ ಕೃತ್ಯಕ್ಕೆ ಉಪಯೋಗಿಸಿದ್ದ ಪಿಸ್ತೂಲ್ಗಳು, ಗುಂಡುಗಳು ಮತ್ತಿತರೆ ವಸ್ತುಗಳನ್ನು ಅದಕ್ಕಾಗಿ ಗುರುತಿಸಿದ್ದ ಮನೆಯಲ್ಲಿಟ್ಟು ಪರಾರಿಯಾಗಿದ್ದು, ಅದಾದ ಸುಮಾರು ಹತ್ತು ದಿನಗಳ ನಂತರ ಅಮೋಲ್ ಕಾಳೆ ಸೂಚನೆಯಂತೆ, ಆರೋಪಿ ಸುಧನ್ವ ಗೋಂದಳೆಕರ್ ಮತ್ತು ಅಮಿತ್ ಬದ್ದಿರವರುಗಳು ಬೆಂಗಳೂರಿಗೆ ಬಂದು ಪಿಸ್ತೂಲುಗಳು ಮತ್ತು ಗುಂಡುಗಳಿರುವ ಬ್ಯಾಗ್ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಅನ್ನು ವಾಪಸ್ಸು ತೆಗೆದುಕೊಂಡು ಬೆಳಗಾವಿಗೆ ಹೋಗಿ ಶರದ್ ಕಲಾಸ್ಕರ್ನಿಗೆ ಕೊಟ್ಟು, ತಮ್ಮ ಯೋಜನೆಯನ್ನು ಪೂರ್ಣಗೊಳಿಸಿರುತ್ತಾರೆ. ಈ ಪ್ರಕರಣದಲ್ಲಿ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಧಾರಗಳೊಂದಿಗೆ ದಿನಾಂಕ 23.11.2018 ರಂದು ಎಸ್ಐಟಿಯು ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಆರೋಪಿಗಳು ಕೃತ್ಯಕ್ಕೆ ಬಳಸಲಾಗಿರುವ ಪಿಸ್ತೂಲ್, ತಲೆ ಮರೆಸಿಕೊಂಡಿರುವ ಆರೋಪಿತರ ಪತ್ತೆ ಕಾರ್ಯ ಹಾಗೂ ಇತರೆ ವಿಷಯಗಳ ಬಗ್ಗೆ ತನಿಖೆ ಮುಂದುವರಿದಿದೆ.