ಗೌರಿ ಹತ್ಯೆ ಪ್ರಕರಣ: ಕಳೆದೆರಡು ದಿನದಲ್ಲಿ ಏನೇನಾಯಿತು?
ಬೆಂಗಳೂರು, ಜೂನ್ 13: ರಾಜ್ಯ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಕುತೂಹಲ ಕೆರಳಿಸಿರುವ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕಳೆದೆರಡು ದಿನದಿಂದ ಹೆಚ್ಚಿನ ಚುರುಕು ಪಡೆದುಕೊಂಡಿದೆ.
ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಅವರನ್ನು ಎಸ್ಐಟಿಯು ನಿನ್ನೆ ಬಂದಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆತನ ಜೊತೆಗೆ ಸುನಿಲ್ ಅಗಸರ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ಎಸ್ಐಟಿ ಬಂಧಿಸಿರುವ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಏನು?
ಪರಶುರಾಮ್ ವಾಗ್ಮೋರೆ ಅವರ ವಿಚಾರಣೆ ನಡೆಯುತ್ತಿದ್ದು, ಆತನೇ ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿದವ ಎಂದು ಎಸ್ಐಟಿ ಹೇಳುತ್ತಿದೆ. ಈ ಎರಡು ದಿನದಲ್ಲಿ ಗೌರಿ ಹತ್ಯೆ ಪ್ರಕರಣದಲ್ಲಿ ಏನೇನಾಯಿತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ..
ಗೌರಿಲಂಕೇಶ್ ಹತ್ಯೆ: ಹಿಂದೂ ಸಂಘಟನೆ ಪಾತ್ರದ ಬಗ್ಗೆ ಸ್ಫೋಟಕ ಮಾಹಿತಿ
ಪರಶುರಾಮ್ ವಾಗ್ಮೋರೆ ಬಂಧನ
ಎಸ್ಐಟಿ ಪೊಲೀಸರು ನಿನ್ನೆ (ಜೂನ್ 13) ಸಿಂಧಗಿಯ ಪರಶುರಾಮ್ ವಾಗ್ಮೋರೆ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಆತನೇ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದವ ಎಂದು ಎಸ್ಐಟಿ ವಾದಿಸಿತು. ನ್ಯಾಯಾಲಯವು ಪರಶುರಾಮ್ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಪರಶುರಾಮ್ ಜೊತೆಗೆ ಸುನಿಲ್ ಅಗಸರ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ ಆದರೆ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ಲ. ಪರಶುರಾಮ್ನನ್ನು ಎಲ್ಲಿ ಬಂಧಿಸಿದ್ದು ಎಂಬ ಬಗ್ಗೆ ಮಾಹಿತಿಯನ್ನು ಎಸ್ಐಟಿ ಬಹಿರಂಗ ಪಡಿಸಿಲ್ಲ.
ಪರಶುರಾಮ್ ವಾಗ್ಮೋರೆ ಹಿನ್ನೆಲೆ
ಪರಶುರಾಮ್ ವಾಗ್ಮೋರೆ ಸಿಂಧಗಿಯವನಾಗಿದ್ದು, ಆತ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದಾನೆ. ಈತ ಶ್ರೀರಾಮಸೇನೆಯ ಕಾರ್ಯಕರ್ತನಾಗಿದ್ದು, ಈತನ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿದ ಕೇಸೊಂದು ಆರು ವರ್ಷದ ಹಿಂದೆ ದಾಖಲಾಗಿದೆ. ಇನ್ನು ಸುನಿಲ್ ಅಗಸರ ಕೂಡಾ ಶ್ರೀರಾಮಸೇನೆ ಕಾರ್ಯಕರ್ತನಾಗಿದ್ದು ಆತ ಇಸ್ತ್ರೀ ಅಂಗಡಿ ಇಟ್ಟುಕೊಂಡಿದ್ದಾನೆ. ಇಬ್ಬರೂ ಬಡ ಕುಟುಂಬದವರು ಅವರು ಕೊಲೆಯಂತಹಾ ಘೋರ ಅಪರಾಧದಲ್ಲಿ ತೊಡಗಿರಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು, ಸ್ನೇಹಿತರು ಹೇಳುತ್ತಿದ್ದಾರೆ.
ಪರಶುರಾಮ್ ಸುಳಿವು ಸಿಕ್ಕಿದ್ದು ಹೇಗೆ
ಭಗವಾನ್ ಹತ್ಯೆ ಸಂಚಿನ ಆರೋಪದಲ್ಲಿ ಬಂಧಿತನಾಗಿರುವ ಪ್ರವೀಣ್ ಎಂಬಾತ ಪರಶುರಾಮ್ನಿಂದ ಬಂದೂಕು ಪಡೆದುದಾಗಿ ಹೇಳಿಕೆ ನೀಡಿದ್ದ. ಅಲ್ಲದೆ ಆತನು ಬಂದೂಕು ಚಲಾವಣೆ ಮಾಡುವ ತರಬೇತಿ ಪಡೆದಿದ್ದ ಎನ್ನಲಾಗಿದೆ. ಪರಶುರಾಮ್ ಬೆಂಗಳೂರಿಗೆ ಬಂದಿದ್ದಾಗ ಹಲವು ಬಾರಿ ನವೀನ್ ಕುಮಾರ್ಗೆ ಕರೆ ಮಾಡಿದ್ದ ಹಾಗಾಗಿ ಎಸ್ಐಟಿಯು ಪರಶುರಾಮ್ನನ್ನು ಬಂಧಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಹೇಳಿಕೆ
ಬಂಧಿತ ಪರಶುರಾಮ್ ಹಾಗೂ ಸುನಿಲ್ ಶ್ರೀರಾಮ ಸೇನೆಗೆ ಸೇರಿದವರು ಎನ್ನುತ್ತಿದ್ದಂತೆ ಹೇಳಿಕೆ ನೀಡಿದ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆತ ಸಂಘಟನೆಯವನಲ್ಲ ಎಂದರು. ಆದರೆ ಆ ವೇಳೆಗಾಗಲೇ ಪ್ರಮೋದ್ ಮುತಾಲಿಕ್ ಜೊತೆಗಿನ ಪರಶುರಾಮ್ ಫೊಟೊ ವೈರಲ್ ಆಗಿತ್ತು.
ನ್ಯಾಯಾಲಯಕ್ಕೆ ಮೊರೆ ಹೋದ ಹೊಟ್ಟೆ ಮಂಜ
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೊದಲಿಗೆ ಬಂಧಿತನಾದ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಜಾಮೀನು ಕೊರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಪೊಲೀಸರು ಮಾನಸಿಕ, ದೈಹಿಕ ಕಿರುಕುಳ ನೀಡುತ್ತಾರೆ ಎಂದು ಆತ ನ್ಯಾಯಾಲಯದಲ್ಲಿ ದೂರು ಹೇಳಿದ್ದಾನೆ. ಆತನ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.
ಧರ್ಮ ರಕ್ಷಕ ಪಟ್ಟ ನೀಡಿದ ಶ್ರೀರಾಮ ಸೇನೆ
ಪರಶುರಾಮ್ ವಾಗ್ಮೋರೆಯನ್ನು ಶ್ರೀರಾಮ ಸೇನೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಸದಸ್ಯರು ಬೆಂಬಲಿಸಿ ಪೋಸ್ಟ್ ಹಾಕಿದ್ದಾರೆ. ಮುಖ್ಯವಾಗಿ ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದುಗೋಲ್ ಅವರು ಫೇಸ್ಬುಕ್ನಲ್ಲಿ ಪರಶುರಾಮ್ನನ್ನು ಧರ್ಮ ರಕ್ಷಕ ಎಂದು ಹೊಗಳಿದ್ದಾರೆ.
ಪ್ರಗತಿಪರರಿಗೆ ಹೆಚ್ಚಿದ ಭದ್ರತೆ
ಗೌರಿ ಹತ್ಯೆ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ವಿಚಾರವಾದಿಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಸಾಹಿತಿ ಭಗವಾನ್ಗೆ ಈಗಾಗಲೇ ಭದ್ರತೆ ನೀಡಲಾಗಿದ್ದು. ಇಂದು ಮೈಸೂರಿನ ಪ್ರೊಫೆಸರ್ ಮಹೇಶ್ ಚಂದ್ರ ಗುರು ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.