ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?
ಬೆಂಗಳೂರು, ಸೆಪ್ಟೆಂಬರ್ 04: ಇಂದಿಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ಸರಿಯಾಗಿ ಒಂದು ವರ್ಷವಾಗುತ್ತದೆ. ಎಸ್ಐಟಿಯು ಗೌರಿ ಹತ್ಯೆ ತನಿಖೆಯನ್ನು ಶಕ್ತವಾಗಿ ನಿರ್ವಹಿಸುತ್ತಿದೆ. ಪ್ರಕರಣದ ಅಂತಿಮ ಘಟ್ಟಕ್ಕೆ ಕೆಲವು ಹೆಜ್ಜೆಗಳಷ್ಟೆ ಬಾಕಿ ಉಳಿದಿದೆ.
ಕಳೆದ ವರ್ಷ ಸೆಪ್ಟೆಂಬರ್ 5 ರಂದು ಸಂಜೆ ವೇಳೆಗೆ ತಮ್ಮ ಕಚೇರಿಯಿಂದ ರಾಜಾಜಿನಗರದ ತಮ್ಮ ನಿವಾಸಕ್ಕೆ ವಾಪಸ್ಸಾಗಿದ್ದ ಗೌರಿ ಲಂಕೇಶ್ ಅವರನ್ನು ಬೈಕಿನಲ್ಲಿ ಬಂದ ಇಬ್ಬರು ಅಗಂತುಕರು ಹತ್ಯೆ ಮಾಡಿದ್ದರು. ಒಬ್ಬ ಬೈಕ್ ಚಲಾಯಿಸಿದರೆ ಇನ್ನೊಬ್ಬ ಗೌರಿ ಎದೆಗೆ ಗುಂಡು ಹೊಡೆದಿದ್ದ.
ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ!
ಗೌರಿ
ಲಂಕೇಶ್
ಅವರನ್ನು
ಹತ್ಯೆ
ಮಾಡಿದ
ಬೆನ್ನಲ್ಲೆ
ರಾಜ್ಯದಲ್ಲಿ
ಮಾತ್ರವಲ್ಲ
ದೇಶದಾದ್ಯಂತ
ಭಾರಿ
ವಿರೋಧ
ವ್ಯಕ್ತವಾಯಿತು.
ಹಲವಾರು
ಪ್ರತಿಭಟನೆಗಳು
ನಡೆದವು.
ಪ್ರಕರಣವನ್ನು
ಆಗಿನ
ಸಿದ್ದರಾಮಯ್ಯ
ಸರ್ಕಾರವು
ಎಸ್ಐಟಿ
ಪೊಲೀಸರಿಗೆ
ವಹಿಸಿತು.
ಆರಂಭದಲ್ಲಿ
ಸಾಕ್ಷಿಗಳು
ಸಿಗದೇ
ಮಂದಗತಿಯಲ್ಲಿ
ಸಾಗಿದ್ದ
ತನಿಖೆ
ಆ
ನಂತರ
ಬಿರುಸು
ಪಡೆದುಕೊಂಡಿತು.
ಪ್ರಕರಣದ ತನಿಖೆಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ....
ಕೊಲೆ ನಡೆದ ಆರು ತಿಂಗಳ ಬಂತರ ಮೊದಲ ಸುಳಿವು
ಗೌರಿ ಲಂಕೇಶ್ ಅವರ ಕೊಲೆ ನಡೆದ ಆರು ತಿಂಗಳ ನಂತರ ಎಸ್ಐಟಿಗೆ ಕೊಲೆಯ ಬಗ್ಗೆ ಮೊದಲ ನಿಖರವಾದ ಸುಳಿವು ಸಿಕ್ಕಿತು ಅದೂ ಕೆ.ಟಿ.ನವೀನ್ಕುಮಾರ್ ಎಂಬುವನ ಬಂಧನದಿಂದ. ಅಕ್ರಮ ಶಸ್ತಾಸ್ತ್ರ ಹೊಂದಿದ್ದ ನವೀನ್ ಕುಮಾರ್ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದರು. ಆತನನ್ನು ವಿಚಾರಣೆ ನಡೆಸಿದ ಎಸ್ಐಟಿ ಆತನಿಂದ ಬಹುಮುಲ್ಯ ಮಾಹಿತಿಯನ್ನು ಹೊರತೆಗೆಯಿತು. ವಿಚಿತ್ರವೆಂದರೆ ಆತನಿಗೆ ಗೌರಿ ಹತ್ಯೆಯೊಂದಿಗೆ ನೇರ ಸಂಪರ್ಕ ಇರಲೇ ಇಲ್ಲ.
ಗೌರಿಗೆ ಗುಂಡಿಕ್ಕಿದ್ದು ವಾಘ್ಮೋರೆಯೇ: ಎಫ್ಎಸ್ಎಲ್ ವರದಿಯಿಂದ ದೃಢ
ಗೌರಿ ಹತ್ಯೆಯಾದ ಎಂಟು ತಿಂಗಳ ನಂತರ ಮೊದಲ ಬಂಧನ
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನ ವಾಗಿದ್ದು ಗೌರಿ ಹತ್ಯೆಯಾದ ಎಂಟು ತಿಂಗಳ ನಂತರ. ಕೆ.ಟಿ.ನವೀನ್ ಕುಮಾರ್ ನೀಡಿದ ಮಾಹಿತಿ ಆಧರಿಸಿ ಉಡುಪಿಯ ನಿವಾಸಿ ಪ್ರವೀಣ್ ಅಲಿಯಾಸ್ ಸುಜಿತ್ನನ್ನು ಎಸ್ಐಟಿ ಪೊಲೀಸರು ಮೇ 15ರಂದು ಬಂಧಿಸಿದರು. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ನವೀನ್ ಕುಮಾರ್ನಿಂದ ಮಾಹಿತಿ ಪಡೆಯಲು ಎಸ್ಐಟಿ ಬಹಳ ಕಷ್ಟಪಡಬೇಕಾಯಿತು. ಕೊನೆಗೆ ಮಂಪರು ಪರೀಕ್ಷೆಗೂ ಯತ್ನಿಸಲಾಯಿತು.
ಗೌರಿ ಹತ್ಯೆಗೆ ವರ್ಷ, ಕಲ್ಬುರ್ಗಿ ಕೊಲೆಗೆ ಮೂರು ವರ್ಷ: ಮುಂದೇನು?
ಮಾಸ್ಟರ್ ಮೈಂಡ್ಗಳ ಬಂಧನ
ಪ್ರವೀಣ್ ಅಲಿಯಾಸ್ ಸುಜಿತ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಕೃತ್ಯದ ಮಾಸ್ಟರ್ ಮೈಂಡ್ಗಳ ಬಗ್ಗೆ ಮಾಹಿತಿ ಹೊರಬಂದಿತು. ಎಸ್ಐಟಿ ಪೊಲೀಸರು ಮಹಾರಾಷ್ಟ್ರ ಮೂಲದ ಅಮಿತ್ ಕಾಳೆ, ಅಮಿತ್ ದೆಗ್ವೇಕರ್ ಅವರುಗಳನ್ನು ದಾವಣಗೆರೆಯಲ್ಲಿ ಮೇ 21ನೇ ತಾರೀಖಿನಂದು ಬಂಧಿಸಿದರು. ಅಂದೇ ವಿಜಯಪುರದ ರತ್ನಾಪುರ ಗ್ರಾಮದ ಮನೋಹರ ಯಡವೆಯನ್ನು ಪೊಲೀಸರು ಬಂಧಿಸಿದರು. ಕೃತ್ಯದ ಮಾಸ್ಟರ್ ಮೈಂಡ್ ಅಮಿತ್ ಕಾಳೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ. ಅಮಿತ್ ದೆಗ್ವೇಕರ್ ಪುಣೆಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದ.
ಎಸ್ಐಟಿ ವಿಚಾರಣೆ ವೇಳೆ ಮಂತ್ರ ಪಠಿಸುತ್ತಾರೆ ಗೌರಿ ಹಂತಕರು
ಗೌರಿಗೆ ಗುಂಡು ಹೊಡೆದವನ ಬಂಧನ
ಗೌರಿ ಲಂಕೇಶ್ ಅವರಿಗೆ ಗುಂಡು ಹೊಡೆದಿದ್ದ ಪರಶುರಾಮ ವಾಘ್ಮೋರೆಯನ್ನು ಸಿಂಧಗಿಯಲ್ಲಿ ಎಸ್ಐಟಿ ಪೊಲೀಸರು ಜುಲೈ 7 ರಂದು ಬಂಧಿಸಿದರು. ಪರಶುರಾಮ ವಾಘ್ಮೋರೆಯ ಬಂಧನದ ವರೆಗೆ ಎಸ್ಐಟಿ ಪೊಲೀಸರಿಗೆ ಪ್ರಕರಣದ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲವೆಂದೇ ಹೇಳಲಾಗುತ್ತದೆ. ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಮನೋಹರ ಯಡವೆ ಅವರುಗಳು ಎಸ್ಐಟಿ ಅವರ ತನಿಖೆಗೆ ಸಹಕರಿಸಿರಲಿಲ್ಲ. ಆದರೆ ಪರಶುರಾಮ್ ವಾಘ್ಮೋರೆ ಬಂಧನದ ಬಳಿಕ ತನಿಖೆಗೆ ನಿರ್ದಿಷ್ಟ ರೂಪ ಬಂದಿತು. ಪರಶುರಾಮ ವಾಘ್ಮೋರೆ ಕೊಲೆಯ ಬಗ್ಗೆ ತನಗೆ ಗೊತ್ತಿದ್ದ ಎಲ್ಲ ಮಾಹಿತಿಯನ್ನು ಎಸ್ಐಟಿ ಜೊತೆಗೆ ಹಂಚಿಕೊಂಡಿದ್ದ ಎಂದು ಎಸ್ಐಟಿ ಹೇಳಿದೆ.
ಪರಶುರಾಮ್ ವಾಘ್ಮೋರೆ ಬಳಿಕ ಬಿಚ್ಚಿಕೊಂಡ ಸತ್ಯಗಳು
ಪರಶುರಾಮ್ ವಾಘ್ಮೋರೆ ಬಳಿಕ ಜಾಲದ ಆಳ-ಅಗಲದ ಬಗ್ಗೆ ಎಸ್ಐಟಿ ಪೊಲೀಸರಿಗೆ ಮಾಹಿತಿ ಗೊತ್ತಾಯಿತು. ಪರಶುರಾಮ್ ವಾಘ್ಮೋರೆಗೆ ಕೊಲೆ ಮಾಡಲು ಶಸ್ತ್ರಾಸ್ತ್ರ ತರಬೇತಿ ಕೊಡಿಸಲಾಗಿತ್ತು. ಪರಶುರಾಮ್ಗೆ 10000 ಹಣ ನೀಡಲಾಗಿತ್ತು. ಒಬ್ಬರನ್ನೊಬ್ಬರು ಪರಸ್ಪರ ಮಾತನಾಡಲು ಕೋಡ್ವರ್ಡ್ಗಳ ಬಳಕೆ, ಕಾಯಿನ್ ಬೂತ್ ಬಳಕೆ, ಕೊಲೆಯ ಹಿಂದಿನ ತಯಾರಿ, ಕೊಲೆಯಲ್ಲಿ ಭಾಗಿಯಾಗಿದ್ದ ಇನ್ನಷ್ಟು ಜನರ ಬಗ್ಗೆ ಮಾಹಿತಿ, ಕೊಲೆಗೆ ಬಳಸಿದ್ದ ಆಯುಧಗಳ ಬಗ್ಗೆ ಮಾಹಿತಿ, ಕೊಲೆ ಮಾಡಲು ಬಂದಾಗ ವಾಸವಿದ್ದ ಸ್ಥಳಗಳು, ಕೊಲೆ ಮಾಡುವ ಮುನ್ನಾ ವಹಿಸಿದ್ದ ಎಚ್ಚರಿಕೆ ಎಲ್ಲವನ್ನೂ ಪರಶುರಾಮ್ ಎಸ್ಐಟಿ ಪೊಲೀಸರ ಮುಂದೆ ಹೇಳಿಬಿಟ್ಟ.
ಗಣೇಶ್ ವಿಸ್ಕಿನ್ ಅಮಿತ್ ಬದ್ದಿ ಬಂಧನ
ಪರಶುರಾಮ್ ವಾಘ್ಮೋರೆ ಗೌರಿ ಮೇಲೆ ಗುಂಡು ಹಾರಿಸಿದ ದಿನ ಆತನನ್ನು ಅಲ್ಲಿಗೆ ಕರೆತಂದ, ಕೃತ್ಯದ ಬಳಿಕ ಅಲ್ಲಿಂದ ಕರೆದುಕೊಂಡು ಹೋದವ ಗಣೇಶ್ ವಿಸ್ಕಿನ್ ಎನ್ನಲಾಗಿದೆ. ಅಮಿತ್ ಬದ್ದಿ ಸಹ ಹತ್ಯೆಗೆ ಬೆಂಬಲ ನೀಡಿದ್ದ ಎಂದು ಎಸ್ಐಟಿ ಆರೋಪ ಮಾಡಿದೆ. ಈ ಇಬ್ಬರನ್ನೂ ಹುಬ್ಬಳ್ಳಿಯಲ್ಲಿ ಎಸ್ಐಟಿ ಪೊಲೀಸರು ಜುಲೈ 20ರಂದು ಬಂಧಿಸಿದ್ದರು. ಅಮಿತ್ ಬದ್ದಿ ಮತ್ತು ಗಣೇಶ ವಿಸ್ಕಿನ್ ಕಲ್ಬುರ್ಗಿ ಕೊಲೆಯಲ್ಲೂ ಭಾಗಿಯಾಗಿದ್ದಾರೆ. ಅಮಿತ್ ಬದ್ದಿಯೇ ಕಲಬುರ್ಗಿ ಅವರಿಗೆ ಗುಂಡು ಹೊಡೆದವ ಎನ್ನಲಾಗಿದೆ. ಈ ಇಬ್ಬರನ್ನೂ ಸಿಬಿಐ ಸಹ ವಿಚಾರಣೆ ನಡೆಸಿದೆ.
ಹಂತಕರಿಗೆ ಆಶ್ರಯ ನೀಡಿದ್ದವನ ಸೆರೆ
ಪರಶುರಾಮ್ ವಾಘ್ಮೋರೆ, ಅಮೋಲ್ ಕಾಳೆ, ಸುಜಿತ್, ಅಮಿತ್ ದೆಗ್ವಾಲ್ಕರ್ ಅವರುಗಳಿಗೆ ಆಶ್ರಯ ನೀಡಿದ್ದ ಮೋಹನ್ ನಾಯಕ್ ಎಂಬ ಆಯುರ್ವೇದ ವೈದ್ಯನನ್ನು ಎಸ್ಐಟಿಯು ಜುಲೈ 23ರಂದು ಸುಳ್ಯದ ಬಳಿ ಬಂಧಿಸಿತು. ಮೋಹನ್ ನಾಯಕ್ ಬೆಂಗಳೂರಿನ ಕುಂಬಳಗೋಡುವಿನಲ್ಲಿ ಆಯುರ್ವೇದ ಚಿಕಿತ್ಸಾ ಕೇಂದ್ರ ಇಟ್ಟುಕೊಂಡಿದ್ದ ಅಲ್ಲಿಯೇ ಹಂತಕರಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದ. ಗೌರಿ ಕೊಲೆಯಾದ ಕೆಲವು ದಿನಗಳ ನಂತರ ಈತ ಕ್ಲಿನಿಕ್ ಬಾಗಿಲು ಹಾಕಿಕೊಂಡು ಹೊರಟುಹೋಗಿದ್ದ. ಬಂಧನದ ಭೀತಿಯಿಂದ ಕಾರಿನ ನಂಬರ್ ಪ್ಲೇಟ್ಗೆ ಮಣ್ಣು ಉಜ್ಜಿಕೊಂಡು ಓಡಾಡುತ್ತಿದ್ದ. ಹೆಚ್ಚು ಹೊತ್ತು ಮನೆಯಲ್ಲಿಯೇ ಕಳೆಯುತ್ತಿದ್ದ. ಪರಶುರಾಮ್ ವಾಘ್ಮೋರೆಯ ಸುಳಿವಿನ ಮೇರೆಗೆ ಈತನನ್ನು ಬಂಧಿಸಲಾಯಿತು.
ಶಸ್ತ್ರಾಸ್ತ್ರ ಚಲಾವಣೆ ತರಬೇತುದಾರ ಸೆರೆ
ಪರಶುರಾಮ್ ವಾಘ್ಮೋರೆ ಸೇರಿದಂತೆ ಅಮೋಲ್ ಕಾಳೆ ಕಳುಹಿಸುತ್ತಿದ್ದ ಹುಡುಗರಿಗೆಲ್ಲಾ ಶಸ್ತ್ರಾಸ್ತ್ರ ಚಲಾವಣೆ ತರಬೇತಿ ನೀಡುತ್ತಿದ್ದ ಮಡಿಕೇರಿಯ ರಾಜೇಶ್ ಬಂಗೇರಾನನ್ನು ಜುಲೈ 23ರಂದು ಎಸ್ಐಟಿ ಪೊಲೀಸರು ಬಂಧಿಸಿದರು. ಈತ ಸರ್ಕಾರಿ ನೌಕರನಾಗಿದ್ದ. ವಿಧಾನಸಭಾ ಪರಿಷತ್ ಸದಸ್ಯೆ ಒಬ್ಬರ ಆಪ್ತ ಕಾರ್ಯದರ್ಶಿಯೂ ಆಗಿದ್ದ. ಪರಶುರಮ್ ವಾಘ್ಮೋರೆಗೆ ಸೇರಿದಂತೆ ಇನ್ನೂ ಕೆಲವರಿಗೆ ಈತ ಬಂದೂಕು ಚಲಾಯಿಸುವುದು ತರಬೇತಿ ನೀಡಿದ್ದ. ಈತನ ಬಳಿ ತರಬೇತಿ ಪಡೆದ ಇತರರನ್ನೂ ಪೊಲೀಸರು ಬಂಧಿಸಿದ್ದು ಅವರನ್ನು ಸಾಕ್ಷಿಗಳಾಗಿ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ.
ಸಾಕ್ಷಿ ನಾಶ ಮಾಡಿದ್ದ ಆರೋಪಿಯ ಬಂಧನ
ತುಮಕೂರಿನ ಎಚ್.ಎಲ್.ಸುರೇಶ್ ಎಂಬಾತನನ್ನು ಎಸ್ಐಟಿ ಪೊಲೀಸರು ಜುಲೈ 25ರಂದು ತುಮಕೂರಿನಲ್ಲಿ ಬಂಧಿಸಿದ್ದರು. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಈತ. ಆ ನಂತರ ಸಿವಿಲ್ ಗುತ್ತಿಗೆದಾರನಾದ. ಬೆಂಗಳೂರಿನಲ್ಲಿ ಇರುವಾಗ ಗೌರಿ ಹಂತಕರಿಗೆ ಆಶ್ರಯ ನೀಡಿದ್ದ ಅಲ್ಲದೆ. ಕೊಲೆ ಮುಗಿದ ನಂತರ ಸಾಕ್ಷ ಮಾಡುವ ಜವಾಬ್ದಾರಿಯನ್ನು ಅಮೋಲ್ ಕಾಳೆ ಈತನಿಗೆ ವಹಿಸಿದ್ದ. ಅದರಂತೆ ಈತ ಅಂದು ಪರಶುರಾಮ್ ವಾಘ್ಮೋರೆ ಮತ್ತು ಗಣೇಶ್ ವಿಸ್ಕಿನ್ ತೊಟ್ಟಿದ್ದ ಬಟ್ಟೆ, ಹೆಲ್ಮೆಟ್ ಅನ್ನು ಸುಟ್ಟು ಹಾಕಿದ್ದ.
ಬೆಳಗಾವಿಯಲ್ಲಿ ಭರತ್ ಕುರ್ನೆ ಬಂಧನ
ಬೆಳಗಾವಿಯ ಭರತ್ ಕುರ್ನೆ ಎಂಬಾತನನ್ನು ಎಸ್ಐಟಿ ಪೊಲೀಸರು ಆಗಸ್ಟ್ 08ರಂದು ಬಂಧಿಸಿದರು. ಗೌರಿ ಹತ್ಯೆ ಸಂಚು ಆರಂಭಿಕ ಹಂತದಲ್ಲಿದ್ದಾಗ ಈತನೇ ಹತ್ಯೆಗೆ ಸಹಕಾರ ನೀಡಿದ್ದ. ಬೆಳಗಾವಿಯ ತನ್ನ ರೆಸ್ಟೋರೆಂಟ್ನಲ್ಲಿ ಹಂತಕರು ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಎಂದು ಎಸ್ಐಟಿ ಹೇಳಿದೆ. ಒಟ್ಟು 12 ಜನರನ್ನು ಎಸ್ಐಟಿ ಪೊಲೀಸರು ಈವರೆಗೆ ಬಂಧಿಸಿದ್ದಾರೆ. ನೂರಾರು ಜನರನ್ನು ವಿಚಾರಣೆ ಮಾಡಿದ್ದಾರೆ.