ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?
ಬೆಂಗಳೂರು, ನವೆಂಬರ್ 26: ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಎಸ್ಐಟಿ ತಂಡವು ಬಹುತೇಕ ಪೂರೈಸಿದೆ. ಇತ್ತೀಚೆಗಷ್ಟೆ 9000 ಕ್ಕೂ ಅಧಿಕ ಪುಟಗಳ ಹೆಚ್ಚುವರಿ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಎಸ್ಐಟಿ ಅವರು ಒಟ್ಟು 18 ಜನರ ಮೇಲೆ ಆರೋಪ ಹೊರಿಸಿದ್ದಾರೆ. ಅದರಲ್ಲಿ 16 ಜನರನ್ನು ಎಸ್ಐಟಿ ಈಗಾಗಲೇ ಬಂಧಿಸಿದ್ದಾರೆ. ಹತ್ಯೆಯ ಹಿಂದೆ ದೊಡ್ಡ ತಂಡವಿದ್ದು, ಜಾಗರೂಕವಾದ ವ್ಯೂಹವನ್ನು ರಚಿಸಿ ಕೊಲೆ ಮಾಡಿದ್ದರು ಎಂದು ಎಸ್ಐಟಿ ಹೇಳಿದೆ.
ಗೌರಿ ಲಂಕೇಶ್ ಹತ್ಯೆ: ಎಸ್ಐಟಿ ನಡೆಸಿದ ತನಿಖೆಯ ಇಂಚಿಂಚು ಮಾಹಿತಿ
ಹತ್ಯೆಗೆ ಆರೋಪಿಗಳು ಮಾಡಿದ್ದ ತಂತ್ರ, ಎಸ್ಐಟಿಯು ತಂತ್ರಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದ ವಿವರಗಳೆಲ್ಲವೂ ಚಾರ್ಜ್ಶೀಟ್ನಲ್ಲಿದೆ.
ಗೌರಿ ಹತ್ಯೆ ಆರೋಪಿಗಳು ಯಾರ್ಯಾರು, ಅವರ ವಿಳಾಸ ಹಾಗೂ ಕೊಲೆಯಲ್ಲಿ ಅವರ ಪಾತ್ರಗಳೇನು ಎಂಬುದ ಪೂರ್ಣ ಮಾಹಿತಿ ಇಲ್ಲಿದೆ.
ಮಾಸ್ಟರ್ ಮೈಂಡ್ ಅಮೋಲ್ ಕಾಳೆ
ಅಮೋಲ್ ಕಾಳೆ ಅಲಿಯಾಸ್ ಬಾಯಿಸಾಬ್ ಅಲಿಯಾಸ್ ಅರವಿಂದ ರಾಮಚಂದ್ರ, 37 ವರ್ಷದ ಈತ ಫ್ಲಾಟ್ ನ ಅಕ್ಷಯ ಪ್ಲಾಜ, ಮಾನೀಕ್ ಕಾಲೋನಿ, ಚಿಂಚ್ವಾಡ, ಮಹಾರಾಷ್ಟ್ರದ ನಿವಾಸಿ. ಈತನೇ ಗೌರಿ ಹತ್ಯೆಯ ಆರೋಪಿ ನಂ.1 . ಈತನೇ ಈ ಕೊಲೆ ಗ್ಯಾಂಗ್ನ ಬಾಸ್ ಆಗಿದ್ದು ಈತನು ಹೇಳಿದಂತೆಯೇ ಗೌರಿ ಹತ್ಯೆಯ ಉಳಿದ ಆರೋಪಿಗಳು ವರ್ತಿಸಿದ್ದರು.
ಗುಂಡು ಹೊಡೆದ ಪರಶುರಾಮ ವಾಘ್ಮೋರೆ
'ಪರಶುರಾಮ್ ಅಶೋಕ್ ವಾಗ್ಮೋರೆ ಅಲಿಯಾಸ್ ಬಿಲ್ಡರ್ ಅಲಿಯಾಸ್ ಅಶೋಕ್ ವಾಗ್ಮೋರೆ, 27 ವರ್ಷದ ಈ ಯುವಕ ವಾಸವಿದ್ದಿದ್ದು ಬಸವನಗರ, ಸಿಂಧಗಿ, ವಿಜಯಪುರ ಜಿಲ್ಲೆಯಲ್ಲಿ. ಈತನೇ ಗೌರಿ ಲಂಕೇಶ್ಗೆ ಗುಂಡು ಹೊಡೆದದ್ದು.
ಗೌರಿ ಲಂಕೇಶ್ ಹತ್ಯೆ : 6 ಸಾವಿರ ಪುಟದ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ
ಬೈಕ್ ಚಲಾಯಿಸಿದ ಗಣೇಶ್ ವಿಸ್ಕಿನ್
ಮೂರನೇ ಆರೋಪಿ ಗಣೇಶ್ ಮಿಸ್ಕಿನ್ ಅಲಿಯಾಸ್ ಮಿಥುನ್ ಬಿನ್ ದಶರಥ, 27 ವರ್ಷ, ಚೈತನ್ಯ ನಗರ, ಆರ್.ಎನ್ ಕಾಲೋನಿ ಹುಬ್ಬಳ್ಳಿ. ಈತನೇ ಪರಶುರಾಮ್ ವಾಘ್ಮೋರೆಯನ್ನು ಗಾಡಿಯಲ್ಲಿ ಕೊಲೆಯ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು. ಅಮೋಲ್ ಕಾಳೆ ಸೂಚನೆಯಂತೆ ಅಮಿತ್ ಬುದ್ಧಿ ಎಂಬುವನ ಜೊತೆ ಬಂದು ಗೌರಿ ಚಲನ ವಲನಗಳ ಮೇಲೆ ಕಣ್ಣಿಟ್ಟು ವರದಿ ನೀಡಿರುತ್ತಾನೆ.
ವಿಸ್ಕಿನ್ ಜೊತೆಗಾರ ಅಮಿತ್ ಬುದ್ಧಿ
ನಾಲ್ಕನೇ ಆರೋಪಿ ಅಮಿತ್ ಬದ್ದಿ ಅಲಿಯಾಸ್ ಗೋವಿಂದ ಬಿನ್ ರಾಮಚಂದ್ರ ಬದ್ದಿ, ಚನ್ನಮ್ಮ ಸರ್ಕಲ್ ಹತ್ತಿರ, ಹುಬ್ಬಳ್ಳಿ ನಿವಾಸಿ. ಈತ ಗಣೇಶ್ ವಿಸ್ಕಿನ್ ಜೊತೆ ಗೌರಿ ಚಲನವಲನಗಳ ಮೇಲೆ ಕಣ್ಣಿಟ್ಟಿರುತ್ತಾನೆ ಹಾಗೂ ಅಮೋಲ್ ಕಾಳೆಗೆ ವರದಿ ನೀಡಿರುತ್ತಾನೆ.
ಗೌರಿ ಹತ್ಯೆಗೆ ವರ್ಷ: ತನಿಖೆಯಲ್ಲಿ ಇಲ್ಲಿವರೆಗೆ ನಡೆದಿರುವುದೇನು?
ಐದು ಮತ್ತು ಆರನೇ ಆರೋಪಿಗಳು
ಐದನೇ ಆರೋಪಿ ಅಮಿತ್ ದೆಗ್ವೇಕರ್ ಬಿನ್ ರಾಮಚಂದ್ರ ದೆಗ್ವೇಕರ್, 38 ವರ್ಷ, ಕಲ್ನೆ ಗ್ರಾಮ, ದೋ ತಾಲ್ಲುಕು, ಸಿಂಧುದುರ್ಗ್ ಜಿಲ್ಲೆ, ಮಹಾರಾಷ್ಟ್ರ. ಈತ ಅಮೋಲ್ ಕಾಳೆಯ ಆಪ್ತನಾಗಿದ್ದು ತಂತ್ರಗಾರಿಕೆಯಲ್ಲಿ ಕಾಳೆಗೆ ಸಹಾಯ ಮಾಡಿದ್ದಾನೆ. ಆರನೇ ಆರೋಪಿ ಭಾರತ್ ಕುರಣೆ @ ಆಂಕಲ್ ಬಿನ್ ಜಯವಂತ ಕುರಣೆ 37 ವರ್ಷ, ವೀರ ಮಹಾಧ್ವಾರ ರಸ್ತೆ, ಬೆಳಗಾವಿ ಈತನೂ ಹತ್ಯೆಗೆ ಸಂಚು ರೂಪಿಸುವಲ್ಲಿ ಮತ್ತು ಪರಶುರಾಮ್ ವಾಘ್ಮೋರೆ ಮತ್ತು ಗಣೇಶ್ ವಿಸ್ಕಿನ್ ತಪ್ಪಿಸಿಕೊಳ್ಳಲು ನೆರವಾಗಿರುತ್ತಾನೆ.
ಹಂತಕರಿಗೆ ಮನೆ ಬಿಟ್ಟುಕೊಟ್ಟಿದ್ದ ಸುರೇಶ್
ಏಳನೇ ಆರೋಪಿ ಸುರೇಶ್ ಎಚ್.ಎಲ್. ಬಿನ್ ಲಕ್ಷ್ಮಣ, 36 ವರ್ಷ, ಕೆ.ಆರ್.ಎಸ್. ಅಗ್ರಹಾರ, ಕುಣಿಗಲ್ ಟೌನ್ ತುಮಕೂರು ಜಿಲ್ಲೆಯವನಾಗಿದ್ದು ಈತ ಹಂತಕರಿಗೆ ಆಶ್ರಯ ಒದಗಿಸಿದ್ದ, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಸಹ ತನ್ನ ಮನೆಯನ್ನು ನೀಡಿದ್ದ. ಎಂಟನೇ ಆರೋಪಿ ರಾಜೇಶ್ ಡಿ. ಭಂಗೇರ @ ಸರ್ ಬಿನ್ ಲೇಟ್ ದೇರಣ್ಣ, 50 ವರ್ಷ, ಪಾಲೂರು ಗ್ರಾಮ, ಮಡಿಕೇರಿ ಜಿಲ್ಲೆ. ಈತ ಪರಶುರಾಮ ವಾಘ್ಮೋರೆ ಹಾಗೂ ಇತರರಿಗೆ ಗುಂಡು ಹೊಡೆಯುವುದು ಕಲಿಸಿಕೊಟ್ಟಿದ್ದ. ಒಂಬತ್ತನೇ ಆರೋಪಿ ಸುಧನ್ವ ಗೋಂದಳೇಕರ್ ಅಲಿಯಾಸ್ ಪಾಂಡೇಜಿ ಅಲಿಯಾಸ್ ಸುಧೀರ್ ಶಂಕರ್, 39 ವರ್ಷ, ವಾಸ ಕಾರಂಜಿಪೇಟ್, ಸತಾರಾ, ಮಹಾರಾಷ್ಟ್ರ ರಾಜ್ಯ ಈತ ಬೆಂಗಳೂರಿಗೆ ಬಂದು ಹತ್ಯೆಗೆ ಸಂಚು ರೂಪಿಸಲು ನೆರವಾಗಿದ್ದ.
ಗೌರಿ ಲಂಕೇಶ್ ಹಂತಕನ ಪತ್ತೆಗೆ ನೆರವು ಮಾಡಿದ ಆ 'ಪರೀಕ್ಷೆ' ಯಾವುದು?
ಮನೆ ಕೊಡಿಸಿದ್ದ ಮೋಹನ್ ನಾಯಕ್
ಹತ್ತನೇ ಆರೋಪಿ ಶರದ್ ಬಾಹುಸಾಹೇಬ್ ಕಳಾಸ್ಕರ್ @ ಚೋಟೆಬಿನ್ಬಾಬುಸಾಹೇಬ್ 25 ವರ್ಷ,ವಾಸ: ಯಲ್ಲೋರಾ, ಛೇಡಾ ರೋಡ್, ಶಾನಿಮಂದಿರ ಹತ್ತಿರ, ದೌಲತಾಬಾದ್ ಔರಂಗಾಬಾದ್,ತಾಲೋಕ್ ಮಹಾರಾಷ್ಟ್ರ ರಾಜ್ಯ. ಈತ ಶಸ್ತ್ರಾಸ್ತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದ. ಹನ್ನೊಂದನೇ ಆರೋಪಿ ಮೋಹನ್ ನಾಯಕ್ ಎನ್ ಬಿನ್ ವಾಸುದೇವ ನಾಯಕ್, 50 ವರ್ಷ, ಮುಂಡಡ್ಕ, ಸಂಪಾಜೆ, ತಾಲ್ಲೂಕು. ದಕ್ಷಿಣ ಕನ್ನಡ ಜಿಲ್ಲೆ ಈತನು ಆರೋಪಿಗಳಿಗಾಗಿ ಕುಂಬಳಗೋಡುವಿನಲ್ಲಿ ಮನೆ ಮಾಡಿಸಿಕೊಟ್ಟಿರುತ್ತಾನೆ. ಹನ್ನೆರಡನೇ ಆರೋಪಿ ವಾಸುದೇವ್ ಭಗವಾನ್ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್ 29 ವರ್ಷ, ಸಕಾಳಿ ಗ್ರಾಮ, ಯಾವಲ್ ತಾಲೋಕ್ ಜಲಗಾಂವ, ಮಹಾರಾಷ್ಟ್ರ ರಾಜ್ಯ. ಈತ ಬೈಕ್ ಕಳ್ಳ. ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಅನ್ನು ಈತನೇ ಕದ್ದು ಅಮೋಲ್ ಕಾಳೆಗೆ ನೀಡಿದ್ದ.
ಹದಿಮೂರು, ಹದಿನಾಲ್ಕನೇ ಆರೋಪಿ
ಹದಿಮೂರನೇ ಆರೋಪಿ ಸುಜಿತ್ ಕುಮಾರ್ @ ಪ್ರವೀಣ ಬಿನ್ ರಂಗಸ್ವಾಮಿ, ಕಪ್ಪನಹಳ್ಳಿ ಗ್ರಾಮ, ಶಿವಮೊಗ್ಗ ಜಿಲ್ಲೆ. ಈತನೇ ಪರಶುರಾಮ್ ನನ್ನು ಅಮೋಲ್ ಕಾಳೆಗೆ ಸಂಪರ್ಕ ಮಾಡಿಸಿದ್ದು ಎನ್ನಲಾಗಿದೆ. ವಾಸುದೇವ್ ಸೂರ್ಯವಂಶಿ ಬೈಕ್ ಕಳ್ಳತನ ಮಾಡಲು ಸಹ ಸುಜಿತ್ ಕುಮಾರ್ ಸಹಾಯ ಮಾಡಿದ್ದ, ಹದಿನಾಲ್ಕನೇ ಆರೋಪಿ ಮನೋಹರ್ ಯಡವೆ @ ಮನೋಜ್ ಬಿನ್ ದುಂಡಪ್ಪ ಯಡವೆ, 29 ವರ್ಷ, ರತ್ನಾಪುರ ಗ್ರಾಮ ವಿಜಯಪುರ ಜಿಲ್ಲೆ ಈತನು ಗೌರಿ ಚಲನವಲಗಳ ಮೇಲೆ ಕಣ್ಣಿಟ್ಟಿದ್ದ. ಐದಿನೈದನೇ ಆರೋಪಿ ಶ್ರೀಕಾಂತ್ ಪಂಗಾರ್ಕರ್ @ ಪ್ರಾಜಿ ಅಲಿಯಾಸ್ ಜಗನ್ನಾತ ರಾವ್ 40 ವರ್ಷ,ವಾಸ: ಜಲ್ನಾ, ಮಹಾರಾಷ್ಟ್ರ ರಾಜ್ಯ, ಈತನು ಹಂತಕರಿಗೆ ಹಣ ಮತ್ತು ಇತರೆ ಸಹಾಯಗಳನ್ನು ಮಾಡಿದ್ದಾನೆ.
ಹೊಟ್ಟೆ ಮಂಜ ಹದಿನಾರನೇ ಆರೋಪಿ
ಹದಿನಾರನೇ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಈತ ಭಗವಾನ್ ಹತ್ಯೆ ಸಂಚಿನಲ್ಲಿ ಪ್ರಮುಖ ಆರೋಪಿ ಆದರೆ ಈತನಿಗೆ ಅಮೋಲ್ ಕಾಳೆ ಸಂಪರ್ಕ ಇರುತ್ತದೆ. ಈತನನ್ನೇ ಮೊದಲು ಎಸ್ಐಟಿ ಬಂಧಿಸುವುದು, ಈತನಿಂದಲೇ ಅಮೋಲ್ ಕಾಳೆ ಬಂಧನ ಕೂಡ ಸಾಧ್ಯವಾಗಿದ್ದು. ಆದರೆ ಗೌರಿ ಹತ್ಯೆ ಪ್ರಕರಣದಲ್ಲಿ ಈತನ ಕೈವಾಡ ಅಷ್ಟೇನು ಇಲ್ಲ. ಹದಿನೇಳನೇ ಆರೋಪಿ ವಿಕಾಸ್ ಪಾಟೀಲ್ @ ದಾದಾ @ ನಿಹಾಲ್ ಈತನು ಅಮೋಲ್ ಕಾಳೆಗೆ ಬಹು ಆಪ್ತ ಮತ್ತು ಗೌರಿ ಹತ್ಯೆ ತಂತ್ರಗಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದವನು ಆದರೆ ಈತ ಇನ್ನೂ ಎಸ್ಐಟಿ ಕೈಗೆ ಸಿಕ್ಕಿಲ್ಲ. ಹದಿನೆಂಟನೇ ಆರೋಪಿ ಹೃಷಿಕೇಷ್ ದೇವಡೇಕರ್ @ ಮುರುಳಿ ಈತ ಅಮೋಲ್ ಕಾಳೆಗೆ ಆಜ್ಞೆ ನೀಡುತ್ತಿದ್ದಾತ ಎಂದು ಹೇಳಲಾಗುತ್ತಿದೆ ಈತನೂ ಸಹ ಇನ್ನೂ ಎಸ್ಐಟಿ ಕೈಗೆ ಸಿಕ್ಕಿಲ್ಲ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.