ಎಂ.ಎಂ.ಕಲಬುರ್ಗಿ ಕೊಂದವರೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು!
ಬೆಂಗಳೂರು, ಆಗಸ್ಟ್ 01 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಹಿರಿಯ ಸಂಶೋಧ ಎಂ.ಎಂ,ಕಲಬುರ್ಗಿ ಅವರ ಹತ್ಯೆಗೂ ಸಾಮ್ಯತೆ ಇದೆ ಎಂದು ಹಲವಾರು ದಿನದಿಂದ ವಿಶ್ಲೇಷಣೆ ಮಾಡಲಾಗುತ್ತಿತ್ತು. ಗೌರಿ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳೇ ಕಲಬುರ್ಗಿ ಅವರ ಹತ್ಯೆಯಲ್ಲೂ ಪಾಲ್ಗೊಂಡಿದ್ದಾರೆ ಎಂದು ಎಸ್ಐಟಿಗೆ ಸುಳಿವು ಸಿಕ್ಕಿದ್ದು, ತನಿಖೆ ನಡೆಸುತ್ತಿದೆ.
ಹಿರಿಯ ಸಂಶೋಧರ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಆದರೆ, ಇದುವರೆಗೂ ಹತ್ಯೆ ಮಾಡಿದವರು ಯಾರು? ಎಂಬುದು ಪತ್ತೆಯಾಗಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಕಲಬುರ್ಗಿ ಹತ್ಯೆ ಪ್ರಕರಣದ ಸುಳಿವು ಸಿಕ್ಕಿದೆ.
ಗೌರಿ-ಕಲ್ಬುರ್ಗಿ ಹತ್ಯೆಗೆ ಒಂದೇ ಪಿಸ್ತೂಲು ಬಳಕೆ, ಎಸ್ ಐಟಿಯಿಂದ ಖಾತ್ರಿ
ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವರ್ಗಾವಣೆ ಮಾಡಲು ಗೃಹ ಇಲಾಖೆ ಚಿಂತನೆ ನಡೆಸುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಕುಟುಂಬಸ್ಥರು
ಧಾರವಾಡದ ಕಲ್ಯಾಣ ನಗರದ ನಿವಾಸದಲ್ಲಿ 2015ರ ಆಗಸ್ಟ್ 30ರಂದು ಎಂ.ಎಂ.ಕಲಬುರ್ಗಿ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮೂರು ವರ್ಷಗಳು ಕಳೆದರೂ ಹಂತಕರನ್ನು ಇನ್ನೂ ಬಂಧಿಸಲಾಗಿಲ್ಲ.
ಎಸ್ಐಟಿಗೆ ಸಿಕ್ಕ ಮಾಹಿತಿ ಏನು?
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ರಾಜೇಶ್ ಬಂಗೇರ ಮತ್ತು ಗಣೇಶ್ ಮಿಸ್ಕಿನ್ ಎಂ.ಎಂ.ಕಲಬುರ್ಗಿ ಅವರ ಹತ್ಯೆಯಲ್ಲಿಯೂ ಭಾಗಿಯಾಗಿದ್ದಾರೆ. ಎಸ್ಐಟಿಗೆ ತನಿಖೆ ವೇಳೆ ಈ ಕುರಿತು ಮಾಹಿತಿ ಲಭ್ಯವಾಗಿದೆ.
ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಪ್ರತ್ಯೇಕವಾಗಿ ನಡೆಸುವುದೇ ಸೂಕ್ತ ಎಂದು ಎಸ್ಐಟಿ ಗೃಹ ಇಲಾಖೆಗೆ ಸಲಹೆ ನೀಡಿದೆ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.
ಆರೋಪಿಗಳ ವಿವರ
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ರಾಜೇಶ್ ಬಂಗೇರ ಮತ್ತು ಗಣೇಶ್ ಮಿಸ್ಕಿನ್ ಬಂಧಿಸಿದೆ.
* ಅಮೋಲ್ ಕಾಳೆ ಮಹಾರಾಷ್ಟ್ರದವನಾಗಿದ್ದು ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾನೆ. ಮೇ 21ರಂದು ದಾವಣಗೆರೆಯಲ್ಲಿ ಎಸ್ಐಟಿ ಆತನನ್ನು ಬಂಧಿಸಿದೆ.
* ಅಮಿತ್ ದೆಗ್ವೇಕರ್ ಪುಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಅಮೋಲ್ ಕಾಳೆ ಜೊತೆ ಗುರುತಿಸಿಕೊಂಡಿದ್ದ. ಮೇ 21ರಂದು ದಾವಣಗೆರೆಯಲ್ಲಿ ಈತನನ್ನು ಬಂಧಿಸಲಾಗಿದೆ. ಗೌರಿ ಲಂಕೇಶ್ ಚಲನವಲನದ ಬಗ್ಗೆ ಈತ ಮಾಹಿತಿ ಸಂಗ್ರಹಿಸಿದ್ದ.
* ಗಣೇಶ್ ಮಿಸ್ಕಿನ್ ಜುಲೈ 20ರಂದು ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಅಗರ್ ಬತ್ತಿ ತಯಾರಿಕಾ ಕಂಪನಿಯಲ್ಲಿ ಈಗ ಕೆಲಸ ಮಾಡುತ್ತಿದ್ದ. ಗೌರಿ ಹಂತಕನನ್ನು ಬೈಕ್ನಲ್ಲಿ ಕರೆದುಕೊಂಡ ಆರೋಪ ಈತನ ಮೇಲಿದೆ.
* ರಾಜೇಶ್ ಬಂಗೇರನನ್ನು ಜುಲೈ 23ರಂದು ಎಸ್ಐಟಿ ಬಂಧಿಸಿದೆ. ಮಡಿಕೇರಿಯವನಾದ ಈತ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಗನ್ ಬಳಕೆ ಬಗ್ಗೆ ತರಬೇತಿ ನೀಡಿದ ಆರೋಪ ಈತನ ಮೇಲಿದೆ.
ಹಲವು ಸಾಮ್ಯತೆ ಇತ್ತು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ ನಡುವೆ ಹಲವು ಸಾಮ್ಯತೆ ಇದೆ ಎಂದು ಹೇಳಿದ್ದರು. ಬಳಸಿದ ಪಿಸ್ತೂಲ್, ಬೈಕ್ನಲ್ಲಿ ಬಂದ ರೀತಿ, ಹತ್ಯೆಗೆ ಹಾಕಿದ ಸ್ಕೇಚ್ ಎಲ್ಲರದ ನಡುವೆ ಸಾಮ್ಯತೆ ಇತ್ತು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ರಾಜೇಶ್ ಬಂಗೇರ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿದೆ. ಬಂಧಿತರ ವಿಚಾರಣೆ ನಡೆಸುವಾಗ ಕಲಬುರ್ಗಿ ಹತ್ಯೆ ಪ್ರಕರಣದ ವಿವರ ಲಭ್ಯವಾಗಿದೆ.
2 ಸುತ್ತು ಗುಂಡಿ ಹಾರಿಸಿದ್ದರು
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದಲ್ಲಿರುವ ಎಂ.ಎಂ.ಕಲಬುರ್ಗಿ ಅವರ ಮನೆಗೆ ಬೆಳಗ್ಗೆ 8.40ರ ಸುಮಾರಿಗೆ ಇಬ್ಬರು ಅಪರಿಚಿತರು ಆಗಮಿಸಿದ್ದರು. ಮನೆ ಬೆಲ್ ಮಾಡಿದಾಗ ಕಲಬುರ್ಗಿ ಅವರು ಬಾಗಿಲು ತೆರೆದಿದ್ದರು, ಆಗ ಅಪರಿಚಿತರು ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು.
ಹಣೆ ಮತ್ತು ಎದೆಗೆ ಗುಂಡು ಹೊಕ್ಕಿದ್ದರಿಂದ ಎಂ.ಎಂ.ಕಲಬುರ್ಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ, ಚಿಕಿತ್ಸೆ ಫಲಕಾರಿಯಾಗದೇ 77 ವರ್ಷದ ಕಲಬುರ್ಗಿ ಅವರು ಮೃತಪಟ್ಟಿದ್ದರು.
ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ
ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಐಡಿಗೆ ವಹಿಸಿತ್ತು. ಹತ್ಯೆ ನಡೆದು ಮೂರು ವರ್ಷಗಳು ಕಳೆದರೂ ಆರೋಪಿಗಳು ಇನ್ನೂ ಸಿಕ್ಕಿಲ್ಲ.
ಎಸ್ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳು ಕಲಬುರ್ಗಿ ಅವರ ಹತ್ಯೆಯಲ್ಲಿಯೂ ಪಾಲ್ಗೊಂಡಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ. ಆದ್ದರಿಂದ ಕಲಬುರ್ಗಿ ಅವರ ಹತ್ಯೆ ಪ್ರಕರಣವನ್ನು ಎಸ್ಐಟಿಗೆ ನೀಡಲು ಇಲಾಖೆ ಚಿಂತನೆ ನಡೆಸುತ್ತಿದೆ.